
ಗುರುವಾರ, ಮಾರ್ಚ್ 9ರಿಂದ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಆರಂಭವಾಗಲಿದೆ.
ಇನ್ನು ಭಾರತದ ಅನುಭವಿ ವೇಗಿ ಉಮೇಶ್ ಯಾದವ್ ಅವರು ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಸ್ಪಿನ್ನರ್ಗಳಿಗೆ ಹೇಳಿ ಮಾಡಿಸಿದ ಪಿಚ್ನಲ್ಲಿ 35 ವರ್ಷದ ಉಮೇಶ್ ಯಾದವ್ ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ಗಳನ್ನು ಪಡೆದು ಆಸ್ಟ್ರೇಲಿಯಾ ತಂಡದ ರನ್ಗಳಿಗೆ ಕಡಿವಾಣ ಹಾಕಿದರು.
ನಾಗ್ಪುರ ಮೂಲದ ಬಲಗೈ ವೇಗಿ ಉಮೇಶ್ ಯಾದವ್ ಭಾರತದ ನೆಲದಲ್ಲಿ 100ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದಿದ್ದಾರೆ. ಅದರ ಹೊರತಾಗಿಯೂ, ಭಾರತ ತಂಡದ ಅಡುವ 11ರ ಬಳಗದಲ್ಲಿ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಇದೀಗ ಭಾರತ ತಂಡದಲ್ಲಿ ಉಮೇಶ್ ಯಾದವ್ ಅವರ ವೃತ್ತಿಜೀವನದ ಬಗ್ಗೆ ಮಾತನಾಡಿದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್, "ಆತ ತವರಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ತಂಡದ ಮ್ಯಾನೇಜ್ಮೆಂಟ್ನಿಂದ ನಿರಂತರವಾಗಿ ಕಡೆಗಣಿಸಲ್ಪಟ್ಟ ಆಟಗಾರ," ಎಂದು ಹೇಳಿದ್ದಾರೆ.

ಉಮೇಶ್ ಯಾದವ್ ಅವರ ಶ್ರೀಮಂತ ಹಿನ್ನೆಲೆಯ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್, "ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗದಿರುವುದು ಅವರಿಗೆ ನೋಯಿಸಿರಬಹುದು," ಎಂದರು.
"ನೀವು ಉಮೇಶ್ ಯಾದವ್ ಮೂಲವನ್ನು ಅರ್ಥಮಾಡಿಕೊಳ್ಳಬೇಕು. ಅವನು ಕಲ್ಲಿದ್ದಲು ಗಣಿಗಾರನ ಮಗ, ಪೊಲೀಸ್ ಇಲಾಖೆ ಸೇರಲು ಪ್ರಯತ್ನಿಸಿದನು. ಅದು ಆಗದಿದ್ದ ಕಾಲಕ್ಕೆ, ವೇಗದ ಬೌಲಿಂಗ್ಗೆ ಒತ್ತುಕೊಟ್ಟರು. ಆ ಹಂತದಲ್ಲಿ ಅವರ ಬೆಳವಣಿಗೆಯ ದರ ಹೇಗಿತ್ತೆಂದರೆ, 2008ರಲ್ಲಿ ವಿದರ್ಭ ತಂಡಕ್ಕಾಗಿ ಆಡಲು ಪ್ರಾರಂಭಿಸಿದ ನಂತರ, 2010ರಲ್ಲಿ ಭಾರತೀಯ ತಂಡವನ್ನು ಸೇರ್ಪಡೆಗೊಂಡರು," ಎಂದು ಭಾರತದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.
"ಒಂದು ನಿರ್ದಿಷ್ಟ ಕಾಲದವರೆಗೆ ಉತ್ತಮವಾಗಿ ಆಡಿದ ನಂತರ, ಉಮೇಶ್ ಯಾದವ್ ಕಳಪೆ ಫಾರ್ಮ್ಗೆ ಒಳಗಾದರು. ಇದು ಎಲ್ಲ ಆಟಗಾರರಿಗೂ ಕಾಡುವ ಸಮಸ್ಯೆಯಾಗಿದೆ. ಆದರೆ, ಉಮೇಶ್ ಯಾದವ್ ತಂಡದಿಂದ ಕಡೆಗಣಿಸಲ್ಪಟ್ಟರು. ಇದು ಆತನಿಗೆ ನಿಜವಾಗಿಯೂ ನೋವುಂಟು ಮಾಡಿರುತ್ತದೆ. ಪ್ರತಿ ಪಂದ್ಯದಲ್ಲಿ ಎರಡು ಅಥವಾ ಮೂರು ವಿಕೆಟ್ ಪಡೆಯುತ್ತಿದ್ದರು," ಎಂದು ಭಾರತದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದು ಅತ್ಯಂತ ಕಷ್ಟಕರವಾಗಿತ್ತು; ದಿನೇಶ್ ಕಾರ್ತಿಕ್
2021ರ ಐಪಿಎಲ್ ಮೆಗಾ ಹರಾಜಿನಲ್ಲಿ ವೇಗಿ ಉಮೇಶ್ ಯಾದವ್ ಯಾವ ತಂಡಕ್ಕೂ ಮಾರಾಟವಾಗದೆ ಹೋದರು. ಇದು ಕ್ರಿಕೆಟ್ನಲ್ಲಿ ಅವರ ಕಠಿಣ ಸಮಯವಾಗಿತ್ತು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
"ಉಮೇಶ್ ಯಾದವ್ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದ ಸಂದರ್ಭ ಕಷ್ಟದ ಸಮಯ ಎಂದು ನಾನು ಭಾವಿಸುತ್ತೇನೆ. ಅದು ಆತನಿಗೆ ತುಂಬಾ ನೋವುಂಟು ಮಾಡಿರಬೇಕು," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
ಆದರೆ, 2022ರ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಉಮೇಶ್ ಯಾದವ್ ಅವರನ್ನು ಆಯ್ಕೆ ಮಾಡಿದ ನಂತರ, ಉತ್ತಮವಾಗಿ ಮರಳಿದರು. ಉಮೇಶ್ ಯಾದವ್ ಕಳೆದ ವರ್ಷ 12 ಪಂದ್ಯಗಳಿಂದ 16 ವಿಕೆಟ್ಗಳನ್ನು ಪಡೆಯುವ ಮೂಲಕ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ್ದರು.