
ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಗುರುವಾರ, ಮಾರ್ಚ್ 9ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ವಿಶೇಷ ಪ್ರೇಕ್ಷಕರಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಜರಿರಲಿದ್ದಾರೆ.
IND vs AUS 4th Test: ಸರಣಿ ನಿರ್ಣಾಯಕ ಪಂದ್ಯಕ್ಕೆ ಭಾರತ-ಆಸ್ಟ್ರೇಲಿಯಾ ಪ್ರಧಾನಿಗಳ ಉಪಸ್ಥಿತಿ; ಸ್ವಾಗತಕ್ಕೆ ಸಜ್ಜು
ಇನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇಲ್ಲಿಯವರೆಗೆ ಎರಡೂ ತಂಡಗಳ ಬ್ಯಾಟರ್ಗಳು ಅಬ್ಬರಿಸಿಲ್ಲ. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಬೌಲರ್ಗಳು, ವಿಶೇಷವಾಗಿ ಸ್ಪಿನ್ನರ್ಗಳು ಪ್ರಾಬಲ್ಯ ಸಾಧಿಸಿದರು. ಗಮನಾರ್ಹ ಸಂಗತಿಯೆಂದರೆ, ಎಲ್ಲಾ ಮೂರು ಪಂದ್ಯಗಳು ಮೂರೇ ದಿನಗಳಲ್ಲಿ ಮುಕ್ತಾಯಗೊಂಡವು.

ಭಾರತ ತಂಡದ ಬ್ಯಾಟ್ಸ್ಮನ್ಗಳು ಸ್ಕೋರ್ ಬೋರ್ಡ್ನಲ್ಲಿ ರನ್ ಗಳಿಸಲು ಪ್ರಯಾಸಪಟ್ಟಿದ್ದರೂ, ಭಾರತ ತಂಡದಲ್ಲಿ ವಿಕೆಟ್ ಕೀಪರ್- ಬ್ಯಾಟರ್ ಕೆಎಸ್ ಭರತ್ ಅವರ ಸ್ಥಾನವನ್ನು ಪ್ರಶ್ನಿಸಲಾಗಿದೆ. ಇಶಾನ್ ಕಿಶನ್ನಂತಹ ಆಟಗಾರ ತಂಡಕ್ಕೆ ಲಭ್ಯವಿರುವಾಗ ಭರತ್ ಏಕೆ ಎಂದು ಪ್ರಶ್ನಿಸಲಾಗಿದೆ.
ಇದೇ ವೇಳೆ, ಕೆಎಸ್ ಭರತ್ ಕಳಪೆ ಫಾರ್ಮ್ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಭರತ್ ಬೆಂಬಲಕ್ಕೆ ನಿಂತರು ಮತ್ತು ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ವಿಕೆಟ್ ಕೀಪರ್ ಸ್ಥಾನ ಬದಲಾವಣೆಯನ್ನು ತಳ್ಳಿಹಾಕಿದರು.
"ಈ ಸರಣಿಯ ಮೂರು ಪಂದ್ಯಗಳಲ್ಲಿ ಕೆಎಸ್ ಭರತ್ 8, 6, 23*, 17 ಮತ್ತು 3 ರನ್ಗಳನ್ನು ಗಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇದೇ ಸಂದರ್ಭದಲ್ಲಿ ತಂಡದ ಹಲವು ಅಗ್ರ ಬ್ಯಾಟರ್ಗಳು ಕಠಿಣ ಸ್ಪಿನ್-ಸ್ನೇಹಿ ಪರಿಸ್ಥಿತಿಗಳಲ್ಲಿ ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ಸಹ ಗಮನಿಸಬೇಕು," ಎಂದು ರಾಹುಲ್ ದ್ರಾವಿಡ್ ತಿಳಿಸಿದರು.

ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ 29 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಕೆಎಸ್ ಭರತ್ ಫಾರ್ಮ್ ಬಗ್ಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, "ಭರತ್ ದೆಹಲಿಯಲ್ಲಿ ಸಕಾರಾತ್ಮಕವಾಗಿ ಆಡಿದ್ದಾರೆ. ಕಠಿಣ ಸ್ಪಿನ್-ಸ್ನೇಹಿ ಪರಿಸ್ಥಿತಿಗಳಲ್ಲಿ ರನ್ ಗಳಿಸಲು ಸ್ವಲ್ಪ ಅದೃಷ್ಟ ಬೇಕು. ಅವರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು," ಎಂದು ಹೇಳಿದರು.
ಅನುಭವಿ ರಿಷಭ್ ಪಂತ್ ರೀತಿಯ ಆಟದ ಶೈಲಿಯನ್ನು ಹೊಂದಿರುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ತಂಡದಲ್ಲಿದ್ದರೂ, ಕೆಎಸ್ ಭರತ್ ಅವರ ಅತ್ಯುತ್ತಮ ವಿಕೆಟ್ ಕೀಪಿಂಗ್ ಕೌಶಲ್ಯದ ಕಾರಣದಿಂದ ನಾಲ್ಕನೇ ಪಂದ್ಯದಿಂದ ಕೈಬಿಡುವ ಸಾಧ್ಯತೆಯಿಲ್ಲ.