ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳಲು ಅಲ್ಲಿನ ಅಭಿಮಾನಿಗಳಿಗೆ ಸದ್ಯಕ್ಕೆ ಸಾಧ್ಯವಿಲ್ಲ. ಬಹಳ ವರ್ಷಗಳ ನಂತ ಪಾಕಿಸ್ತಾನ ಭಾರತದ ವಿರುದ್ಧ ಇಂಥಾ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಮುಖ್ಯ ಕೋಚ್ ಗ್ರ್ಯಾಂಟ್ ಬ್ರಾಡ್ಬರ್ನ್ ವಿಚಿತ್ರ ಹೇಳಿಕೆಯೊಂದನ್ನು ನೀಡಿ ಗಮನಸೆಳೆದಿದ್ದಾರೆ.
ಸೋಮವಾರ ಅಂತ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬರೊಬ್ಬರಿ 228 ರನ್ಗಳ ಅಂತರದ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲಿಯೂ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ್ದು ಭರ್ಜರಿ ಗೆಲುವು ಸಾಧಿಸಿತು. ಭಾರತದ ವಿರುದ್ಧ ಅನುಭವಿಸಿದ ಈ ಸೋಲಿನ ಬಳಿಕ ಗ್ರ್ಯಾಂಟ್ ಬ್ರಾಡ್ಬರ್ನ್ ತಮ್ಮ ಪ್ರತಿಕ್ರಿಯ ನೀಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಕೊಲಂಬೋದಲ್ಲಿ ಭಾರತ ತಂಡ ನೀಡಿದ ಉಡುಗೊರೆಗೆ ಆಭಾರಿಯಾಗಿದ್ದೇವೆ ಎಂದ ಅವರು, ಬಹಳ ಕಾಲದಿಂದ ಬಲಿಷ್ಠ ತಂಡದ ವಿರುದ್ಧ ಗುಣಮಟ್ಟದ ಆಟಗಾರರ ವಿರುದ್ಧ ಆಡುವ ಅವಕಾಶ ದೊರೆತಿರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
"ಕಳೆದ ಎರಡು ದಿನಗಳಲ್ಲಿ ನಾವು ಪಡೆದುಕೊಂಡ ಉಡುಗೊರೆಗೆ ನಾವು ಆಭಾರಿಯಾಗಿದ್ದೇವೆ. ಯಾಕೆಂದರೆ ಈ ಸೋಲು ಟೂರ್ನಿಯ ಈ ಹಂತದಲ್ಲಿ ಬಂದಿದೆ ಹಾಗೂ ವಿಶ್ವಕಪ್ ಹತ್ತಿರದಲ್ಲಿರುವಾಗಲೇ ಬಂದಿದೆ. ಮೊದಲನೆಯದಾಗಿ ಭಾರತದ ವಿರುದ್ಧ ಆಡುವುದೇ ಅದ್ಭುತವಾದ ಅವಕಾಶ. ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಹೆಚ್ಚು ಆಡುವ ಅವಕಾಶ ನಮಗೆ ದೊರೆತಿಲ್ಲ. ಅಲ್ಲದೆ ಇದು ವಿಶ್ವಕಪ್ಗೆ ಹೊಂದಾಣಿಕೆಯಾಗುವಂತಾ ವಾತಾವರಣದಲ್ಲಿ ಆಡಿರುವ ಪಂದ್ಯ" ಎಂದಿದ್ದಾರೆ ಪಾಕ್ ಕೋಚ್ ಗ್ರ್ಯಾಂಟ್ ಬ್ರಾಡ್ಬರ್ನ್
"ಕಳೆದ ಮೂರು ತಿಂಗಳಿನಲ್ಲಿ ನಾವು ಒಂದು ಪಂದ್ಯವನ್ನೂ ಸೋತಿರಲಿಲ್ಲ. ಸರಿಯಾದ ಸಮಯದಲ್ಲಿ ಈ ಸೋಲು ಕಾಣುವ ಮೂಲಕ ನಮ್ಮನ್ನು ಎಚ್ಚರಿಸಿದಂತಾಗಿದೆ. ಈ ಮೂಲಕ ಪ್ರತಿದಿನವೂ ನಮ್ಮ ಅತ್ಯುತ್ತಮ ಆಟವನ್ನು ಆಡಬೇಕು ಎನ್ನು ನಮಗೆ ಎಚ್ಚರಿಕೆ ನೀಡಲಾಗಿದೆ. ನಾವು ಅದನ್ನು ಮಾಡದೇ ಇರುವುದಕ್ಕೆ ಇದು ನಮಗೆ ಕಳೆದ ಎರಡು ದಿನಗಳಲ್ಲಿ ದೊರೆತ ಉಡುಗೊರೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ನಮ್ಮ ಬ್ಯಾಟಿಂಗ್ ಹೆಚ್ಚು ಯಶಸ್ಸು ಪಡೆದುಕೊಂಡಿಲ್ಲ. ಆದರೆ ಇದನ್ನು ನಾವು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳುತ್ತೇವೆ ಮತ್ತು ನಮ್ಮ ಆಟಗಾರರ ಸಾಮರ್ಥ್ಯದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ" ಎಂದಿದ್ದಾರೆ ಪಾಕ್ ತಂಡದ ಮುಖ್ಯ ಕೋಚ್.