
ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ನ ಎರಡನೇ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದೆ. ಮೊದಲ ದಿನದಾಟದಲ್ಲಿ ಉತ್ತಮ ಆರಂಭ ಪಡೆದಿದ್ದ ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ಕಲೆಹಾಕುವ ಯೋಜನೆಯಲ್ಲಿತ್ತು. ಆದ್ರೆ ವೆಟ್ ಔಟ್ಫೀಲ್ಡ್ನಿಂದಾಗಿ ಎರಡನೇ ದಿನದಾಟದಲ್ಲಿ ಒಂದೂ ಎಸೆತ ಕಾಣದೆ ವಾಶ್ಔಟ್ ಆಗಿದೆ.
ಸೆಂಚುರಿಯನ್ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಎರಡನೇ ದಿನದ ಆಟ ಬೆಳಗ್ಗೆ ಆರಂಭವಾಗುವುದು ವಿಳಂಭವಾಯಿತು. ಅಲ್ಲಿಯ ಕಾಲಮಾನ ಮಧ್ಯಾಹ್ನದವರೆಗೂ ಸ್ಟೇಡಿಯಂ ಸಿಬ್ಬಂದಿ ನೀರು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಆದ್ರೆ ಸಮಯ ಕಳೆದರೂ ಪಿಚ್ ಔಟ್ಫೀಲ್ಡ್ ಹೆಚ್ಚು ಒದ್ದೆಯಾಗಿದ್ದರ ಪರಿಣಾಮ, ಮೈದಾನವನ್ನ ಪರಿಶೀಲಿಸಿದ ಆನ್ಫೀಲ್ಡ್ ಅಂಪೈರ್ಸ್ ಎರಡನೇ ದಿನದಾಟಕ್ಕೆ ಮುಕ್ತಾಯ ಹಾಡಿದ್ದಾರೆ.
ಮಳೆಯಿಂದಾಗಿ ಮೊದಲ ಸೆಷನ್ ಸಂಪೂರ್ಣವಾಗಿ ಹಾಳಾಗಿತ್ತು, ಆದ್ರೆ ಎರಡನೇ ಸೆಷನ್ನಲ್ಲಿ ಪಂದ್ಯ ಶುರುವಾಗಬಹುದೆಂದು ಅಭಿಮಾನಿಗಳು ಕಾಯುತ್ತಿದ್ರು. ಆದ್ರೆ ಅದೇ ವೇಳೆಗೆ ಮತ್ತೆ ಮಳೆ ಸುರಿಯಲಾರಂಭಿಸಿತು. ಇದರಿಂದಾಗಿ ನಿಗದಿತ ಸಮಯಕ್ಕಿಂತ ಮೊದಲೇ ಊಟದ ವಿರಾಮ ಕೂಡ ತೆಗೆದುಕೊಳ್ಳಲಾಯಿತು. ಮೈದಾನದ ಸಿಬ್ಬಂದಿ ನೆಲ ಒಣಗಿಸುವ ಕಾರ್ಯದಲ್ಲಿ ಸತತ ಪ್ರಯತ್ನ ಪಟ್ಟರೂ ಫಲ ಸಿಗಲಿಲ್ಲ. ಹೀಗಾಗಿ ಎರಡನೇ ದಿನದಾಟ ರದ್ದುಗೊಂಡಿದೆ.
ಇದಕ್ಕೂ ಮೊದಲು ನಿನ್ನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ ಭರ್ಜರಿ ಆರಂಭವನ್ನ ಪಡೆಯಿತು. ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ ಅಗರ್ವಾಲ್ ಶತಕದ ಜೊತೆಯಾಟದ ಮೂಲಕ ಭದ್ರ ಬುನಾದಿ ಹಾಕಿಕೊಟ್ರು.
ಮೊದಲ ದಿನದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದೆ. ಕೆ.ಎಲ್ ರಾಹುಲ್ 122 ರನ್ ಗಳಿಸಿ ಅಜೇಯರಾಗುಳಿದಿದ್ದು, ರಹಾನೆ 40 ರನ್ ಗಳಿಸಿ ಆಡುತ್ತಿದ್ದರು. ಇದಕ್ಕೂ ಮೊದಲು ಕೊಹ್ಲಿ ಇನ್ನಿಂಗ್ಸ್ 35 ರನ್ಗೆ ಮುಕ್ತಾಯಗೊಂಡ್ರೆ, ಚೇತೇಶ್ವರ ಪೂಜಾರ ಶೂನ್ಯಕ್ಕೆ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಆದ್ರೆ ಸಾಕಷ್ಟು ಟೀಕೆಗಳ ನಡುವೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯ ರಹಾನೆ ತಾಳ್ಮೆಯ ಅಜೇಯ 40ರನ್ಗಳ ಕೊಡುಗೆ ತಂಡದ ಮೊತ್ತ ಹೆಚ್ಚಿಸಿತು. ಈ ಜೋಡಿ ನಾಲ್ಕನೇ ವಿಕೆಟ್ಗೆ 131 ಎಸೆತಗಳಲ್ಲಿ 73 ರನ್ ಕಲೆಹಾಕಿದೆ.