
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಹಿರಿಯ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಸ್ಪಷ್ಟವಾದ ಪಾತ್ರವನ್ನ(ಕ್ರಮಾಂಕವನ್ನ) ನೀಡಲಾಗಿದೆ ಎಂದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಜೂನ್ 9ರಿಂದ ಆರಂಭಗೊಳ್ಳಲಿರುವ ಐದು ಪಂದ್ಯಗಳ ಟಿ20 ಸರಣಿಯ ಸಿದ್ಧತೆ ಕುರಿತಾಗಿ ದೆಹಲಿಯಲ್ಲಿ ಮಾತನಾಡಿದ ದ್ರಾವಿಡ್, ಕಾರ್ತಿಕ್ ಅನುಭವ ಟೀಂ ಇಂಡಿಯಾದಲ್ಲಿ ಪ್ರಮುಖ ಪಾತ್ರವಹಿಸುವ ಕುರಿತು ಮುನ್ಸೂಚನೆ ಕೊಟ್ಟಿದ್ದಾರೆ.
ಐಪಿಎಲ್ 2022ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಿನಿಷಿಂಗ್ ರೋಲ್ನಲ್ಲಿ ಮಿಂಚಿದ ಡಿಕೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಆಡಿದ 16 ಪಂದ್ಯಗಳಲ್ಲಿ 55ರ ಸರಾಸರಿ ಹಾಗೂ 183.00ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ 330ರನ್ ಕಲೆಹಾಕಿದರು.
ಕಾರ್ತಿಕ್ರ ಈ ಪ್ರದರ್ಶನವನ್ನ ಗಮನಿಸಿದ ಆಯ್ಕೆದಾರರು ಮತ್ತು ಕೋಚ್ ದ್ರಾವಿಡ್ ಮುಂಬರುವ ಹರಿಣಗಳ ವಿರುದ್ಧದ ಚುಟುಕು ಸರಣಿಗೆ ಬುಲಾವ್ ನೀಡಿದ್ರು. ಮೂರು ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಆಡಲಿರುವ ಕಾರ್ತಿಕ್ ಮೇಲೆ ಹೆಚ್ಚಿನ ನಿರೀಕ್ಷೆ ಸೃಷ್ಟಿಯಾಗಿವೆ.
ಸ್ಲಾಗ್ ಓವರ್ಗಳಲ್ಲಿ ಸಿಕ್ಸರ್, ಬೌಂಡರಿ ಮೂಲಕ ವೇಗವಾಗಿ ರನ್ ಕಲೆಹಾಕುವ ಸಾಮರ್ಥ್ಯ ಹೊಂದಿರುವ ಡಿಕೆ ಕುರಿತು ರಾಹುಲ್ ದ್ರಾವಿಡ್ ಬಹಳ ವಿಶ್ವಾಸದ ನುಡಿಗಳನ್ನಾಡಿದ್ದಾರೆ.
"ದಿನೇಶ್ ಅವರ ಪಾತ್ರವು ಸ್ಪಷ್ಟವಾಗಿದೆ. ಆಟದ ಹಿನ್ನಲೆಯಲ್ಲಿ, ಅವರು ವ್ಯತ್ಯಾಸವನ್ನು ಮಾಡಬಹುದು. ಅದಕ್ಕಾಗಿಯೇ ಅವರನ್ನು ಆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಲು ಮತ್ತು ಆರ್ಸಿಬಿಯಂತೆ ಭಾರತ ಪರವೂ ಮಿಂಚಲು ಅವರನ್ನು ಆಯ್ಕೆ ಮಾಡಲಾಗಿದೆ "ಎಂದು ದ್ರಾವಿಡ್ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.
2019ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ ಟೀಂ ಇಂಡಿಯಾ ಪರ ಕಾರ್ತಿಕ್ ಕೊನೆಯದಾಗಿ ಬ್ಲ್ಯೂ ಜೆರ್ಸಿ ತೊಟ್ಟಿದ್ದರು. ಇದಲ್ಲದೆ 2019ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್ನಲ್ಲಿ ಕೊನೆಯ ಬಾರಿಗೆ ಚುಟುಕು ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ.
ದಿನೇಶ್ ಕಾರ್ತಿಕ್ ಚೊಚ್ಚಲ ಟಿ20 ವಿಶ್ವಕಪ್(2007)ನಲ್ಲಿ ಧೋನಿ ನಾಯಕತ್ವದಲ್ಲಿ ಆಡಿರುವ, ಸದ್ಯ ಟೀಂ ಇಂಡಿಯಾ ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರನಾಗಿದ್ದಾರೆ(ರೋಹಿತ್ ಶರ್ಮಾ ಹೊರತುಪಡಿಸಿ).
ಐದು ಪಂದ್ಯಗಳ ಟಿ20 ಸರಣಿಯು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ (ಜೂ. 07) ಪ್ರಾರಂಭಗೊಳ್ಳಲಿದ್ದು, ಮುಂದಿನ ಪಂದ್ಯಗಳು ಕಟಕ್, ವೈಜಾಗ್, ರಾಜ್ಕೋಟ್, ಮತ್ತು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಟೀಂ ಇಂಡಿಯಾ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.