
ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯುತ್ತಿದೆ. ಇತ್ತ ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳಲ್ಲಿಯೂ ಕೂಡ ವೈಟ್ ವಾಷ್ ಸಾಧನೆ ಮಾಡಿರುವ ಟೀಂ ಇಂಡಿಯಾ ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆದಿದ್ದು ಟೀಮ್ ಇಂಡಿಯಾ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಗೆದ್ದು ಪ್ರವಾಸಿ ಶ್ರೀಲಂಕಾಗೆ ವೈಟ್ ವಾಷ್ ಬಳಿದಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಹಾಗೂ ಟಿ ಟ್ವೆಂಟಿ ಸರಣಿಗಳಲ್ಲಿ ವೈಟ್ ವಾಷ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡ ವೈಟ್ ವಾಷ್ ಮಾಡುವುದರ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
ಶ್ರೀಲಂಕಾ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸಲಿದ್ದು, ಇತ್ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ ಮೊಹಾಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ಮೈಲಿಗಲ್ಲಿನ ಪಂದ್ಯವಾಗಿದ್ದು, ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯವಾಗಿದೆ. ಹೌದು, ಈ ಕಾರಣದಿಂದಾಗಿಯೇ ಈ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಎನ್ನುವುದಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯ ಎಂದೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ.
ಹೀಗೆ ವಿರಾಟ್ ಕೊಹ್ಲಿ ಆಡಲಿರುವ ನೂರನೇ ಟೆಸ್ಟ್ ಪಂದ್ಯ ಎಂಬ ಕಾರಣಕ್ಕೆ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಪಂದ್ಯದ ಕುರಿತು ಇದೀಗ ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವಾರು ಆಟಗಾರರು ಪ್ರತಿಕ್ರಿಯಿಸಿದ್ದು, ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ವಿರಾಟ್ ಕೊಹ್ಲಿ ಬಗ್ಗೆ ಸಚಿನ್ ಹೇಳಿದ್ದಿಷ್ಟು
ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ್ದು, ನಾನು ಮತ್ತು ನನ್ನ ತಂಡದ ಇತರೆ ಆಟಗಾರರು ನಿಮ್ಮ ಹೆಸರನ್ನು ಮೊದಲ ಬಾರಿಗೆ 2007ರಲ್ಲಿ ಕೇಳಿದ್ದೆವು, ಆ ಸಂದರ್ಭದಲ್ಲಿ ನಾವು ಆಸ್ಟ್ರೇಲಿಯ ಪ್ರವಾಸವನ್ನು ಕೈಗೊಂಡಿದ್ದೆವು ಮತ್ತು ನೀವು ಇಂಡೋನೇಷ್ಯಾದಲ್ಲಿ ನಡೆಯುತ್ತಿದ್ದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ನಿರತರಾಗಿದ್ದಿರಿ ಎಂದು ವಿರಾಟ್ ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಹಾಗೂ ವಿರಾಟ್ ಕೊಹ್ಲಿ ಕುರಿತು ಅಂದು ತಂಡದಲ್ಲಿದ್ದ ಕೆಲ ಆಟಗಾರರು ಮಾತನಾಡಿ, ಈ ಹುಡುಗ ತುಂಬಾ ಅಚ್ಚುಕಟ್ಟಾಗಿ ಬ್ಯಾಟಿಂಗ್ ಮಾಡುತ್ತಾನೆ, ಮುಂದೊಂದು ದಿನ ತಂಡ ಸೇರುವುದು ಖಚಿತ ಎಂದು ಹೇಳುತ್ತಿದ್ದರು ಎಂದಿದ್ದಾರೆ.
ಒಂದು ಪಂದ್ಯವನ್ನು ಆಡುವುದೇ ಒಂದು ಅತ್ಯುತ್ತಮ ಘಟ್ಟ, ಅಂಥದ್ದರಲ್ಲಿ ವಿರಾಟ್ ಕೊಹ್ಲಿ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಅದರ ಕುರಿತು ವಿರಾಟ್ ಕೊಹ್ಲಿ ಹೆಮ್ಮೆಪಡಬೇಕು ಎಂದು ಭಾರತದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಓರ್ವ ಚಾಂಪಿಯನ್ ಆಗಿದ್ದು, ಆತ ಕಳೆದ 10 - 11 ವರ್ಷಗಳಿಂದ ಸಾಧಿಸಿದ ಯಶಸ್ಸು ನಿಜವಾಗಿಯೂ ಮಹತ್ವವಾದದ್ದು ಎಂದಿರುವ ಸೌರವ್ ಗಂಗೂಲಿ ಬಿಸಿಸಿಐ ವತಿಯಿಂದ ಮತ್ತು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ನಾಯಕನಾದ ತನ್ನಿಂದ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿಗೆ ಶುಭಾಶಯವನ್ನು ಕೋರಿದರು.