ಗುರುವಾರ, ಜುಲೈ 20ರಿಂದ ಟ್ರಿನಿಡಾಡ್ನ ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
ಇನ್ನು ಭಾರತ ತಂಡದ ಪರ ವಿರಾಟ್ ಕೊಹ್ಲಿ ಅವರು ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವಾಗ 5ನೇ ಪಂದ್ಯದಂತೆ ಆಡಿದ್ದಾರೆ ಎಂದು ಭಾರತ ತಂಡದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ಗೆ 288 ರನ್ ಗಳಿಸಿತು. ಇದರಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 87 ರನ್ ಗಳಿಸಿದರು.

ಕ್ರಿಕ್ಬಜ್ನೊಂದಿಗೆ ಮಾತನಾಡಿದ ದಿನೇಶ್ ಕಾರ್ತಿಕ್ ಅವರು ವಿರಾಟ್ ಕೊಹ್ಲಿಯ ರನ್ ಹಸಿವನ್ನು ಶ್ಲಾಘಿಸಿದರು. ಅವರು ತಮ್ಮ ವೃತ್ತಿಜೀವನದ ಐದನೇ ಪಂದ್ಯ ಆಡಿದಂತೆ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ ಎಂದು ಹೇಳಿದರು.
ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಮೊದಲ ದಿನದಂದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 8 ಬೌಂಡರಿ ಸಮೇತ 87 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು.
"ವಿರಾಟ್ ಕೊಹ್ಲಿ ಆಡಿದ ಸುಂದರವಾದ ಶಾಟ್ಗಳು, ಕವರ್ ಡ್ರೈವ್ಗಳು ಮತ್ತು ಪುಲ್ಗಳ ಬಗ್ಗೆ ನಾವೆಲ್ಲರೂ ಹೇಳಬಹುದು. ಇಲ್ಲಿ ಆತ ತನ್ನ 500ನೇ ಪಂದ್ಯವನ್ನು ಆಡುತ್ತಿದ್ದಾನೆ. ಆದರೆ ಅವನು ಉಲ್ಲಿ ತನ್ನ ಐದನೇ ಪಂದ್ಯದಂತೆ ಆಡಿದನು".

"ಸ್ಟ್ರೋಕ್ ಮಾಡಲು ಸಹಾಯ ಮಾಡದ ಪಿಚ್ನಲ್ಲಿ ಅವರ ರನ್ ಹಸಿವು ತೋರಿಸಿತು. ನಾವು ಅದನ್ನು ಮೊದಲ ಟೆಸ್ಟ್ ಪಂದ್ಯದಲ್ಲಿಯೂ ನೋಡಿದ್ದೇವೆ. ಈಗ ನಾವು ಅದನ್ನು ಮತ್ತೆ ನೋಡುತ್ತಿದ್ದೇವೆ. ಆದರೆ, ವಿರಾಟ್ ಕೊಹ್ಲಿಯಿಂದ ಅತ್ಯಂತ ನಿರರ್ಗಳವಾದ ಪ್ರದರ್ಶನ ಬರಲಿಲ್ಲ," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
"ರಾಹುಲ್ ದ್ರಾವಿಡ್ ಅವರು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವುದನ್ನು ನೀವು ಕೇಳಿದರೆ, ಅವರು ಎರಡು ವಿಷಯಗಳನ್ನು ಹೇಳಿದ್ದಾರೆ. ಅವರೆಂದರೆ, ಗೌರವ ಮತ್ತು ತ್ಯಾಗ. ಎರಡನೇ ಪಂದ್ಯದಲ್ಲಿ ಅವರು ಮತ್ತೊಮ್ಮೆ ಮಿಂಚುತ್ತಿರುವುದನ್ನು ನೀವು ನೋಡಬಹುದು. ಅವರ ನಿರರ್ಗಳವಾಗಿ ಅಲ್ಲದಿದದ್ದರೂ, ಖಚಿತವಾಗಿ ರನ್ ಗಳಿಸುತ್ತಿದ್ದಾರೆ," ಎಂದರು.
"ವಿರಾಟ್ ಕೊಹ್ಲಿ ನೆಲ ಕಚ್ಚಿ ಆಡುತ್ತಿದ್ದಾರೆ ಮತ್ತು ಆ ಕಠಿಣ ಎಸೆತಗಳನ್ನು ಎದುರಿಸಿದರು. ಆತ ಮಾನಸಿಕವಾಗಿ ಕ್ರೀಸ್ನಲ್ಲಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ಭಾರತ ತಂಡಕ್ಕೆ ಎಷ್ಟರ ಮಟ್ಟಿಗೆ ಸಹಾಯವಾಗುತ್ತದೆ ಎನ್ನುವುದನ್ನು ಲೆಕ್ಕ ಹಾಕಬೇಕು," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು.
ಇನ್ನು ವಿರಾಟ್ ಕೊಹ್ಲಿ ಜೊತೆಗೆ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ 84 ಎಸೆತಗಳಲ್ಲಿ 36 ರನ್ ಗಳಿಸಿ ನಿರ್ಣಾಯಕ ಪಾತ್ರ ವಹಿಸಿದರು. ಈ ಜೋಡಿ ಐದನೇ ವಿಕೆಟ್ಗೆ ಅಜೇಯ 106 ರನ್ಗಳ ಜೊತೆಯಾಟವಾಡಿದರು ಮತ್ತು ವೆಸ್ಟ್ ಇಂಡೀಸ್ ತಂಡದ ಯೋಜನೆಗಳನ್ನು ವಿಫಲಗೊಳಿಸಿದರು.