
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 265 ರನ್ ಆಲೌಟ್ ಆಗಿದ್ದು, ಎದುರಾಳಿ ವೆಸ್ಟ್ ಇಂಡೀಸ್ಗೆ 266 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಪಡೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ನಾಯಕ ರೋಹಿತ್ ಶರ್ಮಾ 13 ರನ್ಗಳಿಸಿದ್ದ ವೇಳೆ ಅಲ್ಜಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಅದೇ ಓವರ್ನಲ್ಲಿ ಕ್ರೀಸ್ಗಿಳಿದಿದ್ದ ವಿರಾಟ್ ಕೊಹ್ಲಿ ತಾನು ಎದುರಿಸಿದ ಎರಡನೇ ಎಸೆತದಲ್ಲೇ ಡಕೌಟ್ ಆದ್ರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಫ್ಲಾಪ್ ಶೋ ಮುಂದುವರಿಯಿತು.
ಇನ್ನು ಕೋವಿಡ್ ಪಾಸಿಟಿವ್ ಅಗಿ ಎರಡು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದ ಶಿಖರ್ ಧವನ್ ಕೂಡ ಉತ್ತಮ ಆಟವಾಡುವಲ್ಲಿ ಎಡವಿದ್ರು. ಕೇವಲ 10 ರನ್ಗೆ ಓಡಿಯನ್ ಸ್ಮಿತ್ ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ನಾಲ್ಕನೇ ವಿಕೆಟ್ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಜೋಡಿ ಶತಕದ ಜೊತೆಯಾಟದ ಮೂಲಕ ಕುಸಿದಿದ್ದ ತಂಡಕ್ಕೆ ಆಧಾರವಾದ್ರು.
ರಿಷಭ್ ಪಂತ್ 54 ಎಸೆತಗಳಲ್ಲಿ 50 ರನ್ ಕಲೆಹಾಕಿ ಹೇಡನ್ ವಾಲ್ಷ್ಗೆ ವಿಕೆಟ್ ಒಪ್ಪಿಸಿದ್ರು. ಪಂತ್ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಈತನಿಗೆ ಸಾಥ್ , ಶ್ರೇಯಸ್ ಅಯ್ಯರ್ 111 ಎಸೆತಗಳಲ್ಲಿ 80 ರನ್ಗಳಿಸಿ ಔಟಾದ್ರು. ಇವರ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಇತ್ತು. ಈ ಇಬ್ಬರು ಆಟಗಾರರ 110 ರನ್ಗ ಜೊತೆಯಾಟ ಭಾರತಕ್ಕೆ ಚೇತರಿಸಿಕೊಳ್ಳಲು ಸಹಾಯವಾಗಿದೆ.
ಇವರಿಬ್ಬರ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ 6ರನ್ಗೆ ಇನ್ನಿಂಗ್ಸ್ ಮುಗಿಸಿದ್ರು. ಆದ್ರೆ ಆಲ್ರೌಂಡರ್ಗಳಾದ ವಾಷಿಂಗ್ಟನ್ ಸುಂದರ್ 33 ರನ್, ದೀಪಕ್ ಚಹಾರ್ 38 ರನ್ಗಳ ಅಮೂಲ್ಯ ಕೊಡುಗೆಯಿಂದ ಭಾರತ 250ರ ಗಡಿದಾಟಿತು. ದೀಪಕ್ ಚಹಾರ್ 38 ಎಸೆತಗಳಲ್ಲಿ 38 ರನ್ ಕಲೆಹಾಕಿದ್ದು, 4 ಬೌಂಡರಿ ಜೊತೆಗೆ ಎರಡು ಸಿಕ್ಸರ್ ಸಿಡಿಸಿದ್ರು. ವಾ. ಸುಂದರ್ ಎರಡು ಬೌಂಡರಿ ಮತ್ತು ಒಂದು ಅಮೋಘ ಸಿಕ್ಸರ್ ಸಿಡಿಸಿದ್ರು.
ಕೊನೆಯ ಎಸೆತದಲ್ಲಿ ಅಂತಿಮ ವಿಕೆಟ್ ಕಳೆದುಕೊಂಡ ಭಾರತ 10 ವಿಕೆಟ್ ನಷ್ಟಕ್ಕೆ 265 ಕಲೆಹಾಕಿದೆ. ವೆಸ್ಟ್ ಇಂಡೀಸ್ಗೆ 266ರನ್ಗಳ ಟಾರ್ಗೆಟ್ ನೀಡಿದೆ.
ವೆಸ್ಟ ಇಂಡೀಸ್ ಪರ ಜೇಸನ್ ಹೋಲ್ಡರ್ 4 ವಿಕೆಟ್, ಅಲ್ಜಾರಿ ಜೋಸೆಫ್ 2 ವಿಕೆಟ್, ಹೈಡನ್ ವಾಲ್ಷ್ 2 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.