ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 200 ರನ್ಗಳ ಬೃಹತ್ ಅಂತರದಿಂದ ಸೋಲಿಸಿ, ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಳಿಯದೆ, ಕಿರಿಯ ಆಟಗಾರರಿಗೆ ಅವಕಾಶ ನೀಡಿದರು. ನಂತರ ಎರಡು ಮತ್ತು ಮೂರನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಯಿತು.
ಆದರೂ, ಮೂರನೇ ಏಕದಿನ ಪಂದ್ಯದಲ್ಲಿ 200 ರನ್ಗಳ ಬೃಹತ್ ಗೆಲುವು ಮತ್ತು ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಳ್ಳಲು ತನ್ನ ಸಹ ಆಟಗಾರರನ್ನು ಹುರಿದುಂಬಿಸುವಲ್ಲಿ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಿದರು.
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ತಂಡ 352 ರನ್ಗಳ ಬೃಹತ್ ಚೇಸಿಂಗ್ ವೇಳೆ 18ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಬದಲಿ ಫೀಲ್ಡರ್ ಆಗಿ ಮೈದಾನಕ್ಕೆ ಬಂದರು.

ಎರಡನೇ ಏಕದಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಜೊತೆಗೆ ವಿರಾಟ್ ಕೊಹ್ಲಿ ವಾಟರ್ಬಾಯ್ ಆಗಿ ಕಾರ್ಯನಿರ್ವಹಿಸಿದ್ದರು. ಇಬ್ಬರೂ ಭಾರತ ತಂಡದ ಆಡುವ 11ರ ಬಳಗದ ಭಾಗವಾಗಿರಲಿಲ್ಲ.
ರುತುರಾಜ್ ಗಾಯಕ್ವಾಡ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲು ನಿರ್ಣಾಯಕ ಮೂರನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವುದು ತಂಡದ ಮ್ಯಾನೇಜ್ಮೆಂಟ್ಗೆ ಮುಖ್ಯವಾಗಿದೆ ಎಂದು ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದರು.
"ನಿಸ್ಸಂಶಯವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡದ ಅವಿಭಾಜ್ಯ ಆಟಗಾರರು. ಆದರೆ ರುತುರಾಜ್ ಅಥವಾ ಅಕ್ಷರ್ ಅವರಂತಹ ಆಟಗಾರರಿಗೆ ಪಂದ್ಯವನ್ನು ಆಡಲು ಇದು ಬಹಳ ಮುಖ್ಯವಾಗಿತ್ತು. ಆದ್ದರಿಂದ ಯುವ ಆಟಗಾರರಿಗೆ ಅವಕಾಶ ನೀಡುವುದು ಮತ್ತು ಅವರ ಆಟವನ್ನು ಪರಿಶೀಲಿಸುವುದು ಮುಖ್ಯವಾಗಿರುತ್ತದೆ," ಎಂದು ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ ಹೇಳಿದರು.
ಮೂರನೇ ಏಕದಿನ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಅವರು ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 70 ರನ್ ಗಳಿಸಿ ಭಾರತ ತಂಡದ ಮೊತ್ತವನ್ನು 5 ವಿಕೆಟ್ಗೆ 351 ರನ್ಗಳಿಗೆ ಹೆಚ್ಚಿಸಿದರು.
"ಮೈದಾನದಲ್ಲಿ ವಿರಾಟ್ ಕೊಹ್ಲಿ ನನಗೆ ಕೆಲವು ಸಲಹೆಗಳನ್ನು ನೀಡಿದರು. ಅಲ್ಲದೆ ಅವರು ನನ್ನ ಬ್ಯಾಟಿಂಗ್ ಬಗ್ಗೆ ಸಹಾಯ ಮಾಡಿದರು. ಅವರು ನನ್ನೊಂದಿಗೆ ಕೆಲವು ಸಲಹೆಗಳನ್ನು ಹಂಚಿಕೊಂಡರು. ಇದಕ್ಕಾಗಿ ನಾನು ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳುತ್ತೇನೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.
"ನಾನು ಅವಕಾಶವನ್ನು ಪಡೆಯಲು ಕಾಯುತ್ತಿದ್ದೆ ಮತ್ತು ಒಮ್ಮೆ ನಾನು ಲಯವನ್ನು ಪಡೆದರೆ ನಾನು ಆಡಬಹುದು. ನಾನು ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಾಗ ವಿಷಯಗಳು ತುಂಬಾ ಭಿನ್ನವಾಗಿರುತ್ತವೆ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಅದನ್ನು ನೋಡಿದ್ದೇನೆ," ಎಂದು ಹಾರ್ದಿಕ್ ಪಾಂಡ್ಯ ಮೂರನೇ ಏಕದಿನ ಪಂದ್ಯದಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದರು.