ಗುರುವಾರ, ಜುಲೈ 27ರ ಸಂಜೆ 7 ಗಂಟೆಗೆ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಭಾರತ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಆಡುವ 11ರ ಬಳಗ ಆಯ್ಕೆ ಮಾಡಿದ್ದಾರೆ.

ಆಕಾಶ್ ಚೋಪ್ರಾ ಪ್ರಕಾರ, ಮೊದಲ ಏಕದಿನ ಪಂದ್ಯಕ್ಕೆ ಇಶಾನ್ ಕಿಶನ್ಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಸಾಧ್ಯವಾಗದ ಶುಭ್ಮನ್ ಗಿಲ್ ಮೇಲೆ ತಂಡವು ನಂಬಿಕೆ ಇರಿಸಲಿದೆ.
ಗಮನಾರ್ಹವಾಗಿ, ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 27ರಿಂದ ಪ್ರಾರಂಭವಾಗುತ್ತದೆ. 2023ರ ಏಕದಿನ ವಿಶ್ವಕಪ್ ಎರಡು ತಿಂಗಳ ನಂತರ ಪ್ರಾರಂಭವಾಗಲಿರುವುದರಿಂದ, ಈ ವೇಳೆ ಭಾರತ ತಂಡದ ಮ್ಯಾನೇಜ್ಮೆಂಟ್ ತಮ್ಮ ಸಂಯೋಜನೆಯನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ.
45 ವರ್ಷದ ಆಕಾಶ್ ಚೋಪ್ರಾ ಆಯ್ಕೆ ಮಾಡಿರುವ ಭಾರತದ ಆಡುವ 11ರ ಬಳಗದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಮತ್ತು ಸಂಜು ಸ್ಯಾಮ್ಸನ್ ಐದನೇ ಸ್ಥಾನದಲ್ಲಿ ಆಡಿಸಲು ಭಾರತ ತಂಡದ ಮ್ಯಾನೇಜ್ಮೆಂಟ್ ಬೆಂಬಲಿಸಲಿದೆ ಎನ್ನಲಾಗಿದೆ.
ಇನ್ನು ಶ್ರೇಯಸ್ ಅಯ್ಯರ್ ಬೆನ್ನಿನ ಗಾಯದಿಂದ ಬಳಲುತ್ತಿರುವುದರಿಂದ, ನಾಲ್ಕನೇ ಕ್ರಮಾಂಕದ ಪಾತ್ರದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಇದ್ದವು. ಆದರೆ ಏಕದಿನ ಕ್ರಿಕೆಟ್ನಲ್ಲಿ ಪ್ರಭಾವಿ ಪ್ರದರ್ಶನ ನೀಡದ ಸೂರ್ಯಕುಮಾರ್ ಯಾದವ್ರಲ್ಲಿ ನಂಬಿಕೆಯನ್ನು ತೋರಿಸಿದೆ. ಹಾಗಾಗಿ, ಸ್ಫೋಟಕ ಬ್ಯಾಟರ್ಗೆ ಈ ಸರಣಿಯು ನಿಜವಾಗಿಯೂ ಮಹತ್ವದ್ದಾಗಿದೆ.
"ನನ್ನ ಅಭಿಪ್ರಾಯದಲ್ಲಿ ಭಾರತ ತಂಡ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದೆ. ಇಶಾನ್ ಕಿಶನ್ ಹೆಸರು ಬರುತ್ತದೆ, ಆದರೆ ತಂಡ ಆತನನ್ನು ಆಡಿಸುವುದಿಲ್ಲ. ರೋಹಿತ್ ಶರ್ಮಾ ಅವರು ಟ್ರಿನಿಡಾಡ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಆಡಿದಂತೆಯೇ ಆಡುವ ನಿರೀಕ್ಷೆಯಲ್ಲಿದ್ದಾರೆ. ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್ ಮರೆತು ಆಡುತ್ತಾರೆ," ಎಂದು ಅಕಾಶ್ ಚೋಪ್ರಾ ತಿಳಿಸಿದರು.
"ಬಳಿಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಲಿದ್ದರೆ, ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ಗೆ ಸ್ಥಾನ ನೀಡದೇ, ನಾನು ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು 4 ಮತ್ತು 5ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದೇನೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
"ಇನ್ನು 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಆಯ್ಕೆ ಮಾಡುತ್ತೇನೆ. ಹೀಗಾಗಿ ಶಾರ್ದೂಲ್ ಠಾಕೂರ್ ಅವರು ಆಡುವ 11ರ ಬಳಗದಲ್ಲಿ ಅಗತ್ಯವಿಲ್ಲ," ಎಂದು ಆಕಾಶ್ ಚೋಪ್ರಾ ತಿಳಿಸಿದರು.
ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರ ಜೋಡಿಯನ್ನು 7 ಮತ್ತು 8ನೇ ಕ್ರಮಾಂಕದಲ್ಲಿ ಇಳಿಸುತ್ತೇನೆ ಮತ್ತು ಕುಲದೀಪ್ ಯಾದವ್ ಅವರನ್ನು ಸ್ಪಿನ್ ಸಂಯೋಜನೆಗೆ ಸೇರಿಸುತ್ತೇನೆ ಎಂದರು.
ಇನ್ನು ವೇಗದ ಬೌಲಿಂಗ್ ವಿಷಯಕ್ಕೆ ಬಂದರೆ, ಆಕಾಶ್ ಚೋಪ್ರಾ ಅವರು ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದ್ದಾರೆ. ಮುಂಬರುವ ವಿಶ್ವಕಪ್ನಲ್ಲಿ ಎಕ್ಸ್-ಫ್ಯಾಕ್ಟರ್ ಎಂದು ಸಾಬೀತುಪಡಿಸಬಹುದು ಎಂಬ ಕಾರಣಕ್ಕಾಗಿ ಉಮ್ರಾನ್ ಮಲಿಕ್ ಅವರನ್ನು ಆಕಾಶ್ ಚೋಪ್ರಾ ಬೆಂಬಲಿಸಿದರು.
ಆದರೆ, ಮೊಹಮ್ಮದ್ ಸಿರಾಜ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದು ತವರಿಗೆ ಮರಳಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅಥವಾ ಜಯದೇವ್ ಉನಾದ್ಕಟ್ ಸ್ಥಾನ ಪಡೆಯಬಹುದು.
ಮೊದಲ ಏಕದಿನ ಪಂದ್ಯಕ್ಕೆ ಆಕಾಶ್ ಚೋಪ್ರಾ ಆಯ್ಕೆಯ ಭಾರತದ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್/ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್.