ಮಹತ್ವದ ಘಟ್ಟದಲ್ಲಿ ಎಡವಿದೆವು
ಎರಡನೇ ಪಂದ್ಯದಲ್ಲಿಯೂ ರೋಚಕ ಹೋರಾಟ ಪ್ರದರ್ಶಿಸಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಎಡವಿದ್ದೇವೆ ಎಂದರು. ಅದರಲ್ಲೂ ಅಂತಿಮ ಆರು ಓವರ್ಗಳಲ್ಲಿ ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ ಎಂದು ನಿಕೋಲಸ್ ಪೂರನ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಂತಿಮ ಆರು ಓವರ್ಗಳಲ್ಲಿ ಪಂದ್ಯ ಕಳೆದುಕೊಂಡೆವು
"ಖಂಡಿತವಾಗಿಯೂ ನಾವು ಅಂತಿಮ ಕೆಲ ಓವರ್ಗಳಲ್ಲಿ ನಾವು ನಿಯಂತ್ರಣ ಕಳೆದುಕೊಂಡಿದ್ದೆವು. ಕೊನೆಯ ಆರು ಓವರ್ಗಳಲ್ಲಿ ಪಂದ್ಯವನ್ನು ಕಳೆದುಕೊಂಡೆವು. ಸ್ಪಿನ್ನರ್ಗಳಿಗೆ ಆ ಸಂದರ್ಭದಲ್ಲಿ ಬಾರಿಸಲು ಸುಲಭವಾಗುತ್ತದೆ ಎಂದು ಭಾವಿಸಿದೆವು. ಈ ಪಂದ್ಯವನ್ನು ತಮ್ಮತ್ತ ಸೆಳೆಯಲು ಒಂದು ವಿಕೆಟ್ನ ಅವಶ್ಯಕತೆಯಿತ್ತು. ಆದರೆ ಅಕ್ಷರ್ ಪಟೇಲ್ ಅದ್ಭುತವಾಗಿ ಆಡಿದರು" ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಪಂದ್ಯದಲ್ಲಿನ ಸೋಲಿನ ಬಳಿಕ ಹೇಳಿಕೆ ನೀಡಿದ್ದಾರೆ.
ಪೈಪೋಟಿಯ ಪಂದ್ಯದಲ್ಲಿ ಗೆದ್ದ ಭಾರತ
ವೆಸ್ಟ್ ಇಂಡೀಸ್ ಎರಡನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಶಾಯ್ ಹೋಪ್ ಅವರ ಭರ್ಜರಿ ಶತಕ ಹಾಗೂ ನಾಯಕ ಪೂರನ್ 74 ರನ್ಗಳ ಸಹಾಯದಿಂದ ವೆಸ್ಟ್ ಇಂಡೀಸ್ ತಂಡ ಭರ್ಜರಿ 311 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಇದನ್ನು ಬೆನ್ನಟ್ಟಿದ ಭಾರತ ತಂಡ ಒಂದು ಹಂತದಲ್ಲಿ ಸೋಲಿನ ಆತಂಕಕ್ಕೆ ಒಳಗಾಗಿತ್ತು. ಆದರೆ ಅಕ್ಷರ್ ಪಟೇಲ್ ಅಂತಿಮ ಹಂತದಲ್ಲಿ ನಿರೀಕ್ಷಿಸದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಕೇವಲ 35 ಎಸೆತಗಳನ್ನು ಎದುರಿಸಿದ ಅಕ್ಷರ್ ಐದು ಸಿಕ್ಸರ್ ಮೂರು ಬೌಂಡರಿ ನೆರವಿನಿಂದ 64 ರನ್ ಸಿಡಿಸಿದರು. ಇದರ ಪರಿಣಾಮವಾಗಿ ಭಾರತ ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆಯೇ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ
ಇತ್ತಂಡಗಳ ಆಡುವ ಬಳಗ ಹೀಗಿದೆ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ರೋವ್ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್
ಬೆಂಚ್: ಕೀಮೋ ಪಾಲ್, ಕೀಸಿ ಕಾರ್ಟಿ
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್
ಬೆಂಚ್: ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್.