ಮಂಗಳವಾರ, ಆಗಸ್ಟ್ 1ರಂದು ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಭಾರತ ಮತ್ತು ಆತಿಥೇಯ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯಕ್ಕೂ ಮುಂಚಿತವಾಗಿ, ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಮೊದಲೆರಡು ಪಂದ್ಯಗಳಿಗೆ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲು ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಮುಂಬರುವ 2023ರ ಏಷ್ಯಾ ಕಪ್ ಮತ್ತು 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಭಾರತ ತಂಡವು ಪ್ರಯೋಗಗಳನ್ನು ಮಾಡಲು ಸಾಧ್ಯವಾಗುವ ಏಕೈಕ ಸರಣಿಯಾಗಿದೆ ಎಂದು ರವೀಂದ್ರ ಜಡೇಜಾ ತಿಳಿಸಿದರು.

ಎರಡನೇ ಏಕದಿನ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ 6 ವಿಕೆಟ್ಗಳಿಂದ ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತು. ಸರಣಿ ವಶಪಡಿಸಿಕೊಳ್ಳಲು ಉಭಯ ತಂಡಗಳು ಮೂರನೇ ಪಂದ್ಯದಲ್ಲಿ ಸೆಣಸಾಡಲಿದ್ದು, ಪಂದ್ಯ ರೋಚಕತೆಗೆ ಸಾಕ್ಷಿಯಾಗಲಿದೆ.
ಮೂರನೇ ಪಂದ್ಯದ ಪೂರ್ವ ಸಂವಾದದಲ್ಲಿ ರವೀಂದ್ರ ಜಡೇಜಾ ಮಾತನಾಡಿ, ""ಏಷ್ಯಾ ಕಪ್ ಮತ್ತು ವಿಶ್ವಕಪ್ಗಿಂತ ಮೊದಲು ನಾವು ಪ್ರಯೋಗಗಳನ್ನು ಮಾಡಲು ಮತ್ತು ಸಂಯೋಜನೆಯನ್ನು ಬದಲಾಯಿಸಬಹುದಾದ ಏಕೈಕ ಸರಣಿ ಇದಾಗಿದೆ. ವಿಶ್ವಕಪ್ ಮತ್ತು ಏಷ್ಯಾ ಕಪ್ನಲ್ಲಿ ನಾವು ಅನೇಕ ಪ್ರಯೋಗಗಳನ್ನು ಮಾಡಲು ಸಾಧ್ಯವಿಲ್ಲ,'' ಎಂದರು.
ಕಳೆದೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪಂದ್ಯ ಆಡದ ಕಾರಣ ಉಪನಾಯಕ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದರು. ಅಲ್ಲದೆ ಹೊಸ ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು.

ಹಿಂದಿನ ಪಂದ್ಯಗಳಿಂದ ಇಬ್ಬರು ಪ್ರಮುಖ ಆಟಗಾರರನ್ನು ಹೊರಗಿಡುವ ಬಗ್ಗೆ ಕೇಳಿದಾಗ, ""ನಾವು ವಿಭಿನ್ನ ವಿಷಯಗಳನ್ನು ಮತ್ತು ಸಂಯೋಜನೆಗಳನ್ನು ಪ್ರಯತ್ನಿಸುತ್ತಿದ್ದೇವೆ. ಏಕೆಂದರೆ ನಾವು ವಿಭಿನ್ನ ಬ್ಯಾಟಿಂಗ್ ಕ್ರಮಗಳನ್ನು ಪ್ರಯತ್ನಿಸುವ ಸಮಯ ಇದಾಗಿದೆ,'' ಎಂದು ರವೀಂದ್ರ ಜಡೇಜಾ ಹೇಳಿದರು.
"ತಂಡವು ಯಾವ ಸಂಯೋಜನೆಯೊಂದಿಗೆ ಆಡಬೇಕೆಂದು ಮ್ಯಾನೇಜ್ಮೆಂಟ್ ಮತ್ತು ನಾಯಕನಿಗೆ ತಿಳಿದಿದೆ. ಆದ್ದರಿಂದ ಈ ಬಗ್ಗೆ ಯಾವುದೇ ಗೊಂದಲವಿಲ್ಲ," ಎಂದು ರವೀಂದ್ರ ಜಡೇಜಾ ಕಡ್ಡಿಮುರಿದಂತೆ ಉತ್ತರಿಸಿದರು.
ಬಾರ್ಬಡೋಸ್ನಲ್ಲಿ ಭಾನುವಾರ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅವರ ಅರ್ಧಶತಕದ ನೆರವಿನಿಂದ ಆತಿಥೇಯರು 6 ವಿಕೆಟ್ಗಳ ಗೆಲುವು ದಾಖಲಿಸಿದರು. ಭಾರತೀಯ ಬೌಲರ್ಗಳು 182 ರನ್ಗಳ ಕಡಿಮೆ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲರಾದರು.
ಇದಕ್ಕೂ ಮುನ್ನ ಪ್ರವಾಸಿ ಭಾರತ ತಂಡ 40.5 ಓವರ್ಗಳಲ್ಲಿ 181 ರನ್ಗಳಿಗೆ ಗಂಟುಮೂಟೆ ಕಟ್ಟಿತು. ಆರಂಭಿಕ ಇಶಾನ್ ಕಿಶನ್ ಮಾತ್ರ ತಂಡದ ಪರ ಏಕೈಕ ಅರ್ಧಶತಕ ಗಳಿಸಿದರು.
"ನಾವು ಆಟಗಾರರ ನಡುವೆ ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸಿದ್ದರಿಂದ ನಾವು ಸೋತಿಲ್ಲ. ಕೆಲವೊಮ್ಮೆ ನಾವು ಏನನ್ನಾದರೂ ಪ್ರಯತ್ನಿಸುತ್ತೇವೆ ಮತ್ತು ಪಿಚ್ ಪರಿಸ್ಥಿತಿಗಳು ಮೊದಲಾರ್ಧದಿಂದ ದ್ವಿತೀಯಾರ್ಧಕ್ಕೆ ಬದಲಾಗುತ್ತವೆ. ಒಂದು ಸೋಲು ಗೊಂದಲ ಅಥವಾ ಅನುಮಾನ ಸೃಷ್ಟಿಸುವುದಿಲ್ಲ," ಎಂದು ರವೀಂದ್ರ ಜಡೇಜಾ ಅಭಿಪ್ರಾಯಪಟ್ಟರು.
"ನಾನು ವೈಯಕ್ತಿಕವಾಗಿ ಅನೇಕ ಪಂದ್ಯಗಳನ್ನು ಆಡಲು ಬಯಸುತ್ತೇನೆ ಮತ್ತು ಪ್ರತಿ ಪಂದ್ಯವು ನಿಮಗೆ ಏನನ್ನಾದರೂ ಕಲಿಸುತ್ತದೆ. ಆದರೆ ತಂಡವು ಹೊಸ ಆಟಗಾರರಿಗೆ ಅವಕಾಶ ನೀಡಲು ವಿನಂತಿಸಿದರೆ, ನಾನು ಅದನ್ನು ಮಾಡುತ್ತೇನೆ. ಇದು ತಂಡದ ಆಟ," ಎಂದು ಜಡೇಜಾ ತಿಳಿಸಿದರು.
ಇದೇ ವೇಳೆ ವೆಸ್ಟ್ ಇಂಡೀಸ್ನ ಯುವ ತಂಡವನ್ನು ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಹೊಗಳಿದರು. ಭಾರತ ತಂಡದಿಂದ ಉತ್ತಮ ಪ್ರದರ್ಶನ ನೀಡಲು ಅವರು ಕಲಿಯಬಹುದು ಎಂದು ಹೇಳಿದರು.
"ವೆಸ್ಟ್ ಇಂಡೀಸ್ ಯುವ ತಂಡವಾಗಿದೆ, ಅವರು ಕಲಿಯುತ್ತಿದ್ದಾರೆ ಮತ್ತು ಉತ್ತಮವಾಗುತ್ತಿದ್ದಾರೆ. ಅವರು ಹೆಚ್ಚು ಆಡಿದರೆ, ಉತ್ತಮ ಪ್ರದರ್ಶನ ನೀಡುತ್ತಾರೆ. ಅವರಲ್ಲಿ ಉತ್ತಮ ಪ್ರತಿಭೆ ಇದೆ. ಭಾರತ ತಂಡದಿಂದ ಕಲಿಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರಿಗೆ ಒಳ್ಳೆಯ ಭವಿಷ್ಯವಿದೆ," ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
"ಪ್ರತಿಯೊಬ್ಬ ಆಟಗಾರನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ, ಯಾರೂ ಪರಿಸ್ಥಿತಿಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ಶೇ.100 ನೀಡಲು ಪ್ರಯತ್ನಿಸುತ್ತಾರೆ. ಭಾರತ ಸೋತಾಗ ಮಾತ್ರ ಈ ಪ್ರಶ್ನೆಗಳು ಉದ್ಭವಿಸುತ್ತವೆ. ಇಲ್ಲಿ ಯಾರಿಗೂ ಅಹಂಕಾರವಿಲ್ಲ," ಎಂದು ರವೀಂದ್ರ ಜಡೇಜಾ ತೀಕ್ಷ್ಣವಾಗಿ ಉತ್ತರಿಸಿ ಮಾತು ಮುಗಿಸಿದರು.