ಗುರುವಾರ, ಜುಲೈ 27ರಂದು ನಡೆಯುವ ಮೂರು ಪಂದ್ಯಗಳ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಪ್ರವಾಸಿ ಭಾರತ ತಂಡ ಸೆಣಸಾಡಲಿದೆ.
ಇದಕ್ಕೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿತು. ಇದೇ ವೇಳೆ ವೆಸ್ಟ್ ಇಂಡೀಸ್ ವಿರುದ್ಧ 2006ರಿಂದ ಇದುವರೆಗೆ ಏಕದಿನ ಸರಣಿಯನ್ನು ಭಾರತ ಸೋತಿಲ್ಲ ಎಂಬುದು ಗಮನಾರ್ಹ. ಹೀಗಾಗಿ, ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಕೆರಿಬಿಯನ್ ದ್ವೀಪದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಕೊನೆಯ ಏಕದಿನ ಸರಣಿಯ ಸಂದರ್ಭದಲ್ಲಿ, ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿಯೂ ಸರಣಿಯನ್ನು 3-0 ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸರಣಿಗೆ ಸಜ್ಜಾಗುತ್ತಿರು ವೇಳೆಯಲ್ಲಿಯೇ, ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಒಂದು ಬೃಹತ್ ಮೈಲಿಗಲ್ಲು ನಿರ್ಮಿಸುವ ಸನಿಹದಲ್ಲಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲು ರವೀಂದ್ರ ಜಡೇಜಾಗೆ ಕೇವಲ 4 ವಿಕೆಟ್ಗಳ ಅವಶ್ಯಕತೆ ಇದೆ.
ವೆಸ್ಟ್ ಇಂಡೀಸ್ ವಿರುದ್ಧ ರವೀಂದ್ರ ಜಡೇಜಾ ಪ್ರಸ್ತುತ 29 ಏಕದಿನ ಪಂದ್ಯಗಳಲ್ಲಿ 41 ವಿಕೆಟ್ಗಳನ್ನು ಕಬಳಿಸುವ ಮೂಲಕ ಅನಿಲ್ ಕುಂಬ್ಳೆ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಕಪಿಲ್ ದೇವ್ 43 ವಿಕೆಟ್ ಪಡೆದು ಭಾರತದ ಪರ ಅಗ್ರಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ನ ಕರ್ಟ್ನಿ ವಾಲ್ಷ್ ಭಾರತ ವಿರುದ್ಧ 44 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಮೊದಲ ಏಕದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದ ನಂತರ ಭಾರತಕ್ಕೆ ವಾಪಸ್ಸಾದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಅವರೊಂದಿಗೆ ಹಿಂತಿರುಗಿದ್ದಾರೆ.

ಮೊಹಮ್ಮದ್ ಸಿರಾಜ್ ಅವರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ ಮತ್ತು ಅವರ ಬದಲಾಗಿ ಬ್ಯಾಕ್ಅಪ್ ಆಟಗಾರನನ್ನು ಆಯ್ಕೆ ಮಾಡಲಾಗಿಲ್ಲ.
ಮೊಹಮ್ಮದ್ ಸಿರಾಜ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಆಡಿದರು ಮತ್ತು ಟ್ರಿನಿಡಾಡ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 60 ರನ್ಗಳಿಗೆ ಐದು ವಿಕೆಟ್ ಪಡೆದರು.
ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ವಿಶ್ರಾಂತಿ ಪಡೆಯುವುದರೊಂದಿಗೆ, ಭಾರತದ ವೇಗದ ಬೌಲಿಂಗ್ ದಾಳಿಯಲ್ಲಿ ಈಗ ಜಯದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಮತ್ತು ಏಕದಿನ ಅನ್ ಕ್ಯಾಪ್ಡ್ ಮುಖೇಶ್ ಕುಮಾರ್ ಇದ್ದಾರೆ.
ಐರ್ಲೆಂಡ್ನಲ್ಲಿ ನಡೆಯುವ ಮುಂಬರುವ ಟಿ20 ಸರಣಿ ತಂಡದ ಆಯ್ಕೆಗಾಗಿ ಮೊಹಮ್ಮದ್ ಸಿರಾಜ್ ಅವರನ್ನು ಪರಿಗಣಿಸಲಾಗುವುದಿಲ್ಲ. ಆದರೆ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.