ಗುರುವಾರ, ಜುಲೈ 29ರಂದು ಬಾರ್ಬಡೋಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಪ್ರವಾಸಿ ಭಾರತ ತಂಡದ ಪರ ಕುಲದೀಪ್ ಯಾದವ್ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಕೂಡ ಮೂರು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ತಂಡವನ್ನು 114 ರನ್ಗಳಿಗೆ ಆಲೌಟ್ ಮಾಡಿತು.
ಬಳಿಕ ಇಶಾನ್ ಕಿಶನ್ 46 ಎಸೆತಗಳಲ್ಲಿ 52 ರನ್ ಗಳಿಸಿದ ಫಲವಾಗಿ ಭಾರತ ತಂಡ 22.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಭಾರತ ಗೆದ್ದ ಹೊರತಾಗಿಯೂ, ಸಂಜು ಸ್ಯಾಮ್ಸನ್ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟ ಕಾರಣ, ತಂಡದ ಮ್ಯಾನೇಜ್ಮೆಂಟ್ ಟೀಕೆ ಎದುರಿಸಬೇಕಾಯಿತು.

ನಾಯಕ ರೋಹಿತ್ ಶರ್ಮಾ ಅವರು ಇನ್ನಿಂಗ್ಸ್ ಆರಂಭಿಸದೆ, ಶುಭ್ಮನ್ ಗಿಲ್ ಜೊತೆಗೆ ಇಶಾನ್ ಕಿಶನ್ ಅವರನ್ನು ಆರಂಭಿಕರಾಗಿ ಕಳುಹಿಸಿದರು. 7ನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದರು.
ಮೊದಲ ಪಂದ್ಯದಲ್ಲಿ ಭಾರತ ತಂಡದ ಈ ಆಯ್ಕೆಯು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಗೊಂದಲಕ್ಕೀಡಾಗುವಂತೆ ಮಾಡಿದ್ದು, ಸಂಜು ಸ್ಯಾಮ್ಸನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿತ್ತು ಎಂದು ಹೇಳಿದ್ದಾರೆ.
"ಭಾರತ ತಂಡ ಇಶಾನ್ ಕಿಶನ್ ಅವರನ್ನು ಬ್ಯಾಕಪ್ ಆರಂಭಿಕನಾಗಿ ನೋಡುತ್ತಿದ್ದಾರೆ ಎಂದು ನಾನು ಭಾವಿಸಿದೆ, ಜೊತೆಗೆ ನಿಸ್ಸಂಶಯವಾಗಿ ಸಂಜು ಸ್ಯಾಮ್ಸನ್ ಬಹುಶಃ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಸ್ಯಾಮ್ಸನ್ಗೆ ಮೊದಲು ಅವಕಾಶ ಸಿಗುತ್ತದೆ ಎಂದು ನಾನು ಭಾವಿಸಿದ್ದೆ, ಹಾಗಾಗಿ ಇದು ಆಶ್ಚರ್ಯಕರವಾಗಿದೆ," ಎಂದು ವಾಸಿಂ ಜಾಫರ್ ತಿಳಿಸಿದರು.

"ಆ ಬ್ಯಾಕಪ್ ಆರಂಭಿಕ ಯಾರು? ಬಹುಶಃ ರುತುರಾಜ್ ಗಾಯಕ್ವಾಡ್ ಅವರನ್ನು ಏಷ್ಯನ್ ಗೇಮ್ಸ್ಗೆ ಆಯ್ಕೆ ಮಾಡಲಾಗಿದೆ. ಮತ್ತೆ ಆ ಮೂರನೇ ಓಪನರ್ ಯಾರೆಂದು ನನಗೆ ತಿಳಿದಿಲ್ಲ," ಎಂದು ವಾಸಿಂ ಜಾಫರ್ ಹೇಳಿದರು.
ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರನ್ನು ಏಕದಿನ ತಂಡದಲ್ಲಿ ಸೇರಿಸಲಾಗಿದೆ. ಆದರೆ, ಮುಂಬರುವ ಏಷ್ಯನ್ ಗೇಮ್ಸ್ನಲ್ಲಿ ಅವರನ್ನು ಭಾರತ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ. 2023ರ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮತ್ತಷ್ಟು ನಿರಾಸೆ ವ್ಯಕ್ತಪಡಿಸಿದರು.
"ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೋಡದೆ ನನಗೆ ಸ್ವಲ್ಪ ಆಶ್ಚರ್ಯವಾಗಿದೆ ಮತ್ತು ಅಕ್ಷರ್ ಪಟೇಲ್ ಅವರನ್ನು ನೋಡದಿರುವುದು ನನಗೆ ಇನ್ನಷ್ಟು ಅಚ್ಚರಿ ತರಿಸಿದೆ. ಏಕೆಂದರೆ ರವೀಂದ್ರ ಜಡೇಜಾ ಅವರು ಅಲಭ್ಯರಾದಾಗ ಅಕ್ಷರ್ ಪಟೇಲ್ ನಿಜವಾಗಿಯೂ ಬಾಲ್ ಮತ್ತು ಬ್ಯಾಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು," ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟರು.
ಎರಡನೇ ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪಿನ್ನರ್ಗಳನ್ನು ಆಡಿಸುವ ಬಗ್ಗೆ ಯೋಚಿಸಬೇಕಾಗಿದೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ 7 ಮತ್ತು 8ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು,'' ಎಂದು ವಾಸಿಂ ಜಾಫರ್ ಹೇಳಿದರು.