ಗುರುವಾರ, ಆಗಸ್ಟ್ 3ರಂದು ಟ್ರಿನಿಡಾಡ್ನ ತರೂಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಪ್ರವಾಸಿ ಭಾರತ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಕೋಲಸ್ ಪೂರನ್ ಮತ್ತು ನಾಯಕ ರೋವ್ಮನ್ ಪೊವೆಲ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.

150 ರನ್ಗಳ ಗೆಲುವಿನ ಗುರಿ ಪಡೆದ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ 4 ರನ್ಗಳ ಸೋಲು ಅನುಭವಿಸಿತು. ಖಾಯಂ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ತಂಡ ಕಳಪೆ ಬ್ಯಾಟಿಂಗ್ನಿಂದಾಗಿ ಸೋಲು ಕಂಡಿದೆ.
ಭಾರತ ತಂಡದ ಇನ್ನಿಂಗ್ಸ್ ತೆರೆದ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ದೊಡ್ಡ ಜೊತೆಯಾಟ ನೀಡುವಲ್ಲಿ ವಿಫಲರಾದರು. ಗಿಲ್ 3 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಸೂರ್ಯಕುಮಾರ್ ಯಾದವ್ 21 ಎಸೆತಗಳಲ್ಲಿ 21 ರನ್, ಚೊಚ್ಚಲ ಪಂದ್ಯವಾಡಿದ ತಿಲಕ್ ವರ್ಮಾ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 39 ರನ್, ನಾಯಕ ಹಾರ್ದಿಕ್ ಪಾಂಡ್ಯ 19 ರನ್, ಸಂಜು ಸ್ಯಾಮ್ಸನ್ 12 ರನ್, ಅಕ್ಷರ್ ಪಟೇಲ್ 13 ರನ್, ಕುಲದೀಪ್ ಯಾದವ್ 3 ರನ್, ಅರ್ಶ್ದೀಪ್ ಸಿಂಗ್ 12 ರನ್ ಗಳಿಸಿದರು.
ಬೌಲಿಂಗ್ನಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಒಬೆಡ್ ಮೆಕಾಯ್, ಅಲ್ಝಾರಿ ಜೋಸೆಫ್, ರೊಮಾರಿಯೋ ಶಫರ್ಡ್ ತಲಾ ಎರಡು ವಿಕೆಟ್ ಪಡೆದರೆ, ಉಳಿದಂತೆ ಅಕೀಲ್ ಹೊಸೈನ್ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ನ ಇನ್ನಿಂಗ್ಸ್ ಆರಂಭಿಸಿದ್ದ ಬ್ರಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಮೊದಲ ವಿಕೆಟ್ಗೆ 4.1 ಓವರ್ಗಳಲ್ಲಿ 29 ರನ್ಗಳ ಜೊತೆಯಾಟ ನೀಡಿದರು.
ಬ್ರಾಂಡನ್ ಕಿಂಗ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 28 ರನ್ ಗಳಿಸಿದರೆ, ನಂತರ ಬಂದ ಜಾನ್ಸನ್ ಚಾರ್ಲ್ಸ್ 3 ರನ್ ಗಳಿಸಿ ಔಟಾದರು.
ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ 34 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರೋವ್ಮನ್ ಪೊವೆಲ್ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 48 ರನ್ ಗಳಿಸಿ ಅರ್ಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದರು.
ಶಿಮ್ರಾನ್ ಹೆಟ್ಮೆಯರ್ 10 ರನ್ ಮತ್ತು ರೊಮಾರಿಯೋ ಶಫರ್ಡ್ ಅಜೇಯ 4 ರನ್ ಮತ್ತು ಜೇಸನ್ ಹೋಲ್ಡರ್ ಅಜೇಯ 6 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ಸಮೀಪಿಸಲು ನೆರವಾದರು.
ಬೌಲಿಂಗ್ನಲ್ಲಿ ಭಾರತ ತಂಡದ ಪರ ಅರ್ಶ್ದೀಪ್ ಸಿಂಗ್ 4 ಓವರ್ಗಳಲ್ಲಿ 31 ರನ್ ನೀಡಿ 2 ವಿಕೆಟ್, ಯುಜ್ವೇಂದ್ರ ಚಹಾಲ್ 3 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.