ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭರ್ಜರಿಯಾಗಿ ಮಣಿಸಿದ್ದು ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ದೆಹಲಿಯಲ್ಲಿ ಅಕ್ಟೋಬರ್ 11 ಬುಧವಾರದಂದು ಭಾರತದ ಎರಡನೇ ಪಂದ್ಯವನ್ನು ಅಫ್ಘಾನಿಸ್ತಾನ ತಂಡದ ವಿರುದ್ಧ ಆಡಲಿದೆ. ವಿರಾಟ್ ಕೊಹ್ಲಿ ತವರಿನಲ್ಲಿ ಆಡುತ್ತಿರುವ ಪ್ರಪ್ರಥಮ ವಿಶ್ವಕಪ್ ಪಂದ್ಯ ಇದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಮಧ್ಯೆ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಆ ಒಂದು ಮುಖಾಮುಖಿ ತೀವ್ರ ಕುತೂಹಲ ಮೂಡಿಸಿದೆ. ಅದುವೇ ವಿರಾಟ್ ಕೊಹ್ಲಿ ಹಾಗೂ ಅಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್. ಆದರೆ ಕುತೂಹಲಕಾರಿ ಬೆಳವಣಿಗೆಯಲ್ಲಿ ಈ ಮುಖಾಮುಖಿಯನ್ನು ತಪ್ಪಿಸುವಂಥಾ ಪ್ರಯತ್ನ ನಡೆಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ತವರು ದೆಹಲಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸುತ್ತಿರುವುದು ಗಮನಾರ್ಹ ಅಂಶ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಎಸೆತವನ್ನು ಹಿಗ್ಗಾಮುಗ್ಗ ದಂಡಿಬೇಕು ಎನ್ನುವ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ. ಅಲ್ಲದೆ ಕೊಹ್ಲಿಯ ದಾಳಿಯನ್ನು ಈ ಆಟಗಾರ ಯಾವ ರೀತಿಯಾಗಿ ಎದುರಿಸಲಿದ್ದಾರೆ ಎನ್ನುವ ಬಗ್ಗೆಯೂ ಕುತೂಹಲ ಹೊಂದಿದ್ದಾರೆ.
ಆದರೆ ಈ ಮುಖಾಮುಖಿ ಅಫ್ಘಾನಿಸ್ತಾನ ತಂಡಕ್ಕೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿಯಂಥಾ ದಿಗ್ಗಜ ಆಟಗಾರನನ್ನು ಕೆಣಕಿರುವ ನವೀನ್ ಉಲ್ ಹಕ್ ಅವರನ್ನು ಕೊಹ್ಲಿ ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿಯನ್ನು ಕೆಣಕಿದಷ್ಟು ಪುಟಿದೇಳುವಂಥಾ ಸಾಮರ್ಥ್ಯದ ಆಟಗಾರ. ಅಂಥಾ ಸಂದರ್ಭದಲ್ಲಿ ಅವರ ಪ್ರದರ್ಶನಗಳು ಹೇಗಿರುತ್ತವೆ ಎನ್ನುವುದು ಈಗಾಲೇ ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ.
ವಿರಾಟ್ ಕೊಹ್ಲಿಯ ಈ ಸಾಮರ್ಥ್ಯದ ಬಗ್ಗೆ ಅಫ್ಘಾನಿಸ್ತಾನ ತಂಡಕ್ಕೂ ಸ್ಪಷ್ಟವಾಗಿ ಅರಿವಿದೆ. ಈ ಕಾರಣಕ್ಕಾಗಿಯೇ ನವೀನ್ ಉಲ್ ಹಕ್ ಅವರನ್ನು ಈ ಪಂದ್ಯದಲ್ಲಿ ಆಡಿಬೇಕಾ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿದೆ ಅಫ್ಘಾನಿಸ್ತಾನ ತಂಡ. ಹೀಗಾಗಿ ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ನವೀನ್ ಉಲ್ ಹಕ್ ಅಫ್ಘಾನಿಸ್ತಾನ ತಂಡದ ಪರವಾಗಿ ಆಡುವ ಸಾಧ್ಯತೆ ಕಡಿಮೆಯಿದೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಮಧ್ಯೆ ಈ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ಮುಕ್ತಾಯದ ಬಳಿಕ ಶೇಕ್ ಹ್ಯಾಂಡ್ ಸಂದರ್ಭದಲ್ಲಿ ಇದು ಉಲ್ಬಣಿಸಿತ್ತು. ಇದೇ ವಿಚಾರವಾಗಿ ಎಲ್ಎಸ್ಜಿ ಮೆಂಟರ್ ಗೌತಮ್ ಗಂಭೀರ್ ಕೂಡ ವಿರಾಟ್ ಕೊಹ್ಲಿ ಜೊತೆಗೆ ಮಾತಿನ ಚಕಮಕಿಗೆ ಇಳಿಯುವ ಮೂಲಕ ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯ ನಂತರ ನವೀನ್ ಉಲ್ ಹಕ್ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯನ್ನು ಕೆಣಕುವಂಥಾ ಕೆಲ ಪೋಸ್ಟ್ಗಳನ್ನು ಮಾಡಿ ಮತ್ತಷ್ಟು ಅಭಿಮಾಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ನವೀನ್ ಉಲ್ ಹಕ್ಗೆ ಭಾರತದಲ್ಲಿ ಹೋದಕ್ಕೆಲ್ಲಾ 'ಕೊಹ್ಲಿ' ಘೋಷಣೆಯ ಸ್ವಾಗತಗಳೇ ದೊರೆಯುತ್ತಿದೆ.
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಎಲ್ಲಾ ವಿಭಾಗದಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರೂ ಬಳಿಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ಅಮೋಘ ಪ್ರದರ್ಶನದಿಂದಾಗಿ ಭಾರತ ಬರೊಬ್ಬರಿ 6 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಲು ಕಾರಣವಾಯಿತು. ಈ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಅಫ್ಘಾನಿಸ್ತಾನ ಭಾರತ ತಂಡದಿಂದ ಕಠಿಣ ಸವಾಲನ್ನು ಎದುರಿಸುವುದು ನಿಶ್ಚಿತ.
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಶಾರ್ದೂಲ್ ಠಾಕೂರ್.
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.