ಭಾನುವಾರ, ಆಗಸ್ಟ್ 13ರಂದು ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ಗಳಿಂದ ಹೀನಾಯ ಸೋತಿದ್ದಲ್ಲದೆ, 3-2 ಅಂತರದಿಂದ ಸರಣಿಯನ್ನೂ ಕಳೆದುಕೊಂಡಿತು.
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು ಸೋತ ಭಾರತ ತಂಡದ ವಿರುದ್ಧ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ತೀವ್ರವಾಗಿ ಕಿಡಿಕಾರಿದ್ದಾರೆ. ಇದಕ್ಕೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ತಿಳಿಸಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾದ ವೆಸ್ಟ್ ಇಂಡೀಸ್ ವಿರುದ್ಧ ಸೋತಿರುವುದು ದೊಡ್ಡ ಚಿಂತೆಗೆ ಕಾರಣವಾಗಿದೆ ಎಂದು ವೆಂಕಟೇಶ್ ಪ್ರಸಾದ್ ಕ್ರೀಡಾ ಜಗತ್ತಿಗೆ ನೆನಪಿಸಿದ್ದಾರೆ.
ಇನ್ನು ಏಕದಿನ ಸರಣಿಯಲ್ಲೂ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಸವಾಲು ನೀಡಿತು. ಕೊನೆಗೆ ಭಾರತ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಆದರೆ ಭಾರತದ ಪ್ರದರ್ಶನವು ತಮ್ಮ ಶ್ರೇಷ್ಠತೆಗೆ ತಕ್ಕುದಾಗಿ ಇರಲಿಲ್ಲ ಎಂದು ಟೀಕಿಸಿದ್ದಾರೆ.
ಭಾರತ ತಂಡದ ಕಳಪೆ ಪ್ರದರ್ಶನದ ಬಗ್ಗೆ ಬಹಿರಂಗವಾಗಿ ಮಾತನಾಡುವ ವೆಂಕಟೇಶ್ ಪ್ರಸಾದ್, ವೆಸ್ಟ್ ಇಂಡೀಸ್ ವಿರುದ್ಧದ ಕಳಪೆ ಪ್ರದರ್ಶನದ ನಂತರ ಭಾರತ ತಂಡವನ್ನು X (ಟ್ವಿಟ್ಟರ್) ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಜಾಡಿಸಿದ್ದಾರೆ.
ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಭಾರತ ತಂಡವು ಅತ್ಯಂತ ಸಾಮಾನ್ಯ ಪ್ರದರ್ಶನ ನೀಡಿದೆ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹೇಳಿದರು.
ಇದೀಗ ವ್ಯಕ್ತಿಗಳನ್ನು ಜವಾಬ್ದಾರರನ್ನಾಗಿ ಮಾಡುವ ಸಮಯ ಬಂದಿದೆ ಮತ್ತು ಈ ಸೋಲುಗಳನ್ನು 'ಕಾರ್ಪೆಟ್ ಅಡಿಯಲ್ಲಿ' ಬ್ರಷ್ ಮಾಡಬೇಡಿ ಎಂದರು. ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ20 ತಂಡಕ್ಕೆ ಪಂದ್ಯಗಳನ್ನು ಗೆಲ್ಲಲು ಹಸಿವು ಮತ್ತು ಕಿಚ್ಚಿನ ಕೊರತೆಯಿದೆ ಎಂದು ಹೇಳಲು ಕರ್ನಾಟಕದ ಮಾಜಿ ವೇಗಿ ವೆಂಕಿ ಹಿಂಜರಿಯಲಿಲ್ಲ.
ಭಾರತ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಟೀಮ್ ಮ್ಯಾನೇಜ್ಮೆಂಟ್ ಕುರಿತು ವೆಂಕಟೇಶ್ ಪ್ರಸಾದ್ ಅವರ ಟ್ವೀಟ್ಗಳ ಪ್ರತ್ಯುತ್ತರಗಳಲ್ಲಿ ಎಕ್ಸ್ ಬಳಕೆದಾರರು ಅಭಿಪ್ರಾಯ ಕೇಳಿದರು. ಇದಕ್ಕೆ ವೆಂಕಟೇಶ್ ಪ್ರಸಾದ್ ಅವರು ಟೀಂ ಮ್ಯಾನೇಜ್ಮೆಂಟ್ ಅನ್ನೇ ಹೊಣೆಗಾರರನ್ನಾಗಿಸಬೇಕು ಎಂದರು.
"ಮ್ಯಾನೇಜ್ಮೆಂಟ್ ಏನು ಮಾಡುತ್ತಿದೆ ಎಂಬುದರ ಬಗ್ಗೆ ತಂಡಕ್ಕೆ ಯಾವುದೇ ತಿಳುವಳಿಕೆ ಇಲ್ಲ. ಅವರು ಸೋಲಿಗೆ ಜವಾಬ್ದಾರರು ಮತ್ತು ಜವಾಬ್ದಾರರಾಗಿರಬೇಕು. ಎಂಎಸ್ ಧೋನಿಯಂತೆ ಯೋಚಿಸುವವರು ತಂಡದಲ್ಲಿ ಇಲ್ಲ. ಆಯ್ಕೆ ಪ್ರಕ್ರಿಯೆಯನ್ನು ಇದೀಗ ದುರುಪಯೋಗಪಡಿಸಿಕೊಳ್ಳಲಾಗಿದೆ. ಆಯ್ಕೆಯಲ್ಲಿ ಬೇಡದ ಸಂಗತಿಗಳು ತುಂಬಾ ನಡೆಯುತ್ತಿವೆ," ಎಂದು ಹರಿಹಾಯ್ದರು.
"ಭಾರತ ತಂಡ ತನ್ನ ಕೌಶಲ್ಯವನ್ನು ಸುಧಾರಿಸಬೇಕಾಗಿದೆ. ತಂಡದಲ್ಲಿನ ಗೆಲುವಿನ ಹಸಿವು ಮತ್ತು ಕಿಚ್ಚಿನ ಕೊರತೆ ಎದ್ದು ಕಾಣುತ್ತದೆ. ವಿಶೇಷವಾಗಿ ನಾಯಕ ಹಾರ್ದಿಕ್ ಪಾಂಡ್ಯ ಅವರಲ್ಲಿ. ಬೌಲರ್ಗಳು ಬ್ಯಾಟ್ ಮಾಡಲು ಸಾಧ್ಯವಿಲ್ಲ, ಬ್ಯಾಟ್ಸ್ಮನ್ಗಳು ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಯಾರೋ ನಿಮ್ಮ ಮೆಚ್ಚಿನ ಆಟಗಾರ ಇದ್ದರೆ ನೋಡಿ, ಇಲ್ಲದಿದ್ದರೆ ಇಂತಹ ಪುರುಷರನ್ನು ನೋಡದೆ ಕುರುಡರಾಗಿರುವುದು ಒಳ್ಳೆಯದು," ಎಂದು ವೆಂಕಟೇರ್ಶ ಪ್ರಸಾದ್ ಮಾರ್ಮಿಕವಾಗಿ ಕಿಡಿಕಾರಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಏಷ್ಯಾ ಕಪ್ನಿಂದ ವಿಶ್ವಕಪ್ವರೆಗೆ ಭಾರತ ತಂಡ ಹಲವು ವೈಟ್ ಬಾಲ್ ಪಂದ್ಯಾವಳಿಗಳನ್ನು ಸೋತಿದೆ. ದೊಡ್ಡ ಪಂದ್ಯಾವಳಿಗಳನ್ನು ಗೆಲ್ಲುವ ಟಿ20 ತಂಡವನ್ನು ಕಣಕ್ಕಿಳಿಸಲು ಭಾರತ ಹೋರಾಡುತ್ತಿದೆ. ಭಾರತ ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯಲ್ಲಿ ಕೂಡ ಮುಖಭಂಗ ಅನುಭವಿಸಿದೆ.