
ಕರಾಚಿ: ಕೋವಿಡ್-19 ಸೋಂಕಿತರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಕೊರೊನಾ ಸಮಸ್ಯೆಯಲ್ಲಿರುವ ಭಾರತದ ಪರ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಧ್ವನಿಯೆತ್ತಿದ್ದಾರೆ.
ಭಾರತದಲ್ಲಿ ಶನಿವಾರ (ಏಪ್ರಿಲ್ 24) ಕೊರೊನಾವೈರಸ್ ಹೊಸ ಸೋಂಕಿತರ ಸಂಖ್ಯೆ 3,46,786 ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 2,624ರಷ್ಟಿದೆ.
'ಈಗ ನಡೆಯುತ್ತಿರುವ ಪಿಡುಗಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೋದು ಯಾವುದೇ ಸರ್ಕಾರಕ್ಕೂ ಸವಾಲಿನ ಸಂಗತಿ. ನಾನು ಈ ಮೂಲಕ ನಮ್ಮ ಸರ್ಕಾರ ಮತ್ತು ಅಭಿಮಾನಿಗಳಲ್ಲಿ ಭಾರತಕ್ಕೆ ಬೆಂಬಲ ನೀಡುವಂತೆ ಕೋರಿಕೊಳ್ಳುತ್ತೇನೆ,' ಎಂದು ಅಖ್ತರ್ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ನಲ್ಲಿ ಮಾತು ಮುಂದುವರೆಸಿದ ಅಖ್ತರ್, 'ಭಾರತಕ್ಕೆ ಬಹಳಷ್ಟು ಆಮ್ಲಜನಕದ ಟ್ಯಾಂಕ್ಗಳು ಬೇಕಿವೆ. ಹೀಗಾಗಿ ಅವರಿಗೆ ಆಮ್ಲಜನಕದ ಟ್ಯಾಂಕ್ಗಳನ್ನು ನೀಡಲು ದೇಣಿಗೆ ಸಂಗ್ರಹಿಸುವಂತೆ ನಿಮ್ಮೆಲ್ಲರಲ್ಲಿ ನಾನು ಕೋರಿಕೊಳ್ಳುತ್ತೇನೆ,' ಎಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಕೋರಿಕೊಂಡಿದ್ದಾರೆ.