
ಅಹ್ಮದಾಬಾದ್: ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಬರೋಡಾ ತಂಡದ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಭಾರತ-ಇಂಗ್ಲೆಂಡ್ ಏಕದಿನ ಸರಣಿಗಾಗಿ ಭಾರತ ತಂಡಕ್ಕೆ ಕರೆ ನೀಡುವ ನಿರೀಕ್ಷೆಯಿದೆ. ಸದ್ಯ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ.
ವಿಜಯ್ ಹಜಾರೆಯಲ್ಲಿ ಪ್ರಸಿದ್ಧ್ ಕೃಷ್ಣ ಕರ್ನಾಟಕದ ಪರ ಒಟ್ಟು 14 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಹೀಗಾಗಿ ಪ್ರಸಿದ್ಧ್ಗೆ ಟೀಮ್ ಇಂಡಿಯಾಕ್ಕೆ ಚೊಚ್ಚಲ ಕರೆಯ ನಿರೀಕ್ಷೆಯಿದೆ. ಇನ್ನು ಬರೋಡಾ ಪರ ಕೃನಾಲ್ ಉತ್ತಮ ರನ್ ಬಾರಿಸಿದ್ದರು. ಅವರಿಗೂ ಏಕದಿನ ತಂಡಕ್ಕೆ ಕರೆ ಬರುವ ಸಾಧ್ಯತೆಯಿದೆ.
ಮದುವೆ ಸಂಭ್ರಮದ ಬ್ಯುಸಿಯಲ್ಲಿರುವ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಭಾರತ ತಂಡದಲ್ಲಿಲ್ಲ. ಹೀಗಾಗಿ ಪ್ರತಿಭಾನ್ವಿತ ಆಟಗಾರ ಪ್ರಸಿದ್ಧ್ ಅವರು ಮೊಹಮ್ಮದ್ ಸಿರಾಜ್, ಟಿ ನಟರಾಜನ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಭುವನೇಶ್ವರ್ ಕುಮಾರ್ ಅವರ ಜೊತೆಗಿದ್ದು ತಂಡಕ್ಕೆ ಬಲ ತುಂಬುವುದನ್ನು ನಿರೀಕ್ಷಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುವ ಕೃನಾಲ್ ಪಾಂಡ್ಯ, ಟಿ20ಐನಲ್ಲಿ ಭಾರತ ಪರ 18 ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೃನಾಲ್ ಏಕದಿನಕ್ಕೆ ಪಾದಾರ್ಪಣೆ ಮಾಡಿಲ್ಲ. ಹೀಗಾಗಿ ಇಂಗ್ಲೆಂಡ್ 50 ಓವರ್ಗಳ ಪಂದ್ಯಗಳಿಗಾಗಿ 18 ಜನರ ಭಾರತ ತಂಡದಲ್ಲಿ ಕೃನಾಲ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.