ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟಂಬರ್ 14ರ ಭಾನುವಾರ ದುಬೈನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ 7 ವಿಕೆಟ್ ಜಯ ಸಾಧಿಸಿತು. ಪಂದ್ಯಕ್ಕೂ ಹೆಚ್ಚು ಭಾರತೀಯ ಆಟಗಾರರು, ಪಾಕ್ ಆಟಗಾರರಿಗೆ ಪಂದ್ಯ ಮುಗಿದ ಬಳಿಕ ಕೈ ಕುಲುಕಲಿಲ್ಲ ಎಂಬುದೇ ದೊಡ್ಡ ಚರ್ಚಾ ವಸ್ತುವಾಗಿದೆ. ಈ ಬಗ್ಗೆ ಈಗಾಗಲೇ ಐಸಿಸಿಗೆ, ಪಿಸಿಬಿ ದೂರನ್ನು ಸಹ ನೀಡಿದೆ. ಸೆಪ್ಠಂಬರ್ 21 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಕೈ ಕುಲುಕತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಉತ್ತರ ಇಲ್ಲಿದೆ.
ಭಾರತ ಏಷ್ಯಾ ಕಪ್ ಟಿ20 ಟೂರ್ನಿಯ "ಎ" ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ. ಗುಂಪು ಹಂತದಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳು ಸೂಪರ್ ಫೋರ್ ಹಂತವನ್ನು ಪ್ರವೇಶಿಸಲಿವೆ. ಈಗಾಗಲೇ ಪಾಕ್ ಓಮನ್ ವಿರುದ್ಧ ಜಯ ಸಾಧಿಸಿದ್ದು, ಯುಎಇ ವಿರುದ್ಧ ಮುಂಬರುವ ಪಂದ್ಯದಲ್ಲಿ ಜಯ ಸಾಧಿಸಿದಲ್ಲಿ, ಸೂಪರ್ ಫೋರ್ ಹಂತಕ್ಕೆ ಹೋಗಬಹುದಾಗಿದೆ. ಸೂಪರ್ 4 ಹಂತದಲ್ಲಿ ಸ್ಥಾನ ಪಡೆದ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ.

ಗ್ರೂಪ್ ಎ ನಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆದ ತಂಡಗಳು ಪರಸ್ಪರ ಕಾದಾಟ ನಡೆಸಲಿವೆ. ಈ ಲೆಕ್ಕಾಚಾರದಲ್ಲಿ ಭಾರತ ಹಾಗೂ ಪಾಕ್ ತಂಡಗಳು ಸೆಪ್ಟಂಬರ್ 21 ರಂದು ಮತ್ತೆ ಕಾದಾಟ ನಡೆಸುವ ಸಾಧ್ಯತೆ ಇದೆ. ಮುಂದಿನ ಭಾನುವಾರ ನಡೆಯುವ ಪಂದ್ಯದಲ್ಲಿ ಟೀಮ್ ಇಂಡಿಯಾ, ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಿಕೊಳ್ಳುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ? ಪಾಕ್ ಆಟಗಾರರೊಂದಿಗೆ ಭಾರತೀಯ ಆಟಗಾರರು ಕೈ ಕುಲುಕದೇ ಇರುವ ನಿರ್ಣಯ ಬರೀ ಒಂದು ಪಂದ್ಯಕ್ಕೆ ಸೀಮಿತವಾಗಿದೆಯಾ? ಎಂಬುದಾಗಿದೆ. ಇದಕ್ಕೆ ಬಿಸಿಸಿಐ ಮೂಲಗಳು ಉತ್ತರ ನೀಡಿದ್ದು, ಪಾಕಿಸ್ತಾನ ವಿರುದ್ಧ ಈ ಟೂರ್ನಿಯಲ್ಲಿ ಯಾವಾಗಲಾದ್ರೂ ಪಂದ್ಯಗಳು ನಡೆದಲ್ಲಿ, ನಾವು ಎದುರಾಳಿ ಆಟಗರರೊಂದಿಗೆ ಕೈ ಕುಲುಕುವುದಿಲ್ಲ ಎಂದು ತಿಳಿಸಿದೆ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಫೈನಲ್ ಆಡಿದರೂ, ಭಾರತ ತಂಡವು ಪಾಕಿಸ್ತಾನಿ ತಂಡದೊಂದಿಗೆ ಕೈಕುಲುಕುವುದಿಲ್ಲ.
ಸಾಮಾನ್ಯವಾಗಿ ಟಾಸ್ ಸಮಯದಲ್ಲಿ ಉಭಯ ತಂಡಗಳ ನಾಯಕರು ಪರಸ್ಪರ ಕೈ ಕುಲುಕುತ್ತಾರೆ. ಆದರೆ ಭಾನುವಾರ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್, ಟಾಸ್ ವೇಳೆಯೂ ಪಾಕ್ ನಾಯಕನ ಕೈಕುಲುಕಲಿಲ್ಲ. ಅಲ್ಲದೆ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ನೇರವಾಗಿ ಡ್ರೆಸ್ಸಿಂಗ್ ರೂಮ್ನತ್ತ ಮುಖ ಮಾಡಿದ್ದಾರೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೀಕೆಗಳನ್ನು ಮಾಡಿದೆ. ಭಾರತೀಯ ಆಟಗಾರರು ಕ್ರೀಡಾ ಮನೋಭಾವವನ್ನು ಮರೆತಿದ್ದಾರೆ ಎಂದು ಐಸಿಸಿಗೆ ದೂರನ್ನು ಸಹ ನೀಡಿದೆ. ಅಲ್ಲದೆ ಟೀಮ್ ಇಂಡಿಯಾ ನಡುವಳಿಕೆಯ ವಿರುದ್ಧ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.