India Vs Pakistan Match: ಅನಾರೋಗ್ಯದ ಕಾರಣದಿಂದ ಕಳೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕಾಣಿಸಿಕೊಂಡಿರಲಿಲ್ಲ. ಆದರೆ ಪಾಕಿಸ್ತಾನ ವಿರುದ್ಧ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಓಪನರ್ ಅಭಿಷೇಕ್ ಶರ್ಮಾ ಕಣಕ್ಕಿಳಿಯುವ ಬಗ್ಗೆ ಸುಳಿವು ನೀಡಿದ್ದಾರೆ.
ಆಕ್ರಮಣಕಾರಿ ಎಡಗೈ ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾ ಅವರು, ಹೊಟ್ಟೆನೋವು ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ದರಿಂದ ಈ ಹಿಂದಿನ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ತೀವ್ರ ಜ್ವರದಿಂದ ಬಳಲುತ್ತಿದ್ದರೂ ಅಭಿಷೇಕ್ ಸಹ ಮುಂಬೈನಲ್ಲಿ ನಡೆದ ಯುಎಸ್ಎ ವಿರುದ್ಧದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಪರವಾಗಿ ಆಡಿದ್ದರು. ಆದರೆ, ನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ದೆಹಲಿಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಕೇವಲ ಒಂದು ದಿನ ಮುಂಚಿತವಾಗಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಈ ಹಿಂದೆ ಅಭಿಷೇಕ್ ಶರ್ಮಾ ವಿರುದ್ಧ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. "ಭಾರತ ತನ್ನ ಅತ್ಯಂತ ಬಲಿಷ್ಠ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯಬೇಕೆಂದು ಪಾಕಿಸ್ತಾನ ಬಯಸುತ್ತಿದೆ. ನಿಜವಾಗಿಯೂ ನಾನು ಆಶಿಸುತ್ತೇನೆ. ಅಭಿಷೇಕ್ ಶರ್ಮಾ ಉತ್ತಮ ಆಟಗಾರ ಎಂದು ನಮಗೆಲ್ಲರಿಗೂ ತಿಳಿಸಿದೆ. ನಾಳೆ ಅವರು ಆಡುತ್ತಾರೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಏಕೆಂದರೆ ನಾವು ಎದುರಿಸಬೇಕೆಂದು ಬಯಸುವುದು ಅವರ ಅತ್ಯುತ್ತಮ ತಂಡವನ್ನೇ. ಆದ್ದರಿಂದ ಅವರು ಚೇತರಿಸಿಕೊಂಡು ನಾಳಿ ಆಡಲು ಸಾಧ್ಯವಾಗಲಿ ಎಂಬುದು ನನ್ನ ಆಶಯ," ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು, ತುಂಟ ನಗೆ ಮೂಲಕ ಹಾಸ್ಯಮಯ ಮಾಡುತ್ತಾ ಪ್ರತಿಕ್ರಿಯೆ ನೀಡಿದರು. "ಪಾಕಿಸ್ತಾನ ಅಭಿಷೇಕ್ ಶರ್ಮಾ ಆಡಬೇಕು ಎಂದು ಬಯಸಿದರೆ, ಅವರು ಖಂಡಿತವಾಗಿಯೂ ಆಡುತ್ತಾರೆ," ಎಂದು ಸೂರ್ಯಕುಮಾರ್ ಯಾದವ್ ಅವರು ನಗುಮುಖದೊಂದಿಗೆ ಹೇಳಿದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಆಡಿಸುವ ಬಗ್ಗೆ ಅಂತಿಮ ತೀರ್ಮಾನವನ್ನು ಪಂದ್ಯದ ದಿನವೇ ತೆಗೆದುಕೊಳ್ಳಲಾಗುವುದು ಎಂದು ಟೀಮ್ ಇಂಡಿಯಾ ಸ್ಪಷ್ಟಪಡಿಸಿದೆ. ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಎಡಗೈ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಅಲಭ್ಯರಾದ್ರೆ, ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಆಡಿದುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಕೊಲಂಬೊನಲ್ಲಿ ಅಭಿಷೇಕ್ ಶರ್ಮಾ ಆಡಿದರೆ, ಸ್ಪಿನ್ ಬೌಲಿಂಗ್ ವಿರುದ್ಧ ಅವರ ಅದ್ಭುತ ಬ್ಯಾಟಿಂಗ್ ಸಾಮರ್ಥ್ಯದ ಕಾರಣದಿಂದ ಟೀಮ್ ಇಂಡಿಯಾಗೆ ದೊಡ್ಡ ಲಾಭವಾಗಲಿದೆ. ಅಭಿಷೇಕ್ ಮೂಲತಃ ಐಪಿಎಲ್ನಲ್ಲಿ ಸ್ಪಿನ್ ಬೌಲರ್ಗಳನ್ನು ಧೂಳಿಪಟ ಮಾಡಿದ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ವೇಗಿಗಳಿಗೂ ಚಳಿ ಬಿಡಿಸಿದ ಉದಾಹರಣೆಗಳಿವೆ. ಅದರಲ್ಲೂ ಪಾಕಿಸ್ತಾಬ ಅಂತಾ ಬಂದ್ರೆ ಸಾಕು ಅವರು ಸಿಡಿದೇಳುವುದತೂ ಪಕ್ಕಾ. ಈಗಾಗಲೇ ಅವರು ಈ ಹಿಂದೆ ಪಾಕ್ ಬೌಲರ್ಗಳಿಗೆ ನಡುಕ ಹುಟ್ಟಿಸಿದ್ದಾರೆ. ಅಷ್ಟರ ಮಟ್ಟಿಗೆ ಬ್ಯಾಟ್ ಬೀಸಿ ಗಮನ ಸೆಳೆದಿದ್ದರು. ಮತ್ತೆ ಒಂದು ವೇಳೆ ಭಾನುವಾರ ಕಣಕ್ಕಿಳಿದರೆ, ಪಾಕಿಸ್ತಾನ ಬೌಲರ್ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಬ್ಯಾಟ್ ಮೂಲಕ ಉತ್ತರ ಕೊಡುವುದಂತೂ ಪಕ್ಕಾ ಎನ್ನಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಬಳಿಕ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳದಿದ್ದಾರೆ.