ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧದ 2023ರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಕೇವಲ 191 ರನ್ಗಳಿಗೆ ಆಲೌಟ್ ಆದ ನಂತರ, ಪಾಕಿಸ್ತಾನದ ಲೆಜೆಂಡ್ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಬಾಬರ್ ಅಜಂ ನಾಯಕತ್ವದ ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರು ಉತ್ತಮ ಜೊತೆಯಾಟದ ಮೂಲಕ ಪಾಕಿಸ್ತಾನ ದೊಡ್ಡ ಮೊತ್ತದ ಮುನ್ಸೂಚನೆ ನೀಡಿತ್ತು. ಆದರೆ ಅವರ ವಿಕೆಟ್ ಬೀಳುತ್ತಿದ್ದಂತೆ ಒಂದರ ಹಿಂದೆ ಒಂದು ವಿಕೆಟ್ಗಳನ್ನು ಕಳೆದುಕೊಳ್ಳಬೇಕಾಯಿತು.
ಒಂದು ಹಂತದಲ್ಲಿ 155 ರನ್ಗಳಿಗೆ ಎರಡು ವಿಕೆಟ್ಗಳಿದ್ದ ಪಾಕಿಸ್ತಾನ ತಂಡದ ಮೊತ್ತ 42.5 ಓವರ್ಗಳಲ್ಲಿ 191 ರನ್ಗಳಾಗುವಷ್ಟರಲ್ಲಿ ಸರ್ವಪತನ ಕಂಡಿತು. ಇದು ಪಾಕಿಸ್ತಾನದ ಮಾಜಿ ವೇಗಿಯ ಕೋಪಕ್ಕೆ ಕಾರಣವಾಗಿದೆ.

ಶೋಯೆಬ್ ಅಖ್ತರ್ ಅವರು ಬ್ಯಾಟಿಂಗ್ ಸ್ನೇಹಿಯಾದ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸುವ ಅವಕಾಶವನ್ನು ಪಾಕಿಸ್ತಾನ ತಂಡ ಕಳೆದುಕೊಂಡು ನಿರಾಶೆ ಮೂಡಿಸಿತು ಎಂದಿದ್ದಾರೆ.
"ಅತ್ಯುತ್ತಮ ಬ್ಯಾಟಿಂಗ್ ವಿಕೆಟ್ನಲ್ಲಿ ಅವಕಾಶವನ್ನು ವ್ಯರ್ಥ ಮಾಡಿಕೊಂಡರು. ನಿರಾಶೆಯಾಗಿದೆ, ತುಂಬಾ ನಿರಾಶೆಯಾಗಿದೆ," ಎಂದು ಶೋಯೆಬ್ ಅಖ್ತರ್ ತಮ್ಮ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನ ತಂಡದ ಆರಂಭಿಕರಾದ ಇಮಾಮ್-ಉಲ್-ಹಕ್ 38 ಎಸೆತಗಳಲ್ಲಿ 6 ಬೌಂಡರಿ ಸಮೇತ 36 ರನ್ ಹಾಗೂ ಅಬ್ದುಲ್ಲಾ ಶಫೀಕ್ 20 ರನ್ ಗಳಿಸಿ ಔಟಾಗುವ ಮುನ್ನ ಮೊದಲ ವಿಕೆಟ್ಗೆ 41 ರನ್ಗಳ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿದರು.
ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯಲು ವಿಫಲರಾದರೂ, ಚೆಂಡು ಹಳೆಯದಾಗುತ್ತಿದ್ದಂತೆಯೇ ಬ್ಯಾಕ್ಫುಲ್ ಟ್ರಿಕ್ಗಳಿಂದ ಪಾಕಿಸ್ತಾನದ ಬ್ಯಾಟರ್ಗಳನ್ನು ವಂಚಿಸಿದರು. ಇದರ ಪರಿಣಾಮ ಭಾರತವು ಸಾಂಪ್ರದಾಯಿಕ ಎದುರಾಳಿಯನ್ನು 42.5 ಓವರ್ಗಳಲ್ಲಿ 191 ರನ್ಗಳಿಗೆ ನಿಯಂತ್ರಣಗೊಳಿಸಿತು.
ಇದು 1999ರಲ್ಲಿ 180 ರನ್ಗಳಿಗೆ ಆಲೌಟ್ಆದ ನಂತರ ಏಕದಿನ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಎರಡನೇ ಕನಿಷ್ಠ ಮೊತ್ತ ಇದಾಗಿದೆ.
ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಲೆಂಗ್ತ್ ಬದಲಾಯಿಸುವ ಮೂಲಕ ಮತ್ತು ಸ್ಲೋ ಬೌಲಿಂಗ್ ಮೂಲಕ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕವನ್ನು ಅಲುಗಾಡಿಸಿದರು ಮತ್ತು ಏಕದಿನ ವಿಶ್ವಕಪ್ನಲ್ಲಿ ಭಾರತವನ್ನು ತಮ್ಮ ಎಂಟನೇ ಗೆಲುವಿನ ಹಾದಿಗೆ ತಂದರು.

ನಾಯಕ ರೋಹಿತ್ ಶರ್ಮಾ ಅವರು ಕುಲದೀಪ್ ಯಾದವ್ (35 ರನ್ ನೀಡಿ 2 ವಿಕೆಟ್) ಅವರನ್ನು ದಾಳಿಗಿಳಿಸುವ ಮೂಲಕ ಕೌಶಲ್ಯ ಮೆರೆದರು. ಕುಲದೀಪ್ ಒಂದೇ ಓವರ್ನಲ್ಲಿ ತ್ವರಿತವಾಗಿ ಸೌದ್ ಶಕೀಲ್ (6) ಮತ್ತು ಇಫ್ತಿಕರ್ ಅಹ್ಮದ್ (4) ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು.
ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರ ಆಶ್ಚರ್ಯ ಹುಟ್ಟಿಸಿತ್ತು. ಆದರೆ, ಅವರ ನಿರ್ಧಾರವನ್ನು ಭಾರತೀಯ ಬೌಲರ್ಗಳು ಸಮರ್ಥಿಸಿಕೊಂಡರು.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (58 ಎಸೆತಗಳಲ್ಲಿ 50 ರನ್) ಮತ್ತು ಮೊಹಮ್ಮದ್ ರಿಜ್ವಾನ್ (69 ಎಸೆತಗಳಲ್ಲಿ 49 ರನ್) ನಡುವೆ ಮೂರನೇ ವಿಕೆಟ್ಗೆ 72 ರನ್ ಜೊತೆಯಾಟ ಮುರಿದ ನಂತರ ಭಾರತ ತಂಡ ನಿಯಂತ್ರಣ ಸಾಧಿಸಿತು.
ಅಂತಿಮವಾಗಿ ಬೌಲಿಂಗ್ನಲ್ಲಿ ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 7 ಓವರ್ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 10 ಓವರ್ಗಳಲ್ಲಿ 35 ರನ್ ನೀಡಿ 2 ವಿಕೆಟ್ ಕಬಳಿಸಿದರು.
ರವೀಂದ್ರ ಜಡೇಜಾ 9.5 ಓವರ್ಗಳಲ್ಲಿ 38 ರನ್ ನೀಡಿ 2 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ 6 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಇನ್ನು ಸ್ವಲ್ಪ ದುಬಾರಿಯಾದ ಮೊಹಮ್ಮದ್ ಸಿರಾಜ್ 8 ಓವರ್ಗಳಲ್ಲಿ 50 ರನ್ ನೀಡಿ 2 ವಿಕೆಟ್ ಪಡೆಯಲು ಯಶಸ್ವಿಯಾದರು.