
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ 2022 ರ ಸೂಪರ್ 12 ಪಂದ್ಯದಲ್ಲಿ ರೋಚಕ ಹಣಾಹಣಿಯಿಂದ ಕೂಡಿತ್ತು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಅತ್ಯುತ್ತಮ ಪಂದ್ಯ ಎಂದು ಮಾಜಿ ಕ್ರಿಕೆಟಿಗರು ಹೊಗಳಿದ್ದಾರೆ.
160 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತವು ಕೊನೆಯ ಬಾಲ್ನಲ್ಲಿ ಪಂದ್ಯವನ್ನು ನಾಲ್ಕು ವಿಕೆಟ್ಗಳಿಂದ ಗೆದ್ದುಕೊಂಡಿತು. ಎರಡೂ ತಂಡಗಳು ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದವು, ಅಂತಿಮ ಎಸೆತದಲ್ಲಿ ಭಾರತ ಜಯ ಗಳಿಸುವಲ್ಲಿ ಯಶಸ್ವಿಯಾಯಿತು.
ಭಾರತ-ಪಾಕಿಸ್ತಾನ ಪಂದ್ಯದ ಕುರಿತಂಡ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪಾಕಿಸ್ತಾನ ತಂಡವನ್ನು ಹೊಗಳಿದ್ದಾರೆ. ಆರಂಭಿಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಬೇಗನೇ ಔಟಾದ ನಂತರ, ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ ಅರ್ಧ ಶತಕ ಗಳಿಸಿದ ಬಗ್ಗೆ ಶೋಯೆಬ್ ಅಖ್ತರ್ ಹೊಗಳಿದ್ದಾರೆ. ನಂತರ ಪಾಕಿಸ್ತಾನ ಬೌಲರ್ ಗಳ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ 160 ರನ್ಗಳ ಗುರಿಯನ್ನು ನೀಡಿದ ಪಾಕಿಸ್ತಾನ, ವೇಗಿಗಳಾದ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅತ್ಯುತ್ತಮ ಪ್ರದರ್ಶನದ ಮೂಲಕ 31 ರನ್ ಗಳಿಸುವಷ್ಟರಲ್ಲಿ ಭಾರತದ ನಾಲ್ವರು ಪ್ರಮುಖ ಬ್ಯಾಟರ್ ಗಳನ್ನು ಔಟ್ ಮಾಡಿದರು.

ಪಾಕಿಸ್ತಾನ ಉತ್ತಮವಾಗಿ ಆಡಿತು
ಈ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್, "ಪಾಕಿಸ್ತಾನ ಅದ್ಭುತವಾಗಿ ಪ್ರದರ್ಶನ ನೀಡಿದೆ. ನಿರಾಶೆಗೊಳ್ಳಬೇಡಿ, ನೀವೆಲ್ಲರೂ ನಿಜವಾಗಿಯೂ ಚೆನ್ನಾಗಿ ಆಡಿದ್ದೀರಿ. ಭಾರತ ನಿಜವಾಗಿಯೂ ಚೆನ್ನಾಗಿ ಆಟವಾಡಿತು. ಅವರು ಇತಿಹಾಸದಲ್ಲಿ ಅತ್ಯುತ್ತಮ ಪಂದ್ಯಗಳಲ್ಲಿ ಒಂದನ್ನು ಗೆದ್ದರು. ಇದು ಅತ್ಯುತ್ತಮ ವಿಶ್ವಕಪ್ ಪಂದ್ಯವಾಗಿತ್ತು" ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
"ವಿಶ್ವಕಪ್ ಈಗಷ್ಟೇ ಪ್ರಾರಂಭವಾಗಿದೆ, ಭಾರತ-ಪಾಕಿಸ್ತಾನ ಆಡಿದಾಗ ಮಾತ್ರ ವಿಶ್ವಕಪ್ ಪ್ರಾರಂಭವಾಗುತ್ತದೆ ಮತ್ತು ಎರಡು ತಂಡಗಳು ಮತ್ತೆ ಮುಖಾಮುಖಿಯಾಗುತ್ತವೆ. ಪಾಕಿಸ್ತಾನವು ಭಾರತವನ್ನು ಮತ್ತೆ ನೋಡುತ್ತದೆ," ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳಲಿ
ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಬಗ್ಗೆ ಮನಸಾರೆ ಹೊಗಳಿದ್ದಾರೆ. 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ಕಾರಣವಾದರು. ಅನೇಕರು ಕೊಹ್ಲಿಯ ಇನ್ನಿಂಗ್ಸ್ ಅನ್ನು ಅವರ ಅತ್ಯುತ್ತಮ ಟಿ20 ಆಟ ಎಂದು ಶ್ಲಾಘಿಸಿದರು. ಶೋಯೆಬ್ ಅಖ್ತರ್ ಕೂಡ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅವರ ಜೀವನದ ಅತ್ಯುತ್ತಮ ಆಟ ಎಂದು ಶ್ಲಾಘಿಸಿದ್ದಾರೆ.
ಆದರೆ, ಕೊಹ್ಲಿ ಆಟವನ್ನು ಹೊಗಳಿದ ಬೆನ್ನಲ್ಲೇ ಶೋಯೆಬ್ ಅಖ್ತರ್ ಮತ್ತೊಂದು ಸಲಹೆಯನ್ನು ನೀಡಿದ್ದಾರೆ, "ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಬೇಕು ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಏಕೆಂದರೆ ಅವರು ಟಿ20 ಕ್ರಿಕೆಟ್ನಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ಹಾಕಲು ನಾನು ಬಯಸುವುದಿಲ್ಲ. ಅವರು ಟಿ20 ಕ್ರಿಕೆಟ್ ಬದಲು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಆಡಬೇಕು," ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.