
ನವದೆಹಲಿ, ನೆವಂಬರ್ 27: ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ. ಅನುಭವಿ ಧವನ್ ಬದಲಿಗೆ ಯುವ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಡೆಲ್ಲಿ ತಂಡದಲ್ಲಿದ್ದ ಶಿಖರ್ ಧವನ್, ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಫೀಲ್ಡ್ನಲ್ಲಿ ಡೈವ್ ಮಾಡುವ ವೇಳೆ ಗಾಯಕ್ಕೀಡಾಗಿದ್ದ ಧವನ್ ಆಸ್ಪತ್ರೆಗೆ ದಾಖಲಾಗಿದ್ದರು. ಅದಾಗಿ ಧವನ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
'ಮಹಾರಾಷ್ಟ್ರ-ಡೆಲ್ಲಿ ನಡುವೆ ಸೂರತ್ ನಲ್ಲಿ ನಡೆದಿದ್ದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಪಂದ್ಯದ ವೇಳೆ ಧವನ್ ಎಡ ಮೊಣ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಮಂಗಳವಾರ (ನವೆಂಬರ್ 26) ಬಿಸಿಸಿಐಯ ವೈದ್ಯಕೀಯ ತಂಡ ಧವನ್ ಅವರನ್ನು ಪರೀಕ್ಷಿಸಿದೆ,' ಎಂದು ಬಿಸಿಸಿಐ ಪ್ರಕಟನೆ ಮೂಲಕ ತಿಳಿಸಿದೆ.
'ಧವನ್ ಕಾಲಿಗೆ ಗಂಭೀರವಾಗಿ ಕುಯ್ದಗಾಯವಾಗಿತ್ತು. ಹೀಗಾಗಿ ಹೊಲಿಗೆ ಗುಣಮುಖವಾಗಲು, ಧವನ್ ಸಂಪೂರ್ಣ ಚೇತರಿಕೊಳ್ಳಲು ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿದೆ. ಹೀಗಾಗಿ ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಧವನ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ತರಲಾಗಿದೆ,' ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆತಿಥೇಯ ಭಾರತದ ವಿರುದ್ಧ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಪ್ರವಾಸ ಸರಣಿಯ ಮೊದಲ ಟಿ20 ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಡಿಸೆಂಬರ್ 6ರಂದು 7 pmಗೆ ಆರಂಭವಾಗಲಿದೆ.