
ಭಾರತ ಕ್ರಿಕೆಟ್ ತಂಡದ ಅನುಭವಿ ಬೌಲರ್ ಮೊಹಮ್ಮದ್ ಶಮಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದಾರೆ. ಸಾಂಸಾರಿಕವಾಗಿ ವಿಚ್ಛೇದಿತ ಪತ್ನಿಯ ದೌರ್ಜನ್ಯ ಆರೋಪಗಳು ಒಂದು ಕಡೆಯಾದರೆ, ಭಾರತ ಕ್ರಿಕೆಟ್ ತಂಡದಲ್ಲಿ ಫಾರ್ಮ್, ಫಿಟ್ನೆಸ್ ಸಮಸ್ಯೆ ಮತ್ತೊಂದು ಕಡೆ.
ಹೀಗೆ ಏಕಕಾಲದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳ ಪರಿಣಾಮವಾಗಿ, ಭಾರತದ ವೇಗಿ ಮೊಹಮ್ಮದ್ ಶಮಿ ಒಮ್ಮೆ ತಮ್ಮ ಕ್ರಿಕೆಟ್ ವೃತ್ತಿಜೀವನ ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು ಎಂದು ಭಾರತ ತಂಡದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಬಹಿರಂಗಪಡಿಸಿದ್ದಾರೆ.
2018ರಲ್ಲಿ ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ಮುನ್ನ ಮೊಹಮ್ಮದ್ ಶಮಿ ಯೋ-ಯೋ ಟೆಸ್ಟ್ನಲ್ಲಿ ವಿಫಲರಾಗಿದ್ದರು. ಇದು ಮುಂಬರುವ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ತನ್ನ ಅವಕಾಶಗಳನ್ನು ಕಳೆದುಕೊಳ್ಳುತ್ತದೆ ಎಂದು ಶಮಿ ಚಿಂತೆಗೀಡಾಗಿದ್ದರು.

ಇದೇ ವೇಳೆ ಫಿಟ್ನೆಸ್ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು. ಇದರಿಂದಾಗಿ ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದರು. ಅನುಭವಿ ವೇಗಿ ಗಾಯದ ಕಾರಣಗಳಿಂದಾಗಿ ಈ ಹಿಂದೆ ಹಲವು ಬಾರಿ ಹಿನ್ನಡೆ ಅನುಭವಿಸಿದ್ದರು ಎಂಬುದನ್ನು ಗಮನಿಸಬೇಕಾದ ಸಂಗತಿ.
"ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಕಳೆದುಕೊಂಡ ವೇಳೆ ಮೊಹಮ್ಮದ್ ಶಮಿ ಅವರು ತನ್ನೊಂದಿಗೆ ಮಾತನಾಡಿದರು. ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಮತ್ತು ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕೋಪದಿಂದಾಗಿ ಕ್ರಿಕೆಟ್ ತ್ಯಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು," ಎಂದು ಭಾರತದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ತಿಳಿಸಿದ್ದಾರೆ.
"ಮೊಹಮ್ಮದ್ ಶಮಿ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ ಎಂದು ಅರಿತುಕೊಂಡ ನಂತರ, ಶಮಿಯನ್ನು ಭಾರತ ತಂಡದ ಅಂದಿನ ಮುಖ್ಯ ಕೋಚ್ ರವಿಶಾಸ್ತ್ರಿ ಬಳಿ ಕರೆದುಕೊಂಡು ಹೋದೆ," ಎಂದು ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದರು.

"ರವಿಶಾಸ್ತ್ರಿ ಅವರೊಂದಿಗಿನ ಮೊಹಮ್ಮದ್ ಶಮಿ ಮಾತುಕತೆಯ ನಂತರ, ಕ್ರಿಕೆಟ್ಗೆ ಅತ್ಯುತ್ತಮವಾಗಿ ಪುನರಾಗಮನ ಮಾಡಲು ಸಹಾಯವಾಯಿತು," ಎಂದು ಕ್ರಿಕ್ಬಜ್ನೊಂದಿಗೆ ಮಾತನಾಡುವಾಗ ಭರತ್ ಅರುಣ್ ತಿಳಿಸಿದರು.
"ಭಾರತ ತಂಡದಿಂದ ಸ್ಥಾನ ಕಳೆದುಕೊಂಡ ನಂತರ ಮೊಹಮ್ಮದ್ ಶಮಿ ಬದಲಿಗೆ ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅನಂತರ ಮೊಹಮ್ಮದ್ ಶಮಿ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಪುನರಾಗಮನಕ್ಕಾಗಿ ತರಬೇತಿ ತೆಗೆದುಕೊಳ್ಳಲು ಒಂದು ತಿಂಗಳ ಕಾಲ ಕಳುಹಿಸಲು ನಿರ್ಧರಿಸಲಾಯಿತು. ರವಿಶಾಸ್ತ್ರಿ ಅವರ ಸಮಯಪ್ರಜ್ಞೆಯಿಂದಾಗಿ ಆ ಸಂದರ್ಭದಲ್ಲಿ ಮೊಹಮ್ಮದ್ ಶಮಿ ತನ್ನ ವೃತ್ತಿಜೀವನಕ್ಕೆ ಉತ್ತಮವಾಗಿ ಪುನರಾಗಮನ ಮಾಡಿದರು," ಎಂದು ಮಾಜಿ ಬೌಲಿಂಗ್ ಕೋಚ್ ಬಹಿರಂಗಪಡಿಸಿದರು.