ಗುರುವಾರ, ಜುಲೈ 27ರಂದು ನಡೆಯುವ ಮೂರು ಪಂದ್ಯಗಳ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಪ್ರವಾಸಿ ಭಾರತ ತಂಡ ಸೆಣಸಾಡಲಿದೆ.
ಇದಕ್ಕೂ ಮುನ್ನ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿತು. ಇನ್ನು ವೆಸ್ಟ್ ಇಂಡೀಸ್ ವಿರುದ್ಧ 2006ರಿಂದ ಇದುವರೆಗೆ ಏಕದಿನ ಸರಣಿಯನ್ನು ಭಾರತ ಸೋತಿಲ್ಲ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಬೇಕಿದ್ದ ಭಾರತದ ಸ್ಟಾರ್ ಬೌಲರ್ ಮೊಹ್ಮಮದ್ ಸಿರಾಜ್ ವಿಶ್ರಾಂತಿ ಪಡೆದು ತವರಿಗೆ ಮರಳಿದ್ದಾರೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಮುಗಿದ ನಂತರ ಭಾರತಕ್ಕೆ ವಾಪಸ್ಸಾದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಕೆಎಸ್ ಭರತ್ ಮತ್ತು ನವದೀಪ್ ಸೈನಿ ಅವರೊಂದಿಗೆ ಮೊಹ್ಮಮದ್ ಸಿರಾಜ್ ಹಿಂತಿರುಗಿದ್ದಾರೆ.
ಮೊಹಮ್ಮದ್ ಶಮಿ ವಿಶ್ರಾಂತಿಯಲ್ಲಿರುವ ಕಾರಣ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಜಯದೇವ್ ಉನಾದ್ಕಟ್, ಶಾರ್ದೂಲ್ ಠಾಕೂರ್, ಮುಖೇಶ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಅವರನ್ನು ಒಳಗೊಂಡ ವೇಗದ ದಾಳಿಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಇಎಸ್ಪಿಎನ್ಕ್ರಿಕ್ಇನ್ಫೋ ಪ್ರಕಾರ, ನಿರಂತರ ಕೆಲಸದ ಹೊರೆಯಿಂದಾಗಿ ಮೊಹಮ್ಮದ್ ಸಿರಾಜ್ಗೆ ವೆಸ್ಟ್ ಇಂಡೀಸ್ ಪ್ರವಾಸದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಇನ್ನು ಭಾರತ ತಂಡವು ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾ ಕಪ್ ಪಂದ್ಯಾವಳಿಯನ್ನು ಆಡಲಿದೆ. ನಂತರ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ತವರಿನ ಏಕದಿನ ಸರಣಿಯ ವೇಳಾಪಟ್ಟಿ ಹೊಂದಿದೆ. ಬಳಿಕ ಅಕ್ಟೋಬರ್ನಲ್ಲಿ ಭಾರತದಲ್ಲೇ ನಡೆಯುವ 2023ರ ಏಕದಿನ ವಿಶ್ವಕಪ್ಗೆ ತಯಾರಾಗಲಿದೆ.
ಕೆರಿಬಿಯನ್ ಪ್ರವಾಸದಲ್ಲಿ ಟಿ20 ತಂಡಕ್ಕೆ ಆಯ್ಕೆಯಾಗದ ಮೊಹಮ್ಮದ್ ಸಿರಾಜ್, ಪೋರ್ಟ್ ಆಫ್ ಸ್ಪೇನ್ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬೆಳಿಗ್ಗೆ ವೆಸ್ಟ್ ಇಂಡೀಸ್ ತಂಡದ ಐದು ವಿಕೆಟ್ ಕಬಳಿಸಿ ಆತಿಥೇಯ ತಂಡದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಎರಡು ಟೆಸ್ಟ್ ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದರು.
ಮಾರ್ಚ್ 2022ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯು ಮೊಹಮ್ಮದ್ ಸಿರಾಜ್ ಅವರ ಕೊನೆಯ ಏಕದಿನ ಪಂದ್ಯವಾಗಿತ್ತು. ಅಲ್ಲಿ ಐದು ವಿಕೆಟ್ಗಳೊಂದಿಗೆ ಸರಣಿಯನ್ನು ಪೂರ್ಣಗೊಳಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 2022ರ ಆರಂಭದಿಂದ ಮೊಹಮ್ಮದ್ ಸಿರಾಜ್ ಅವರು 43 ಏಕದಿನ ವಿಕೆಟ್ ಪಡೆಯುವ ಮೂಲಕ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.