
ಮಹಾರಾಷ್ಟ್ರ, ಮೇ 4: ಮುಂಬೈ ಇಂಡಿಯನ್ಸ್ ಈಗ ಡೇಂಜರ್ ಝೋನ್ ನಲ್ಲಿದೆ. ಈ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದು ಪ್ರಶಸ್ತಿ ಸುತ್ತಿನಿಂದ ಹೊರ ಬೀಳುವ ಕೊನೇ ಹಂತದಲ್ಲಿದೆ.
ಕಳೆದ ಬಾರಿಯ ಚಾಂಪಿಯನ್ ಮುಂಬೈ ಈ ಬಾರಿ ಆರಂಭದಿಂದಲೂ ಸೋಲುತ್ತನೇ ಬಂದಿತ್ತು. ಬಲಿಷ್ಟ ತಂಡವಾದರೂ ಆಟಗಾರರ ನಿರ್ಲಕ್ಷ್ಯ ತಂಡವನ್ನು ಸೋಲಿನಂಚಿಗೆ ತಂದು ನಿಲ್ಲಿಸಿದೆ. ಈ ಐಪಿಎಲ್ ಆವೃತ್ತಿಯಲ್ಲಿ ಪ್ರಶಸ್ತಿ ಕನಸು ಜೀವಂತವಾಗಬೇಕಾದರೆ ಮುಂಬೈ ಇನ್ನುಳಿದ ಆರೂ ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ಈಗಾಗಲೇ ಟಾಸ್ ಮುಗಿದಿದೆ. ಟಾಸ್ ಗೆದ್ದಿರುವ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿದೆ.
ತಂಡಕ್ಕೆ ಬೆಂಬಲ ಕೇಳಿ ಮುಂಬೈ ಇಂಡಿಯನ್ಸ್ ಹಾಕಿರುವ ವಿಡಿಯೋ.
ಶುಕ್ರವಾರ ಮಹರಾಷ್ಟ್ರದ ಇಂದೋರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳೆರಡೂ ಮುಖಾಮುಖಿಯಾಗಲಿವೆ. ಐಪಿಎಲ್ 11ನೇ ಆವೃತ್ತಿಯ 34ನೇ ಪಂದ್ಯವಾಗಿ ನಡೆಯುತ್ತಿರುವ ಈ ಕಾದಾಟದಲ್ಲಿ ಮುಂಬೈ ಸೋತರೆ ಪ್ರಶಸ್ತಿಯ ಕನಸು ಭಗ್ನವಾಗುವುದು ಖಂಡಿತಾ!
ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್ ದೈತ್ಯನಿದ್ದು ಮುಂಬೈಗೆ ಗೆಲುವಿಗೆ ಅಡ್ಡಿಯಾಗಬಲ್ಲರು. ಆರಂಭಿಕರಾಗಿ ಇಳಿಯುವ ಗೇಲ್ ಮತ್ತು ರಾಹುಲ್ ಇಬ್ಬರನ್ನೂ ಬೇಗನೆ ಪೆವಿಲಿಯನ್ ಗೆ ಅಟ್ಟಿದಷ್ಟು ಮುಂಬೈಗೆ ಅನುಕೂಲ. ಇನ್ನು ಯುವರಾಜ್, ಡೇವಿಡ್ ಮಿಲ್ಲರ್ ಬ್ಯಾಟ್ ಬೀಸಿದರೂ ಮುಂಬೈ ಗೆಲುವು ಕಷ್ಟವಾಗಬಲ್ಲದು.
ಸದ್ಯದ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಪಂಜಾಬ್ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವುಗಳನ್ನು ದಾಖಲಿಸಿ 10 ಅಂಕಗಳನ್ನು ಹೊಂದಿದೆ. ಮುಂಬೈ ಖಾತೆಯಲ್ಲಿರುವುದು ಬರೀ 4 ಅಂಕಗಳು ಮಾತ್ರ!
ಮುಂಬೈ ಆರೂ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿರುವುದರಿಂದ ಹಾಲಿ ಚಾಂಪಿಯನ್ಸ್ ನ ಈ ಐಪಿಎಲ್ ಪ್ರಶಸ್ತಿ ಕನಸು ಬಹುತೇಕ ಕಮರಿದಂತೆಯೇ. ಯಾಕೆಂದರೆ ಉಳಿದ ಆರೂ ಪಂದ್ಯಗಳನ್ನು ಗೆಲ್ಲುವುದು ಸುಲಭವಲ್ಲ. ಹಾಗಂತ ಮೂಗುಮುರಿಯುವಂತೆಯೂ ಇಲ್ಲ, ಯಾಕೆಂದರೆ ಮುಂಬೈ ಎಚ್ಚೆತ್ತುಕೊಂಡು ಆಡಿದರೆ ಇಲ್ಲವನ್ನೇ ಇಲ್ಲವಾಗಿಸಬಲ್ಲದು. ಒಟ್ಟಿನಲ್ಲಿ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂದಿನ ಪಂದ್ಯದ ಗೆಲುವು ಯಾರ ತೆಕ್ಕೆಗೆ ಬೀಳುತ್ತದೆಯೋ ಕುತೂಹಲ ಮೂಡಿಸಿದೆ.