ಐಪಿಎಲ್ 'ಕಿಂಗ್ಸ್' ಚೆನ್ನೈ ತಂಡದ ಸಂಭ್ರಮ ಹೇಗಿತ್ತು ನೋಡಿ
ಮುಂಬೈ, ಮೇ 28: ಏಪ್ರಿಲ್ 10ರಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಘಟನೆಯ ನೆನಪು ಕ್ರಿಕೆಟ್ ಅಭಿಮಾನಿಗಳಲ್ಲಿ ಮಾಸಿರಬಹುದು.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ನಡೆಯುವಾಗ ಕಾವೇರಿ ನೀರಿನ ಹೋರಾಟ ತಮಿಳುನಾಡಿನಲ್ಲಿ ತೀವ್ರವಾಗಿತ್ತು. ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ತಮಿಳುನಾಡಿನ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮಾತ್ರವಲ್ಲ, ಪಂದ್ಯದ ಆರಂಭದ ವೇಳೆ ಕ್ರೀಡಾಂಗಣದ ಒಳಕ್ಕೆ ಶೂಗಳನ್ನು ಎಸೆದಿದ್ದರು.
ಈ ಘಟನೆ ತೀವ್ರ ಟೀಕೆಗೆ ಒಳಗಾಗಿದ್ದರೆ, ಚೆನ್ನೈನಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸುವ ಅನಿವಾರ್ಯತೆಗೆ ಐಪಿಎಲ್ ಆಡಳಿತ ಮಂಡಳಿ ಸಿಲುಕಿತ್ತು. ವಿಶೇಷವೆಂದರೆ ತವರಿನ ಅಂಗಳದ ಬದಲು ಪುಣೆಯಲ್ಲಿ ಪಂದ್ಯಗಳು ನಡೆದರೂ ಚೆನ್ನೈ ತಂಡ ಅಭಿಮಾನಿಗಳ ಉತ್ಸಾಹ ಕುಂದಿರಲಿಲ್ಲ.
ರೈಲು, ಬಸ್ಗಳಲ್ಲಿ ಪುಣೆಗೆ ಹೋಗಿ ಪಂದ್ಯ ವೀಕ್ಷಿಸಿ ತಂಡವನ್ನು ಹುರಿದುಂಬಿಸಿದರು. 'ವಿಷಲ್ ಪೋಡು' ಎಂಬ ಘೋಷವಾಕ್ಯವನ್ನು ಮತ್ತೆ ಮೊಳಗಿಸಿದರು.
ಎರಡು ವರ್ಷಗಳ ನಿಷೇಧದ ಬಳಿಕ ಚೆನ್ನೈ ತಂಡ ಮತ್ತೆ ಹೊಸ ಜನ್ಮ ಪಡೆದುಕೊಂಡರೂ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಅನೇಕ ಹಳೆಯ ಆಟಗಾರರು ತಂಡವನ್ನು ಪುನಃ ಸೇರಿಕೊಂಡಿದ್ದರು. ಇದು ಚೆನ್ನೈ ತಂಡದ ಫಾಲೋವರ್ಗಳ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು..
ಈಗ ಮತ್ತೊಮ್ಮೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿರುವ ತಂಡ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹಿಗ್ಗಿಸಿದೆ. ಚೆನ್ನೈನಲ್ಲಿ ಕ್ರಿಕೆಟ್ ಆಡುವುದು ಬೇಡ ಎಂದು ಆಟಗಾರರಿಗೆ ಅವಮಾನ ಮಾಡಿದ್ದ ಸಂಘಟನೆಯ ಕಾರ್ಯಕರ್ತರೂ ಬಹುಶಃ ಈಗ ಪಶ್ಚಾತ್ತಾಪ ಪಡುತ್ತಿರಬಹುದು.
ಅದೇನೇ ಇರಲಿ, ಒಂದು ಅದ್ಭುತ ಗೆಲುವಿನೊಂದಿಗೆ ಚೆನ್ನೈ ತಂಡ ಮತ್ತೆ ಐಪಿಎಲ್ನಲ್ಲಿ ತನ್ನ ಕರಾಮತ್ತು ಪ್ರದರ್ಶಿಸಿದೆ. ಈ ಸಂಭ್ರಮದ ಒಂದಷ್ಟು ಚಿತ್ರಾವಳಿಗಳನ್ನು ನೋಡೋಣ.

ಸಂಭ್ರಮದ ಓಟ
ಹೈದರಾಬಾದ್ ತಂಡದ ಬೌಲರ್ ಕಾರ್ಲೋಸ್ ಬ್ರಾಥ್ವೇಟ್ ಎಸೆದ ಚೆಂಡನ್ನು ಅಂಬಾಟಿ ರಾಯುಡು ಬೌಂಡರಿಗೆ ಕಳುಹಿಸುತ್ತಿದ್ದಂತೆಯೇ ಚೆನ್ನೈ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಮುಂಬೈನ ವಾಂಖೇಡೆ ಅಂಗಳದಲ್ಲಿ ಸಿಎಸ್ಕೆ ಅಭಿಮಾನಿಗಳ ಹರ್ಷೋದ್ಗಾರ ತುಂಬಿಕೊಂಡಿತು. ಗೆಲುವಿನ ರನ್ ಹೊಡೆಯುವ ಕ್ಷಣಕ್ಕೆ ತುದಿಗಾಲಲ್ಲಿ ನಿಂತಿದ್ದ ಚೆನ್ನೈ ತಂಡದ ಆಟಗಾರರು ಡಗೌಟ್ನಿಂದ ಮೈದಾನಕ್ಕೆ ಓಡಿದ ಗಳಿಗೆ ಹೀಗಿತ್ತು.

ಗೆಲುವಿನ ಅಪ್ಪುಗೆ
ಮೈದಾನದ ಒಳಗೆ ಧಾವಿಸಿದ ಚೆನ್ನೈ ತಂಡದ ಸಹ ಆಟಗಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆರಂಭದಿಂದ ಕೊನೆವರೆಗೂ ನಿಂತು ಅಜೇಯ ಶತಕದೊಂದಿಗೆ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ ಶೇನ್ ವಾಟ್ಸನ್ ಮತ್ತು ಕೊನೆಯ ಎಸೆತದಲ್ಲಿ ವಿಜಯದ ರನ್ ಹೊಡೆದ ಅಂಬಾಟಿ ರಾಯುಡು ಅವರನ್ನು ಅಪ್ಪಿಕೊಂಡು ಎತ್ತಾಡಿದ ಸಹ ಆಟಗಾರರು ಆನಂದದ ಹೊಳೆಯಲ್ಲಿ ಮುಳುಗಿದರು.

ಈ ಸಲ ಟ್ರೋಫಿ ನಮ್ದೇ
ಈ ಸಲ ಕಪ್ ನಮ್ದೇ ಎಂಬ ಅಭಿಮಾನಿಗಳ ಭರವಸೆಯನ್ನು ಆರ್ಸಿಬಿ ತಂಡ ಹುಸಿಗೊಳಿಸಿತ್ತು. ಆದರೆ, ವಿಷಲ್ ಪೋಡು ಎಂಬ ಸೀಟಿಯ ಸದ್ದನ್ನು ತನ್ನ ಅಭಿಮಾನಿಗಳಿಗೆ ಮತ್ತೆ ನೆನಪಿಸುವಂತೆ ಚೆನ್ನೈ ತಂಡ ಗೆಲುವಿನ ಕಾಣಿಕೆ ನೀಡಿತು. ಈ ಸಲ ಕಪ್ ನಮ್ದೇ ಎಂದು ಹೇಳಿಕೊಳ್ಳುವ ಭಾಗ್ಯ ಸಿಎಸ್ಕೆಗೆ ಒಲಿಯಿತು. ಪ್ರತಿ ಬಾರಿ ಟ್ರೋಫಿ ಎತ್ತಿಕೊಂಡಾಗಲೂ ಅದನ್ನು ಕಿರಿಯ ಆಟಗಾರರ ಕೈಗೆ ಒಪ್ಪಿಸಿ ಮೂಲೆಯಲ್ಲಿ ನಿಂತುಕೊಳ್ಳುವುದು ನಾಯಕ ಎಂ.ಎಸ್. ಧೋನಿ ಅಭ್ಯಾಸ. ಭಾನುವಾರ ಕೂಡ ಟ್ರೋಫಿ ಎತ್ತಿಕೊಂಡ ಧೋನಿ ಅದನ್ನು ಸಹ ಆಟಗಾರರ ಕೈಗೆ ಒಪ್ಪಿಸಿದರು. ಬಣ್ಣದ ಕಾಗದದ ಹುಡಿಯ ಮಳೆಯ ನಡುವೆ ಧೋನಿ ಎಲ್ಲಿಯೂ ಕಾಣಿಸುತ್ತಿಲ್ಲ. ಎಲ್ಲಿದ್ದಾರೆ ಧೋನಿ?

ಚಾಂಪಿಯನ್ನರು ಇವರು
ಐಪಿಎಲ್ ಚಾಂಪಿಯನ್ಸ್ 2018 ಎಂಬ ಫಲಕದ ಮುಂದೆ ಕುಳಿತ ಚೆನ್ನೈ ತಂಡಗಾರರ ಮುಖದಲ್ಲಿ ಸಡಗರ ತುಂಬಿತ್ತು. ಜತೆಗೆ ತಂಡದ ಸಲಹೆಗಾರರು, ಕೋಚ್ಗಳು ಮತ್ತು ಇತರೆ ಸಿಬ್ಬಂದಿ ಈ ಚಿತ್ರದಲ್ಲಿದ್ದಾರೆ. ಫಲಕದ ಮುಂಭಾಗದಲ್ಲಿ ಟ್ರೋಫಿ ಪಕ್ಕ ಕುಳಿತ ಸುರೇಶ್ ರೈನಾ, ಮಗಳನ್ನು ಮುದ್ದಾಡುತ್ತಿದ್ದಾರೆ, ಇಮ್ರಾನ್ ತಾಹೀರ್ ಮತ್ತು ಮುರಳಿ ವಿಜಯ್ ಕೂಡ ತಮ್ಮ ಮಕ್ಕಳೊಂದಿಗೆ ನಿಂತಿದ್ದಾರೆ. ಬಲಬದಿಯಿಂದ ಕೊನೆಯ ಸಾಲಿನಲ್ಲಿ ಪುಟ್ಟ ಕಂದಮ್ಮನ ಕೈ ಕೆಲವು ನಿಮಿಷಗಳ ಹಿಂದಷ್ಟೇ ಟ್ರೋಫಿ ಎತ್ತಿ ಹಿಡಿದ ಚೆನ್ನೈ ತಂಡದ ನಾಯಕನ ಮುಖವನ್ನು ಮರೆಮಾಚಿದೆ!

ಲೈಫ್ಲಾಂಗ್ ಟ್ರೋಫಿ
ಎಂ.ಎಸ್. ಧೋನಿ ನಾಯಕರಾಗಿ ಟಿ20 ಮತ್ತು ಏಕದಿನ ವಿಶ್ವಕಪ್ ಸೇರಿದಂತೆ ಅನೇಕ ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ. ಇನ್ನೂ ಟ್ರೋಫಿಗಳನ್ನು ಭಾರತಕ್ಕೆ ತಂದುಕೊಡುವ ಉತ್ಸಾಹದಲ್ಲಿದ್ದಾರೆ. ಆದರೆ, ಅವರ ಜೀವಮಾನದ ಟ್ರೋಫಿಗಳೊಂದಿಗಿನ ಚಿತ್ರವಿದು. ಪತ್ನಿ ಸಾಕ್ಷಿ ಹಾಗೂ ಮಗಳು ಜಿವಾ ಜತೆ ಪಂದ್ಯ ಮುಗಿದ ಬಳಿಕ ಕಾಣಿಸಿಕೊಂಡ ಆಪ್ತ ದೃಶ್ಯವಿದು.

ಮುರಳಿಯ 'ವಿಜಯ'
ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನಗಳನ್ನು ನೀಡಿದ್ದ ಚೆನ್ನೈ ಹುಡುಗ ಮುರಳಿ ವಿಜಯ್ ಮಾತ್ರ ಈ ಬಾರಿ ಪ್ಲಾಪ್ ಶೋ. ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಮುರಳಿ, ಉಳಿದೆಡೆ ತಮ್ಮ ಹಿಂದಿನ ಆಟದ ಸೊಬಗನ್ನು ಪ್ರದರ್ಶಿಸುವುದರಲ್ಲಿ ವಿಫಲರಾಗುತ್ತಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಮುರಳಿ ವಿಜಯ್ಗೆ ಆಡಲು ಅವಕಾಶ ಸಿಕ್ಕಿದ್ದು ಕೇವಲ ಒಂದು ಪಂದ್ಯದಲ್ಲಿ. ಅದರಲ್ಲಿ ಅವರು 12 ರನ್ ಮಾತ್ರ ಗಳಿಸಿದ್ದರು. ಟೂರ್ನಿ ಮುಗಿದ ಬಳಿಕ ವಿಜಯ್, ಪತ್ನಿ ನಿಖಿತಾ ಹಾಗೂ ಮಕ್ಕಳೊಂದಿಗೆ ಖುಷಿಯಲ್ಲಿ ಪಾಲ್ಗೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications