ಸಂಭ್ರಮದ ಓಟ
ಹೈದರಾಬಾದ್ ತಂಡದ ಬೌಲರ್ ಕಾರ್ಲೋಸ್ ಬ್ರಾಥ್ವೇಟ್ ಎಸೆದ ಚೆಂಡನ್ನು ಅಂಬಾಟಿ ರಾಯುಡು ಬೌಂಡರಿಗೆ ಕಳುಹಿಸುತ್ತಿದ್ದಂತೆಯೇ ಚೆನ್ನೈ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಮುಂಬೈನ ವಾಂಖೇಡೆ ಅಂಗಳದಲ್ಲಿ ಸಿಎಸ್ಕೆ ಅಭಿಮಾನಿಗಳ ಹರ್ಷೋದ್ಗಾರ ತುಂಬಿಕೊಂಡಿತು. ಗೆಲುವಿನ ರನ್ ಹೊಡೆಯುವ ಕ್ಷಣಕ್ಕೆ ತುದಿಗಾಲಲ್ಲಿ ನಿಂತಿದ್ದ ಚೆನ್ನೈ ತಂಡದ ಆಟಗಾರರು ಡಗೌಟ್ನಿಂದ ಮೈದಾನಕ್ಕೆ ಓಡಿದ ಗಳಿಗೆ ಹೀಗಿತ್ತು.
ಗೆಲುವಿನ ಅಪ್ಪುಗೆ
ಮೈದಾನದ ಒಳಗೆ ಧಾವಿಸಿದ ಚೆನ್ನೈ ತಂಡದ ಸಹ ಆಟಗಾರರ ಸಂತೋಷಕ್ಕೆ ಪಾರವೇ ಇರಲಿಲ್ಲ. ಆರಂಭದಿಂದ ಕೊನೆವರೆಗೂ ನಿಂತು ಅಜೇಯ ಶತಕದೊಂದಿಗೆ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ ಶೇನ್ ವಾಟ್ಸನ್ ಮತ್ತು ಕೊನೆಯ ಎಸೆತದಲ್ಲಿ ವಿಜಯದ ರನ್ ಹೊಡೆದ ಅಂಬಾಟಿ ರಾಯುಡು ಅವರನ್ನು ಅಪ್ಪಿಕೊಂಡು ಎತ್ತಾಡಿದ ಸಹ ಆಟಗಾರರು ಆನಂದದ ಹೊಳೆಯಲ್ಲಿ ಮುಳುಗಿದರು.
ಈ ಸಲ ಟ್ರೋಫಿ ನಮ್ದೇ
ಈ ಸಲ ಕಪ್ ನಮ್ದೇ ಎಂಬ ಅಭಿಮಾನಿಗಳ ಭರವಸೆಯನ್ನು ಆರ್ಸಿಬಿ ತಂಡ ಹುಸಿಗೊಳಿಸಿತ್ತು. ಆದರೆ, ವಿಷಲ್ ಪೋಡು ಎಂಬ ಸೀಟಿಯ ಸದ್ದನ್ನು ತನ್ನ ಅಭಿಮಾನಿಗಳಿಗೆ ಮತ್ತೆ ನೆನಪಿಸುವಂತೆ ಚೆನ್ನೈ ತಂಡ ಗೆಲುವಿನ ಕಾಣಿಕೆ ನೀಡಿತು. ಈ ಸಲ ಕಪ್ ನಮ್ದೇ ಎಂದು ಹೇಳಿಕೊಳ್ಳುವ ಭಾಗ್ಯ ಸಿಎಸ್ಕೆಗೆ ಒಲಿಯಿತು. ಪ್ರತಿ ಬಾರಿ ಟ್ರೋಫಿ ಎತ್ತಿಕೊಂಡಾಗಲೂ ಅದನ್ನು ಕಿರಿಯ ಆಟಗಾರರ ಕೈಗೆ ಒಪ್ಪಿಸಿ ಮೂಲೆಯಲ್ಲಿ ನಿಂತುಕೊಳ್ಳುವುದು ನಾಯಕ ಎಂ.ಎಸ್. ಧೋನಿ ಅಭ್ಯಾಸ. ಭಾನುವಾರ ಕೂಡ ಟ್ರೋಫಿ ಎತ್ತಿಕೊಂಡ ಧೋನಿ ಅದನ್ನು ಸಹ ಆಟಗಾರರ ಕೈಗೆ ಒಪ್ಪಿಸಿದರು. ಬಣ್ಣದ ಕಾಗದದ ಹುಡಿಯ ಮಳೆಯ ನಡುವೆ ಧೋನಿ ಎಲ್ಲಿಯೂ ಕಾಣಿಸುತ್ತಿಲ್ಲ. ಎಲ್ಲಿದ್ದಾರೆ ಧೋನಿ?
ಚಾಂಪಿಯನ್ನರು ಇವರು
ಐಪಿಎಲ್ ಚಾಂಪಿಯನ್ಸ್ 2018 ಎಂಬ ಫಲಕದ ಮುಂದೆ ಕುಳಿತ ಚೆನ್ನೈ ತಂಡಗಾರರ ಮುಖದಲ್ಲಿ ಸಡಗರ ತುಂಬಿತ್ತು. ಜತೆಗೆ ತಂಡದ ಸಲಹೆಗಾರರು, ಕೋಚ್ಗಳು ಮತ್ತು ಇತರೆ ಸಿಬ್ಬಂದಿ ಈ ಚಿತ್ರದಲ್ಲಿದ್ದಾರೆ. ಫಲಕದ ಮುಂಭಾಗದಲ್ಲಿ ಟ್ರೋಫಿ ಪಕ್ಕ ಕುಳಿತ ಸುರೇಶ್ ರೈನಾ, ಮಗಳನ್ನು ಮುದ್ದಾಡುತ್ತಿದ್ದಾರೆ, ಇಮ್ರಾನ್ ತಾಹೀರ್ ಮತ್ತು ಮುರಳಿ ವಿಜಯ್ ಕೂಡ ತಮ್ಮ ಮಕ್ಕಳೊಂದಿಗೆ ನಿಂತಿದ್ದಾರೆ. ಬಲಬದಿಯಿಂದ ಕೊನೆಯ ಸಾಲಿನಲ್ಲಿ ಪುಟ್ಟ ಕಂದಮ್ಮನ ಕೈ ಕೆಲವು ನಿಮಿಷಗಳ ಹಿಂದಷ್ಟೇ ಟ್ರೋಫಿ ಎತ್ತಿ ಹಿಡಿದ ಚೆನ್ನೈ ತಂಡದ ನಾಯಕನ ಮುಖವನ್ನು ಮರೆಮಾಚಿದೆ!
ಲೈಫ್ಲಾಂಗ್ ಟ್ರೋಫಿ
ಎಂ.ಎಸ್. ಧೋನಿ ನಾಯಕರಾಗಿ ಟಿ20 ಮತ್ತು ಏಕದಿನ ವಿಶ್ವಕಪ್ ಸೇರಿದಂತೆ ಅನೇಕ ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ. ಇನ್ನೂ ಟ್ರೋಫಿಗಳನ್ನು ಭಾರತಕ್ಕೆ ತಂದುಕೊಡುವ ಉತ್ಸಾಹದಲ್ಲಿದ್ದಾರೆ. ಆದರೆ, ಅವರ ಜೀವಮಾನದ ಟ್ರೋಫಿಗಳೊಂದಿಗಿನ ಚಿತ್ರವಿದು. ಪತ್ನಿ ಸಾಕ್ಷಿ ಹಾಗೂ ಮಗಳು ಜಿವಾ ಜತೆ ಪಂದ್ಯ ಮುಗಿದ ಬಳಿಕ ಕಾಣಿಸಿಕೊಂಡ ಆಪ್ತ ದೃಶ್ಯವಿದು.
ಮುರಳಿಯ 'ವಿಜಯ'
ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನಗಳನ್ನು ನೀಡಿದ್ದ ಚೆನ್ನೈ ಹುಡುಗ ಮುರಳಿ ವಿಜಯ್ ಮಾತ್ರ ಈ ಬಾರಿ ಪ್ಲಾಪ್ ಶೋ. ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಮುರಳಿ, ಉಳಿದೆಡೆ ತಮ್ಮ ಹಿಂದಿನ ಆಟದ ಸೊಬಗನ್ನು ಪ್ರದರ್ಶಿಸುವುದರಲ್ಲಿ ವಿಫಲರಾಗುತ್ತಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಮುರಳಿ ವಿಜಯ್ಗೆ ಆಡಲು ಅವಕಾಶ ಸಿಕ್ಕಿದ್ದು ಕೇವಲ ಒಂದು ಪಂದ್ಯದಲ್ಲಿ. ಅದರಲ್ಲಿ ಅವರು 12 ರನ್ ಮಾತ್ರ ಗಳಿಸಿದ್ದರು. ಟೂರ್ನಿ ಮುಗಿದ ಬಳಿಕ ವಿಜಯ್, ಪತ್ನಿ ನಿಖಿತಾ ಹಾಗೂ ಮಕ್ಕಳೊಂದಿಗೆ ಖುಷಿಯಲ್ಲಿ ಪಾಲ್ಗೊಂಡರು.