ಪುಣೆ, ಏಪ್ರಿಲ್ 29:ಮೂರು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಸತತ ಐದು ಸೋಲುಗಳ ನಂತರ ಗೆಲುವಿನ ಲಯಕ್ಕೆ ಮರಳಿದೆ. ಐಪಿಎಲ್-11ರ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ ತವರಿನಲ್ಲಿ ಸೋತಿದ್ದ ಮುಂಬೈ ತಂಡವು ಈಗ ಚೆನ್ನೈನ ಹೊಸ ತವರು ಪುಣೆಯಲ್ಲಿ ಚೆನ್ನೈ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದೆ.
ಕೊನೇ 2 ಓವರ್ಗಳಲ್ಲಿ ಗೆಲುವಿಗೆ 22 ರನ್ ಅಗತ್ಯವಿದ್ದಾಗ 19ನೇ ಓವರ್ ಎಸೆದ ಶಾರ್ದೂಲ್ ಠಾಕೂರ್ ಓವರ್ನಲ್ಲಿ ರೋಹಿತ್ 4 ಬೌಂಡರಿ ಸಿಡಿಸಿ ಗೆಲುವು ಖಚಿತಪಡಿಸಿದರು. ಧೋನಿ ಮಾಡಿದ ತಂತ್ರಗಾರಿಕೆ ಕೈಕೊಟ್ಟಿದ್ದು, ರೋಹಿತ್ ಗೆ ಲಾಭವಾಯಿತು.
ಕೊನೆ ಎರಡು ಓವರ್ ಗಳನ್ನು ಯಾರು ಎಸೆಯಬೇಕು ಎಂಬ ನಿರ್ಧಾರ ಕೈಗೊಳ್ಳುವುದಲ್ಲಿ ಧೋನಿ ಕೊಂಚ ಎಡವಿದರು ಎಂದೆನಿಸುತ್ತದೆ. 19 ಓವರ್ ಶಾರ್ದೂಲ್ ಬದಲಿಗೆ ದ್ವಾಯ್ನೆ ಬ್ರಾವೋ ಎಸೆದು, ರನ್ ನಿಯಂತ್ರಿಸಿ ಹೆಚ್ಚಿನ ಒತ್ತಡ ಹೇರಬಹುದಾಗಿತ್ತು. ಆದರೆ, ಮುಂಬೈ 2 ವಿಕೆಟ್ ಮಾತ್ರ ಕಳೆದುಕೊಂಡಿದ್ದು, ಲಾಭವಾಯಿತು. ಅದರಲ್ಲೂ ಲಯಕ್ಕೆ ಮರಳಿದ ರೋಹಿತ್ ಅವರು ಸ್ಟ್ರೈಕ್ ಪಡೆದುಕೊಂಡು ಪಂದ್ಯವನ್ನು ಗೆಲುವಿನ ದಡ ಸೇರಿಸಿದರು.