
ಇಂದೋರ್, ಮೇ 5: ಮುಂಬೈ ಇಂಡಿಯನ್ಸ್ 2018ರ ಐಪಿಎಲ್ ಟ್ರೋಫಿ ಕನಸನ್ನು ಜೀವಂತವಾಗಿರಿಸಿದೆ. ಈ ಬಾರಿ ಎಚ್ಚರಿಕೆಯಿಂದ ಆಡಿದ ಮುಂಬೈ ಇಂಡಿಯನ್ಸ್ ಪಂಜಾಬ್ ವಿರುದ್ಧ 6 ವಿಕೆಟ್ ರೋಚಕ ಜಯ ಸಾಧಿಸಿದೆ.
ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ (19 ರನ್ ಗೆ 1ವಿಕೆಟ್) ಮತ್ತು ಕೃಣಾಲ್ ಪಾಂಡ್ಯ 31 (12) ಸಾಹಸದೊಂದಿಗೆ ಪಂಜಾಬ್ ನೀಡಿದ್ದ 174 ರನ್ ಗುರಿಯನ್ನು 1 ಓವರ್ ಮುಂಚಿತವಾಗಿಯೇ ಬೆನ್ನಟ್ಟಿ 176 ರನ್ ಗಳೊಂದಿಗೆ ಮುಂಬೈ ಗೆಲುವಿನ ನಗು ಬೀರಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ 50 (40), ಕೆಎಲ್ ರಾಹುಲ್ 24 (20), ಕರುಣ್ ನಾಯರ್ 23 (12), ಮರ್ಕ್ಯೂಸ್ ಸ್ಟೋಯ್ನಿಸ್ ಅಜೇಯ 29 (15), ಮಾಯಾಂಕ್ ಅಗರ್ವಾಲ್ 11 (7) ಯುವರಾಜ್ 14 (14), ಅಕ್ಸರ್ ಪಟೇಲ್ 13 (12) ರನ್ ನೆರವಿನೊಂದಿಗೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿ ಮುಂಬೈಗೆ 175 ರನ್ ಗುರಿ ನೀಡಿತ್ತು.
ಆರಂಭದಲ್ಲಿ ನಿಧಾನಗತಿಯಲ್ಲೇ ರನ್ ಸೇರಿಸುತ್ತಾ ಸಾಗಿದ ಮುಂಬೈಗೆ ಸೂರ್ಯ ಕುಮಾರ್ ಯಾದವ್ 57 (42) ಬೆಂಗಾವಲಾಗಿ ನಿಂತರು. ಎವಿನ್ ಲೆವಿಸ್ 10 (13), ಇಶಾನ್ ಕಿಶನ್ 25 (19), ಹಾರ್ದಿಕ್ ಪಾಂಡ್ಯ 23 (13), ನಾಯಕ ರೋಹಿತ್ ಶರ್ಮ 24 (15) ತಕ್ಕ ಮಟ್ಟಿಗೆ ತಂಡವನ್ನು ಬೆಂಬಲಿಸಿದ್ದು ಮುಂಬೈಯನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತು.
ಪಂದ್ಯಾಂತ್ಯದಲ್ಲಿ ಮುಂಬೈ ವಿಕೆಟ್ ಕಳೆದುಕೊಂಡು ಭೀತಿ ಅನುಭವಿಸಿದರೂ ಕೃಣಾಲ್ ಮತ್ತು ರೋಹಿತ್ ಜೋಡಿ ತಂಡವನ್ನು ಗೆಲುವಿನ ಗೆರೆ ದಾಟಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈ ಗೆಲುವಿಗೆ ರನ್ ಕೊಡುಗೆ ನೀಡಿದ ಸೂರ್ಯ ಕುಮಾರ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿದರು.
ಅಂತೂ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್ಸ್ ಈ ಗೆಲುವಿನೊಂದಿಗೆ 6 ಅಂಕಗಳಿಂದ 5ನೇ ಸ್ಥಾನಕ್ಕೆ ಜಿಗಿದು ಸಮಾಧಾನದ ನಿಟ್ಟುಸಿರು ಬಿಟ್ಟಿದೆ.