
ಮುಂಬೈ, ಮೇ 22: ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಇಂದು ಮುಂಬೈಯ ವಾಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಗೆಲ್ಲುವ ತಂಡವಾಗಿ ಚೆನ್ನೈ ತಂಡವೇ ಹೆಚ್ಚು ಗುರುತಿಸಿಕೊಳ್ಳುತ್ತಿರುವುದಕ್ಕೆ ಇಲ್ಲಿವೆ ಒಂದಿಷ್ಟು ಕಾರಣಗಳು.
ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಐಪಿಎಲ್ ಫೈನಲ್ ಗೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲಿದೆ. ಇದೇ ಕಾರಣಕ್ಕೆ ಚೆನ್ನೈ ಮತ್ತು ಹೈದರಾಬಾದ್ ತಂಡಗಳೆರಡೂ ಪಂದ್ಯವನ್ನು ಗೆದ್ದುಕೊಳ್ಳುವತ್ತ ದೃಷ್ಟಿ ನೆಟ್ಟಿವೆ. ಆದರೆ ಇಂದಿನ ಪಂದ್ಯಗಳ ಗೆಲುವು ಬಹುತೇಕ ತಂಡದ ಬಲಾಬಲಗಳನ್ನು ಅವಲಂಬಿಸಿವೆ.
ಟಾಸ್ ಈಗಾಗಲೇ ಮುಗಿದಿದೆ. ಟಾಸ್ ಗೆದ್ದಿರುವ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿದೆ. ಚೇಸಿಂಗ್ ನಲ್ಲಿ ಹೆಚ್ಚಿನ ಬಾರಿಯೂ ಗೆದ್ದಿರುವ ಚೆನ್ನೈ ಈ ಬಾರಿಯೂ ಗೆಲುವು ತನ್ನದಾಗಿಸುವತ್ತ ಯೋಚಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿಲ್ಲ.
ಹಿಂದಿನ ಒಂದ್ಯಗಳನ್ನು ಗಮನಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚಿನ ಪಂದ್ಯಗಳನ್ನು ಚೇಸಿಂಗ್ ಮೂಲಕ ಗೆದ್ದುಕೊಂಡಿದೆ. ನಾಯಕ ಧೋನಿ ಫಾರ್ಮ್ ನಲ್ಲಿರುವುದರಿಂದ ಇಂದು ಪಂದ್ಯ ಗೆದ್ದುಕೊಳ್ಳಲು ಬೇಕಾದ ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ.
ಚೆನ್ನೈ ತಂಡದ ಅಂಬಾಟಿ ರಾಯುಡು, ವಾಟ್ಸನ್ ಬ್ಯಾಟಿಂಗ್ ನಲ್ಲಿ ಮಿಂಚಿದರೆ, ಡ್ವೇನ್ ಬ್ರಾವೋ, ಎನ್ ಗಿಡಿ ಬೌಲಿಂಗ್ ನಲ್ಲಿ ಮಿಂಚಬಲ್ಲರು. ಹೆಚ್ಚಾಗಿ ಆಲ್ ರೌಂಡರ್ ಇರುವ ಚೆನ್ನೈ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಬಲಾಡ್ಯವಾಗಿದೆ.
ಹೈದರಾಬಾದ್ ನಲ್ಲಿ ಧವನ್, ಕೇನ್ ವಿಲಿಯಮ್ಸನ್ ತಿರುಗಿ ಬಿದ್ದರೆ ಪಂದ್ಯ ತಿರುವು ಪಡೆದುಕೊಳ್ಳಬಹುದು.