

ಸಿಎಸ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ಗೆ ಸಾಕ್ಷಿಯಾದರು. 61 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಿಎಸ್ಕೆ ತಂಡಕ್ಕೆ ಆಧಾರವಾದ ಮಾಹಿ, ಬೊಂಬಾಟ್ ಅರ್ಧಶತಕದ ಮೂಲಕ ಕುಸಿದ ತಂಡವನ್ನ ಮೇಲೆತ್ತಿದರು.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮಹೇಂದ್ರ ಸಿಂಗ್ ಧೋನಿ, ಹೊಸ ನಾಯಕ ರವೀಂದ್ರ ಜಡೇಜಾ ಜೊತೆಗೂಡಿ ಏಳನೇ ವಿಕೆಟ್ಗೆ ಉತ್ತಮ ಜೊತೆಯಾಟ ಕಲೆಹಾಕಿದರು. 38 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿದ ಧೋನಿ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಕಾಣಬಹುದು.
ಧೋನಿಗೆ ಉತ್ತಮ ಸಾಥ್ ಕೊಟ್ಟ ನಾಯಕ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ 28 ಎಸೆತಗಳಲ್ಲಿ 26 ರನ್ ಕಲೆಹಾಕಿದರು. ಸಿಎಸ್ಕೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 131ರನ್ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಮಹೇಂದ್ರ ಸಿಂಗ್ ಧೋನಿ ಅರ್ಧಶತಕ ಸಿಡಿಸಿ ಮೂರು ವರ್ಷಗಳೇ ಕಳೆದಿತ್ತು. ಕೊನೆಯ ಬಾರಿಗೆ 2019ರ ಏಪ್ರಿಲ್ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ವಿರುದ್ಧ 48 ಎಸೆತಗಳಲ್ಲಿ ಸ್ಫೋಟಕ ಅಜೇಯ 84 ರನ್ ಸಿಡಿಸುವ ಮೂಲಕ ಮಿಂಚಿದ್ದರು. ಈ ಪಂದ್ಯದಲ್ಲಿ ಸೋಲುವ ಪಂದ್ಯವನ್ನ ಸಿಎಸ್ಕೆ ಗೆಲುವಿನತ್ತ ಕೊಂಡೊಯ್ದರು.
ಧೋನಿಯ ಇಂದಿನ ಅಜೇಯ 50ರನ್ಗಳ ಇನ್ನಿಂಗ್ಸ್ ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಹೊಗಳಿ ಕೊಂಡಾಡಿದ್ದು, ಲೆಜೆಂಡರಿ ಎಂಎಸ್ಡಿಗೆ ಸಲಾಂ ಎಂದಿದ್ದಾರೆ.