
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ, ಗಾಯಾಳುವಾಗಿ ಐಪಿಎಲ್ 2022ರ ಟೂರ್ನಿಯಿಂದ ಹೊರಬಿದ್ದಿರುವುದು ನಿಮಗೆಲ್ಲಾ ತಿಳಿದಿದೆ. ಸೀಸನ್ನ ಅರ್ಧದಲ್ಲಿಯೇ ನಾಯಕತ್ವ ನನಗಾಗಲ್ಲ ಎಂದು ಧೋನಿಗೆ ವಾಪಸ್ ಬಿಟ್ಟುಕೊಟ್ಟು ಚರ್ಚೆಗೆ ಗ್ರಾಸವಾಗಿದ್ದರು.
ಆದ್ರೆ ಟೂರ್ನಿಯಿಂದ ಹೊರಬಿದ್ದಿರುವ ರವೀಂದ್ರ ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸಂಬಂಧ ಬಹುತೇಕ ಮುಗಿದಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಭವಿಷ್ಯ ನುಡಿದಿದ್ದಾರೆ. ಸಿಎಸ್ಕೆ ಪರ ರವೀಂದ್ರ ಜಡೇಜಾನದ್ದು ಬಹುಶಃ ಇದೇ ಕೊನೆಯ ಸೀಸನ್ ಎಂದಿದ್ದಾರೆ.
ಸಿಎಸ್ಕೆ ಆಲ್ರೌಂಡರ್ ಜಡ್ಡು, ಮೇ 8ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಪಕ್ಕೆಗೆ ಪೆಟ್ಟು ಮಾಡಿಕೊಂಡರು. ಇದು ವಾಸಿಯಾಗಲೂ ಸಮಯ ಬೇಕಾಗಿದ್ದರಿಂದ ಐಪಿಎಲ್ 2022ರ ಟೂರ್ನಿಯಿಂದ ಹೊರನಡೆದರು.
ಧೋನಿ ಸ್ಥಾನದಲ್ಲಿ ರವೀಂದ್ರ ಜಡೇಜಾರನ್ನು ನಾಯಕನಾಗಿ ಆಯ್ಕೆ ಮಾಡಿದ ಮೇಲೆ ಇವರ ನಾಯಕತ್ವದಲ್ಲಿ ಸಿಎಸ್ಕೆ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನ ಮಾತ್ರ ಗೆದ್ದಿತು. ಟೂರ್ನಿ ಮಧ್ಯದಲ್ಲಿ ಜಡ್ಡು ನಾಯಕತ್ವವನ್ನ ಧೋನಿಗೆ ಹಿಂದಿರುಗಿಸಿದರು.
ಕೇವಲ ನಾಯಕತ್ವದಲ್ಲಿ ಫ್ಲಾಪ್ ಆಗಿದ್ದಷ್ಟೇ ಅಲ್ಲದೆ ಆಟಗಾರನಾಗಿಯೂ ಜಡ್ಡು ಎಡವಿದ್ದಾರೆ. 10 ಇನ್ನಿಂಗ್ಸ್ನಲ್ಲಿ 19.33ರ ಸರಾಸರಿಯಲ್ಲಿ 116ರನ್ಗಳನ್ನ ಗಳಿಸಿದ್ದಾರೆ. ಜೊತೆಗೆ ಐದು ವಿಕೆಟ್ಗಳನಷ್ಟೇ ಪಡೆದಿದ್ದಾರೆ.
ಬುಧವಾರ, ಸಿಎಸ್ಕೆ ಇನ್ಸ್ಟಾಗ್ರಾಮ್ ಹ್ಯಾಂಡಲ್ ಜಡೇಜಾ ಅವರನ್ನು ಅನ್ಫಾಲೋ ಮಾಡಿದೆ ಎಂದು ವರದಿಯಾಗಿದೆ, ಇದು ಆಟಗಾರ ಮತ್ತು ಫ್ರಾಂಚೈಸಿ ನಡುವಿನ ಬಿರುಕುಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.