
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭರ್ಜರಿ ಪ್ರದರ್ಶನ
ಯುಎಇನಲ್ಲಿ ನಡೆದ ಕಳೆದ T20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಬಹುಬೇಗನೆ ಹೊರನಡೆದ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಎದುರಾಳಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾವನ್ನ ತನ್ನ ನೆಲದಲ್ಲಿಯೇ ವೈಟ್ವಾಶ್ ಮಾಡಿತು.
ಅದೇ ರೀತಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ನಂತಹ ತಂಡಗಳ ಎದುರು ಪ್ರಬಲ ಸ್ಪರ್ಧೆಯನ್ನ ಎದುರಿಸಿತು. ಭಾರತ ಜೂನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳನ್ನೊಳಗೊಂಡ ಟಿ20 ಟೂರ್ನಮೆಂಟ್ ಅನ್ನು ಆಡಲಿದೆ.
ಈ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ಗೆ ತೆರಳಲಿದ್ದು ಐರ್ಲೆಂಡ್ ವಿರುದ್ಧ ಕೆಲವು ಟಿ20 ಪಂದ್ಯಗಳನ್ನ ಆಡಲಿದೆ. ಜೊತೆಗೆ ಇಂಗ್ಲೆಂಡ್ ವಿರುದ್ಧ ವಿವಿಧ ಫಾರ್ಮೆಟ್ನ ಸರಣಿಯನ್ನ ಕೂಡ ಆಡಲಿದ್ದು ಇದರಲ್ಲಿ ಮೂರು ಟಿ20 ಪಂದ್ಯಗಳು ಸಹ ಒಳಗೊಂಡಿವೆ.

ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನ ಕಳುಹಿಸಲಿರುವ ಬಿಸಿಸಿಐ
ಆಸ್ಟ್ರೇಲಿಯಾದಲ್ಲಿ ಇದೇ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾದ ಬಲಿಷ್ಠ ತಂಡವನ್ನ ಕಳುಹಿಸಲು ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿ ಸಜ್ಜಾಗಿದೆ. ಐಪಿಎಲ್ 2022ರ ಪ್ಲೇ ಆಫ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡದ ಆಟಗಾರರ ಆಯ್ಕೆಯನ್ನ ನಡೆಸಬಹುದು. ಮೇ 24ರಿಂದ ಐಪಿಎಲ್ ಪ್ಲೇ ಆಫ್ ನಡೆಯಲಿದೆ.
ಹೀಗಾಗಿ ಐಪಿಎಲ್ 2022ರ ಪ್ರದರ್ಶನವು ಟೀಂ ಇಂಡಿಯಾ ವಿಶ್ವಕಪ್ ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ. ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ತೋರಿದ ಕೆಲವು ಆಟಗಾರರಿಗೆ ತಂಡದಿಂದ ಗೇಟ್ ಪಾಸ್ ಸಿಗುವ ಸಾಧ್ಯತೆ ಇದೆ.
ಹೀಗಾಗಿ ಐಪಿಎಲ್ 2022ರ ಪ್ರದರ್ಶನ ಗಮನಿಸಿದ್ರೆ, ಟೀಂ ಇಂಡಿಯಾದಿಂದ ಯಾರು ಹೊರಗುಳಿಯಬಹುದು ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.

ಇಶಾನ್ ಕಿಶನ್
ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಅಜೇಯ 81 ರನ್ ಹಾಗೂ ನಂತರದ ಪಂದ್ಯದಲ್ಲೇ ರಾಜಸ್ತಾನ್ ರಾಯಲ್ಸ್ ವಿರುದ್ಧ 43 ಎಸೆತಗಳಲ್ಲಿ 54 ರನ್ ಕಲೆಹಾಕಿ ಅಬ್ಬರಿಸಿದ್ದರು.
ಆದ್ರೆ ಈ ಎರಡು ಪಂದ್ಯಗಳ ನಂತರ ಇಶಾನ್ ಕಿಶನ್ ಬಹುಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದೇ ಹೆಚ್ಚಾಗಿದೆ. ಕಳೆದ ಐದು ಇನ್ನಿಂಗ್ಸ್ಗಳಲ್ಲಿ ಇಶಾನ್ ಕಿಶನ್ ಒಟ್ಟಾರೆ 50 ರನ್ಗಳಿಸಿದ್ದಾರೆ.
ಇದಷ್ಟೇ ಅಲ್ಲದೆ ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿಲ್ಲ. ಮೂರು ಇನ್ನಿಂಗ್ಸ್ಗಳಲ್ಲಿ 23.67ರ ಸರಾಸರಿಯಲ್ಲಿ ಕೇವಲ 71 ರನ್ ಕಲೆಹಾಕಿದ್ದಾರೆ.
ಆದ್ರೆ ಅದೇ ರಾಜಸ್ತಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 9 ಇನ್ನಿಂಗ್ಸ್ಗಳಲ್ಲಿ 168.28ರ ಸ್ಟ್ರೈಕ್ರೇಟ್ನಲ್ಲಿ 244 ರನ್ ಸಿಡಿಸಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಸ್ಥಾನದಲ್ಲಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
CSK vs RCB: ಇತ್ತಂಡಗಳ ನಡುವಿನ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಸೋತು ನೆಲಕಚ್ಚಿರುವ ತಂಡವಿದು!

ವೆಂಕಟೇಶ್ ಅಯ್ಯರ್
ಮಧ್ಯಪ್ರದೇಶದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಕೆಕೆಆರ್ ಪರ 2022ರ ಐಪಿಎಲ್ನಲ್ಲಿ 10 ಇನ್ನಿಂಗ್ಸ್ನಲ್ಲಿ ಗಳಿಸಿದ್ದು 370 ರನ್. ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡ ಫೈನಲ್ ಪ್ರವೇಶಿಸುವುದಕ್ಕೆ ಪ್ರಮುಖ ಕೊಡುಗೆ ನೀಡಿದ್ದರ ಜೊತೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ20 ಪಂದ್ಯವನ್ನಾಡಿದ ವೆಂಕಟೇಶ್ ಅಯ್ಯರ್ ಇದುವರೆಗೆ 9 ಟಿ20 ಅಂತರಾಷ್ಟ್ರೀ ಪಂದ್ಯಗಳನ್ನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಬಿದ್ದ ಬಳಿಕ ಅವರ ಸ್ಥಾನಕ್ಕೆ ಪರ್ಫೆಕ್ಟ್ ಎಂದೇ ಹೇಳಲಾಗಿತ್ತು. ಆದ್ರೆ ಈ ಐಪಿಎಲ್ ಸೀಸನ್ನಲ್ಲಿ ವೆಂಕಟೇಶ್ ಅಯ್ಯರ್ ಗಳಿಸಿದ್ದು ಕೇವಲ 132ರನ್.
ಈತ ಮುಂಬೈ ಇಂಡಿಯನ್ಸ್ ವಿರುದ್ಧ 50ರನ್ ಗಳಿಸಿದ್ದೇ ಹೆಚ್ಚು. ಆದ್ರೆ ಆ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅಬ್ಬರದ ಆಟಕ್ಕೆ ಅಯ್ಯರ್ ಇನ್ನಿಂಗ್ಸ್ ಮರೆಮಾಚಿತು.
ಆದ್ರೀಗ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತನ್ನ ಅದ್ಭುತ ಫಾರ್ಮ್ ಮೂಲಕ ಅಯ್ಯರ್ ಅನ್ನು ಹಿಂದಿಕ್ಕಿ ತನ್ನ ಸ್ಥಾನವನ್ನ ಮರಳಿ ಪಡೆಯಲು ಸಜ್ಜಾಗಿದ್ದಾರೆ.

ಶಾರ್ದೂಲ್ ಠಾಕೂರ್
ಡೆಲ್ಲಿ ಕ್ಯಾಪಿಲಟ್ಸ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಈ ಐಪಿಎಲ್ ಸೀಸನ್ನಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ತೋರಲಿಲ್ಲ. ಈತ 9.87ರ ಎಕಾನಮಿಯಲ್ಲಿ ಗಳಿಸಿದ್ದು ಕೇವಲ 7 ವಿಕೆಟ್ ಮಾತ್ರ.
ಇತ್ತೀಚಿನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು 40 ರನ್ ನೀಡಿರುವುದು ಬೆಸ್ಟ್ ಆಗಿದೆ. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಶಾರ್ದೂಲ್ ಪ್ರದರ್ಶನ ಉತ್ತಮವಾಗಿಲ್ಲ. ಆರು ಇನ್ನಿಂಗ್ಸ್ನಲ್ಲಿ ಕಲೆಹಾಕಿದ್ದು 88 ರನ್ಗಳು ಮಾತ್ರ.
ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಶಾರ್ದೂಲ್ ಠಾಕೂರ್ ರಿಸರ್ವ್ ಆಟಗಾರನಾಗಿದ್ದು, ಕೊನೆಯಲ್ಲಿ ಅಕ್ಷರ್ ಪಟೇಲ್ಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಜೊತೆಗೆ ಈತನಿಗೂ ವಿಶ್ರಾಂತಿ ನೀಡಲಾಯಿತು.
ಟೀಂ ಇಂಡಿಯಾದಲ್ಲಿ ಸದ್ಯ ಸಾಕಷ್ಟು ಬೌಲರ್ಗಳಿದ್ದು, ಆಯ್ಕೆಗಳಿಗೇನು ಕೊರತೆ ಇಲ್ಲ. ಹೀಗಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿರುವ ಶಾರ್ದೂಲ್ ಸ್ಥಾನಕ್ಕೆ ಕುತ್ತು ಬಂದಿದೆ.
IPL 2022: ಟೂರ್ನಿಯಲ್ಲಿ ಕಣಕ್ಕಿಳಿದಿರುವ ಅತಿ ಹೆಚ್ಚು ವಯಸ್ಸಾದ ಐವರು ಕ್ರಿಕೆಟಿಗರು ಇವರೇ!

ರುತುರಾಜ್ ಗಾಯಕ್ವಾಡ್
2021ರ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್ ಈ ಸೀಸನ್ನಲ್ಲಿ ಮುಗ್ಗರಿಸಿದ್ದೇ ಹೆಚ್ಚು. ರುತುರಾಜ್ ಹಾಗೂ ಫಾಫ್ ಡುಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಕಪ್ ಗೆಲ್ಲಲು ಪ್ರಮುಖ ಕೊಡುಗೆ ನೀಡಿದ್ರು.
ಆದ್ರೆ ಈ ಸೀಸನ್ನಲ್ಲಿ ಗಾಯಕ್ವಾಡ್ 9 ಇನ್ನಿಂಗ್ಸ್ನಲ್ಲಿ ಗಳಿಸಿದ್ದು ಕೇವಲ 237ರನ್. ಕಳೆದ ಇನ್ನಿಂಗ್ಸ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ 99 ರನ್ಗಳಿಸಿದ್ದೇ ಗಾಯಕ್ವಾಡ್ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೂ ಮೊದಲು ಗುಜರಾತ್ ವಿರುದ್ಧ 73ರನ್ಗಳಿಸಿದ್ದರು.
ರುತುರಾಜ್ ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯವನ್ನ ಆಡಿದಾಗ ಕೇವಲ ನಾಲ್ಕು ಗಳಿಸಲಷ್ಟೇ ಶಕ್ತರಾದ್ರು.ಇದರ ಜೊತೆಗೆ ಐಪಿಎಲ್ನಲ್ಲಿ ಕೆಟ್ಟ ಪ್ರದರ್ಶನ ಅವರನ್ನ ಟೀಂ ಇಂಡಿಯಾ ಆಯ್ಕೆಯಿಂದ ಹೊರಗಿಡಬಹುದು.

ಭುವನೇಶ್ವರ್ ಕುಮಾರ್
ಸನ್ರೈಸರ್ಸ್ ಹೈದ್ರಾಬಾದ್ ತಂಡದ ಲೀಡಿಂಗ್ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಐಪಿಎಲ್ 2022ರ ಸೀಸನ್ನಲ್ಲಿ ಮುಗ್ಗರಿಸಿದ್ದೇ ಹೆಚ್ಚು. ಹಿರಿಯ ಟೀಂ ಇಂಡಿಯಾ ಬೌಲರ್ ಈ ಬಾರಿಯ ಐಪಿಎಲ್ನಲ್ಲಿ ಸೀಸನ್ನಲ್ಲಿ ಕೇವಲ 9 ವಿಕೆಟ್ಗಳನ್ನಷ್ಟೇ ಪಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಭುವಿ ಭಾರತ ಪರ ಮೊದಲ ಪಂದ್ಯವನ್ನಾಡಿದ ಬಳಿಕ ಬೆಂಚ್ ಕಾದರು.
ಇದಾದ ಬಳಿಕ ಭುವಿ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಆಡಿದ್ದರು. ಆದ್ರೆ ಇತ್ತೀಚಿನ ಅವರ ಫಾರ್ಮ್ ನೋಡಿದ್ರೆ, ಉಮ್ರಾನ್ ಮಲ್ಲಿಕ್, ಟಿ. ನಟರಾಜನ್ ಉತ್ತಮ ಫಾರ್ಮ್ ಜೊತೆಗೆ ಶಮಿ, ಬುಮ್ರಾ ಅಬ್ಬರವನ್ನ ಗಮನಿಸಿದ್ರೆ, ಭುವನೇಶ್ವರ್ಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.


Click it and Unblock the Notifications












