IPL 2023: ಸಿಎಸ್ಕೆ ತಂಡಕ್ಕೆ ಆಘಾತ; ಐಪಿಎಲ್ನಿಂದ ಮತ್ತೊಬ್ಬ ಸ್ಟಾರ್ ಬೌಲರ್ ಹೊರಗೆ!
ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಕೊನೆಯ ಓವರ್ನಲ್ಲಿ 3 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಿದೆ.
ಇದೀಗ ಸೋಲಿನ ನಡುವೆ ಸ್ಟಾರ್ ಬೌಲರ್ ಸಿಸಂಡಾ ಮಗಲಾ ಕನಿಷ್ಠ ಎರಡು ವಾರಗಳ ಕಾಲ ಹೊರಬಿದ್ದಿರುವುದು ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಈ ಬಗ್ಗೆ ದೃಢಪಡಿಸಿದ್ದು, ದಕ್ಷಿಣ ಆಫ್ರಿಕಾ ವೇಗಿ ಸಿಸಂಡಾ ಮಗಲಾ ಗಾಯಗೊಂಡಿದ್ದು, ಸಿಎಸ್ಕೆ ತಂಡ ಮತ್ತೊಂದು ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಿಂದ ಈ ದೈತ್ಯ ವೇಗಿ ಕನಿಷ್ಠ ಎರಡು ವಾರಗಳ ಕಾಲ ಕ್ರಿಕೆಟ್ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಕೈಲ್ ಜೇಮಿಸನ್, ಮುಖೇಶ್ ಚೌಧರಿ, ದೀಪಕ್ ಚಹಾರ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಸ್ಟಾರ ಆಟಗಾರರ ಅನುಪಸ್ಥಿತಿಯಲ್ಲಿ ತತ್ತರಿಸಿದೆ. ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಮೈದಾನದಿಂದ ಹೊರಡುವ ಮೊದಲು ಸಿಸಂಡಾ ಮಗಲಾ ಕೇವಲ ಎರಡು ಓವರ್ ಬೌಲಿಂಗ್ ಮಾಡಿದರು.

"ನಾವು ಮತ್ತೊಮ್ಮೆ ಇನ್ನೊಬ್ಬ ಆಟಗಾರನ ಸೇವೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಸತತ ಎರಡು ಪಂದ್ಯಗಳಿಂದ ನಮ್ಮ ತಂಡ ಪ್ರಮುಖ ಬೌಲರ್ಗಳಿಲ್ಲದೆ ಆಡುತ್ತಿದೆ. ನಾವು ಆಟಗಾರರು ಗಾಯಗೊಳ್ಳುವುದನ್ನು ನಿಲ್ಲಿಸಲು ಬಯಸುತ್ತೇವೆ. ದುರದೃಷ್ಟವಶಾತ್, ಸಿಸಂಡಾ ಮಗಲಾ ಅವರ ಕೈಗೆ ಗಾಯವಾಗಿದೆ. ಆದ್ದರಿಂದ ಅವರು ಕೊನೆಯ ಎರಡು ಓವರ್ಗಳು ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ".
"ದೀಪಕ್ ಚಹಾರ್, ಬೆನ್ ಸ್ಟೋಕ್ಸ್ ಗಾಯದ ನಂತರ ಕಡಿಮೆ ಸಂಪನ್ಮೂಲಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಗಾಯದ ಸಮಸ್ಯೆ ಹೊಂದಿರುವ ನಮ್ಮದು ಒಂದೇ ತಂಡವಲ್ಲ," ಎಂದು ಇಎಸ್ಪಿಎನ್ ಕ್ರಿಕ್ಇನ್ಫೋಗೆ ಸ್ಟೀಫನ್ ಫ್ಲೆಮಿಂಗ್ ತಿಳಿಸಿದ್ದಾರೆ.
ಗಾಯದ ಪ್ರಮಾಣವನ್ನು ವೈದ್ಯಕೀಯ ಸಿಬ್ಬಂದಿ ಖಚಿತಪಡಿಸಬೇಕಿದೆ
ಸಿಎಸ್ಕೆ ತಂಡದ ವೈದ್ಯಕೀಯ ಸಿಬ್ಬಂದಿ ಸಿಸಂಡಾ ಮಗಲಾ ಗಾಯದ ಪ್ರಮಾಣವನ್ನು ಇನ್ನೂ ನಿರ್ಧರಿಸದ ಕಾರಣ, ಅವರು ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ. ಆಟಗಾರನ ಗಾಯದ ಸ್ಥಿತಿಯ ಬಗ್ಗೆ ಸಿಎಸ್ಕೆ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಬೇಕಾಗಿದೆ. ಕಿವೀಸ್ನ ಕೈಲ್ ಜೇಮಿಸನ್ ಐಪಿಎಲ್ ಪಂದ್ಯಾವಳಿಯಿಂದ ಸಂಪೂರ್ಣವಾಗಿ ಹೊರಗುಳಿದ ನಂತರ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಲಾ ಬದಲಿ ಆಟಗಾರನಾಗಿ ಸಿಎಸ್ಕೆ ತಂಡವನ್ನು ಸೇರಿಕೊಂಡಿದ್ದರು.

ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂಎಸ್ ಧೋನಿ
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕೊನೆಯವರೆಗೂ ಆಡಿ ಅಜೇಯರಾಗಿ ಉಳಿದರು. ಆದರೆ ಪಂದ್ಯವನ್ನು ಗೆಲ್ಲಲು ಅಂತಿಮ ಎಸೆತದಲ್ಲಿ 5 ರನ್ಗಳ ಅಗತ್ಯವಿದ್ದಾಗ, ಸಿಕ್ಸರ್ಗಟ್ಟಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಆರ್ಆರ್ ತಂಡ 3 ರನ್ಗಳ ಜಯ ಸಾಧಿಸಿತು.
ಪಂದ್ಯದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾತನಾಡಿ, ಆತಂಕಕಾರಿ ಸುದ್ದಿಯನ್ನು ಹೊರಹಾಕಿದರು. ಎಂಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.
"ಎಂಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಇದನ್ನು ಅವರು ನಡೆಯುವಾಗ ಮತ್ತು ಓಡುವಾಗ ನೀವು ನೋಡಬಹುದು. ಇದು ಅವರಿಗೆ ಸ್ವಲ್ಪಮಟ್ಟಿಗೆ ಅಡ್ಡಿಯಾಗುತ್ತಿದೆ. ಅವರ ಫಿಟ್ನೆಸ್ ಯಾವಾಗಲೂ ತುಂಬಾ ವೃತ್ತಿಪರವಾಗಿದೆ. ಅವರು ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಅಭ್ಯಾಸ ನಡೆಸುತ್ತಾರೆ. ಎಂಎಸ್ ಧೋನಿ ಶ್ರೇಷ್ಠ ಆಟಗಾರ. ನಮಗೆ ಎಂದಿಗೂ ಅನುಮಾನವಿಲ್ಲ," ಎಂದು ಸ್ಟೀಫನ್ ಫ್ಲೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications