
ಇಂದು ( ಮೇ 29 ) ಅಹ್ಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ಳಲಿದೆ.
ಎಲ್ಲಾ ಯೋಜನೆಯಂತೆ ನಡೆದಿದ್ದರೆ ನಿನ್ನೆಯೇ ( ಮೇ 28 ) ಈ ಪಂದ್ಯ ನಡೆಯಬೇಕಿತ್ತು. ಆದರೆ ನಿನ್ನೆ ವಿಪರೀತ ಮಳೆ ಬಂದ ಕಾರಣ ಪಂದ್ಯ ರದ್ದಾಗಿ ಇಂದಿನ ರಿಸರ್ವ್ ಡೇಗೆ ಮುಂದೂಡಲ್ಪಟ್ಟಿತ್ತು. ಆದರೆ ಈ ರಿಸರ್ವ್ ಡೇ ದಿನದಂದೂ ಸಹ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು.
ಅದರಂತೆ ಗುಜರಾತ್ ಟೈಟನ್ಸ್ ತನ್ನ ಇನ್ನಿಂಗ್ಸ್ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್ಗೆ ಕಠಿಣ ಸವಾಲನ್ನು ನೀಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬೆನ್ನಲ್ಲೇ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ 3 ಎಸೆತಗಳಲ್ಲಿ 4 ರನ್ ಕಲೆಹಾಕಿದ್ದು, ಪಂದ್ಯ ಮಳೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಪಂದ್ಯವನ್ನು 12.10ರಿಂದ ಆರಂಭಿಸಲು ತೀರ್ಮಾನಿಸಿದ್ದು, ಓವರ್ಗಳು ಕಡಿತಗೊಂಡಿವೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ವೃದ್ಧಿಮಾನ್ ಸಹಾ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಇದೀಗ ಮಳೆಯ ಕಾರಣದಿಂದಾಗಿ 15 ಓವರ್ಗಳಿಗೆ ಪಂದ್ಯ ಕುಸಿದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಓವರ್ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿದೆ.
ಇನ್ನು ಓರ್ವ ಬೌಲರ್ ಗರಿಷ್ಠ 3 ಓವರ್ ಬೌಲಿಂಗ್ ಮಾಡಿದ್ದು, 4 ಓವರ್ಗಳವರೆಗೆ ಮಾತ್ರ ಪವರ್ಪ್ಲೇ ಇರಲಿದೆ. ಹೀಗೆ ಡೆಕ್ವರ್ಥ್ ಲೂಯಿಸ್ ಪ್ರಕಾರ ಓವರ್ಗಳ ಕಡಿತ ಉಂಟಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪಂದ್ಯ ಮತ್ತಷ್ಟು ಕಠಿಣವಾಗಿದೆ.