ಸೋಮವಾರ, ಏಪ್ರಿಲ್ 10ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡ 1 ವಿಕೆಟ್ ಅಂತರದಿಂದ ರೋಚಕ ಗೆಲುವು ಸಾಧಿಸಿತು.
ಆರ್ಸಿಬಿ ನೀಡಿದ 213 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 9 ವಿಕೆಟ್ ಕಳೆದುಕೊಂಡು ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಗೆಲುವಿನ ಗುರಿ ತಲುಪಿತು. ಈ ಮೂಲಕ ಆರ್ಸಿಬಿ ತಂಡಕ್ಕೆ ಸತತ ಎರಡನೇ ಸೋಲು ಎದುರಾದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತಮ್ಮ ನಿಧಾನಗತಿ ಬ್ಯಾಟಿಂಗ್ ವಿಧಾನವನ್ನು ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಸಮರ್ಥಿಸಿಕೊಂಡಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 20 ಎಸೆತಗಳಲ್ಲಿ 18 ರನ್ ಗಳಿಸಿ 12ನೇ ಓವರ್ನಲ್ಲಿ ಔಟಾಗುವ ಮೂಲಕ ತಮ್ಮ ತಂಡವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದರು. ತಮ್ಮ ಸುತ್ತ ವಿಕೆಟ್ಗಳು ಬೀಳುತ್ತಿದ್ದರಿಂದ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಾಯಿತು ಎಂದಿರುವ ಕೆಎಲ್ ರಾಹುಲ್ ಪರಿಸ್ಥಿತಿಗೆ ಅನುಗುಣವಾಗಿ ಆಡಬೆಕಾಗುತ್ತದೆ ಎಂದು ಹೇಳಿದ್ದಾರೆ.
Nicholas Pooran: IPL ಇತಿಹಾಸದಲ್ಲಿ ಜಂಟಿ 2ನೇ ವೇಗದ ಅರ್ಧಶತಕ ಬಾರಿಸಿದ ನಿಕೋಲಸ್ ಪೂರನ್
"ನಾನು ಹೆಚ್ಚು ರನ್ ಗಳಿಸಲು ಬಯಸುತ್ತೇನೆ ಮತ್ತು ನಾನು ಹೆಚ್ಚು ರನ್ ಗಳಿಸುತ್ತೇನೆ ಎಂದು ನಾನು ಭಾವಿಸುತ್ತೇನೆ. ಸ್ಟ್ರೈಕ್ರೇಟ್ ಹೆಚ್ಚಾಗಬೇಕಿದೆ. ನಾವು ಲಕ್ನೋದಲ್ಲಿ ಕಠಿಣ ಪಿಚ್ನಲ್ಲಿ ಒಂದೆರಡು ಪಂದ್ಯಗಳನ್ನು ಆಡಿದ್ದೇವೆ. ಇಂದು ನಾವು ಬೇಗನೆ 3 ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ ನಾನು ಪರಿಸ್ಥಿತಿ ನೋಡಿ ಆಡಬೇಕು ಎಂದು ನನಗೆ ಅನಿಸಿತು," ಎಂದು ಕೆಎಲ್ ರಾಹುಲ್ ತಿಳಿಸಿದರು.
"ನಾನು ಸರಿಯಾದ ಕೆಲಸವನ್ನು ಮಾಡಿದ್ದೇನೆ, ನಾನು ಕೊನೆಯವರೆಗೂ ಮೈದಾನದಲ್ಲಿಯೇ ಉಳಿದುಕೊಂಡಿದ್ದರೆ ನಿಕೋಲಸ್ ಪೂರನ್ ಅವರೊಂದಿಗೆ ಸೇರಿ ಪಂದ್ಯವನ್ನು ಇನ್ನೂ ಸುಲಭವಾಗಿ ಗೆಲ್ಲಬಹುದಿತ್ತು," ಎಂದು ಪಂದ್ಯದ ನಂತರ ಲಕ್ನೋ ಸೂಪರ್ ಜೈಂಟ್ಸ್ ಕೆಎಲ್ ರಾಹುಲ್ ಅಭಿಪ್ರಾಯಪಟ್ಟರು.

ಬೃಹತ್ ಮೊತ್ತದ ಚೇಸಿಂಗ್ನಲ್ಲಿ 105 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಮಾರ್ಕಸ್ ಸ್ಟೊಯಿನಿಸ್ 35 ಎಸೆತಗಳಲ್ಲಿ 60 ರನ್, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 62 ರನ್ ಮತ್ತು ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಕೆಎಲ್ ರಾಹುಲ್ ತಮ್ಮ ತಂಡದ ಬ್ಯಾಟ್ಸ್ಮನ್ಗಳನ್ನು ಶ್ಲಾಘಿಸಿದರು ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಈ ರೀತಿಯ ಫಿನಿಶ್ಗಳು ಸಾಧ್ಯ ಎಂದರು.
"ನಂಬಲಾಸಾಧ್ಯ, ಇದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ. ಈ ರೀತಿಯ ಫಿನಿಶ್ಗಳು ಸಾಧ್ಯವಾಗುವ ಏಕೈಕ ಕ್ರೀಡಾಂಗಣವಾಗಿದೆ. ನಾವು ಅತ್ಯುತ್ತಮವಾಗಿ ಗೆಲ್ಲಲು ಪ್ರಯತ್ನಿಸಿದ್ದೇವೆ," ಎಂದು ಕೆಎಲ್ ರಾಹುಲ್ ಹೇಳಿದರು.

"ಟಿ20 ಕ್ರಿಕೆಟ್ನಲ್ಲಿ 5, 6 ಮತ್ತು 7ನೇ ಕ್ರಮಾಂಕ ಅತ್ಯಂತ ಪ್ರಮುಖ ಬ್ಯಾಟಿಂಗ್ ಸ್ಥಾನಗಳಾಗಿವೆ. ಅವರೇ ಹೆಚ್ಚಿನ ಪಂದ್ಯಗಳನ್ನು ಗೆಲ್ಲಿಸುತ್ತಾರೆ. ಈ ರೀತಿ ಅಗ್ರ ಟೂರ್ನಿಗಳಲ್ಲಿ ಅಗ್ರ ಕ್ರಮಾಂಕವು ಹೆಚ್ಚಿನ ಸ್ಕೋರ್ ಮಾಡುತ್ತದೆ. ಆದರೆ, ಮಧ್ಯಮ ಕೆಳಕ್ರಮಾಂಕದ ಬ್ಯಾಟರ್ಗಳು ನಿಜವಾದ ಪಂದ್ಯ ವಿಜೇತರಾಗುತ್ತಾರೆ," ಎಂದು ಕೆಎಲ್ ರಾಹುಲ್ ಅಭಿಪ್ರಾಯಪಟ್ಟರು.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೆಸರು ಮಾಡುತ್ತಿರುವ 23 ವರ್ಷದ ಯುವ ಆಟಗಾರ ಆಯುಷ್ ಬದೋನಿ ಬಗ್ಗೆ ಕೆಎಲ್ ರಾಹುಲ್ ಮಾತನಾಡಿ, "ಆತ ಚಿಕ್ಕ ವಯಸ್ಸಿನವನಾಗಿದ್ದರೂ ಪಂದ್ಯಗಳನ್ನು ಮುಗಿಸುವ ಕಲೆಯನ್ನು ಕಲಿಯುತ್ತಿದ್ದಾರೆ. ಈ ಋತುವಿನಲ್ಲಿ ಈಗಾಗಲೇ ಒಂದೆರಡು ಬಾರಿ ಅದನ್ನು ಮಾಡಿದ್ದಾನೆ. ಕಳೆದ ಸೀಸನ್ನಲ್ಲಿಯೂ ಒಂದೆರಡು ಬಾರಿ ಪಂದ್ಯ ಗೆಲ್ಲಿಸಿದ್ದನು," ಎಂದು ಕೆಎಲ್ ರಾಹುಲ್ ಶ್ಲಾಘಿಸಿದರು.