
ಇದೇ ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ನಂತರ, ಇದೀಗ ಎಲ್ಲರ ಚಿತ್ತ ಐಪಿಎಲ್ನತ್ತ ನೆಟ್ಟಿದೆ. ಹಲವು ಆಟಗಾರರು ಒಬ್ಬಬ್ಬರಾಗಿ ತಮ್ಮ ತಮ್ಮ ಫ್ರಾಂಚೈಸಿಗಳ ಶಿಬಿರಗಳನ್ನು ಸೇರುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಅನೇಕ ಆಟಗಾರರು ಈಗಾಗಲೇ ಕಳೆದ ಒಂದು ತಿಂಗಳಿನಿಂದ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
Asia Cup 2023: ಪಾಕಿಸ್ತಾನಕ್ಕೆ ಏಷ್ಯಾಕಪ್ ಆತಿಥ್ಯ; ಭಾರತ ತಂಡ ನೆರೆ ದೇಶಕ್ಕೆ ಪ್ರಯಾಣಿಸುತ್ತದೆಯೇ?; ಇಲ್ಲಿದೆ ಮಾಹಿತಿ
ಇದೀಗ 'ಕ್ಯಾಪ್ಟನ್ ಕೂಲ್' ಎಂಎಸ್ ಧೋನಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶಿಬಿರದಲ್ಲಿ ಒಂದಾಗಿದ್ದು, ಇದನ್ನು ನೋಡಿದ ಸಿಎಸ್ಕೆ ಅಭಿಮಾನಿಗಳು ಪುಳಕಿತರಾಗಿದ್ದಾರೆ.
ಸಿಎಸ್ಕೆ ತಂಡದ ತರಬೇತಿ ಅವಧಿಯಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ನಗುನಗುತ್ತಾ ಮಾತನಾಡುತ್ತಿರುವುದು ಕಂಡುಬಂದಿದ್ದು, ಕಳೆದ ವರ್ಷದ ವಿವಾದದ ನಂತರ ಮತ್ತೆ ಈ ಜೋಡಿ ಒಂದಾಗಿದೆ.
2022ರ ಐಪಿಎಲ್ ಆರಂಭಕ್ಕೂ ಮುನ್ನ ಸಿಎಸ್ಕೆ ತಂಡ ದಿಢೀರ್ ಎಂಬಂತೆ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ಘೋಷಿಸಿತು. ಇದು ಸಿಎಸ್ಕೆ ಅಭಿಮಾನಿಗಳನ್ನು ನಿಜಕ್ಕೂ ಅಚ್ಚರಿಗೊಳಿಸಿತ್ತು. ನಂತರ ಸತತ ಸೋಲು ಮತ್ತು ಕಳಪೆ ಪ್ರದರ್ಶನದಿಂದ ರವೀಂದ್ರ ಜಡೇಜಾ ನಾಯಕತ್ವ ತ್ಯಜಿಸಿದರು. ಪುನಃ ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡರು. ಆದರೂ ನೀರಸ ಪ್ರದರ್ಶನದಿಂದ 9ನೇ ಸ್ಥಾನ ಗಳಿಸಿತು.
ನನ್ನ ಪಯಣ ಇಬ್ಬರು ಮಹೇಂದ್ರರ ಸುತ್ತ
ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸಿಎಸ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ತನ್ನ ಕ್ರಿಕೆಟ್ ಪಯಣವು ಇಬ್ಬರು 'ಮಹೇಂದ್ರ'ರ ನಡುವೆ ಸುತ್ತುತ್ತದೆ ಎಂದು ಬಹಿರಂಗಪಡಿಸಿದ್ದರು. ಒಬ್ಬರು ಅವರ ಕೋಚ್ ಮತ್ತು ಇನ್ನೊಬ್ಬರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ.
"ನನ್ನ ಕ್ರಿಕೆಟ್ ಪಯಣವು ಜಾಮ್ನಗರದಲ್ಲಿರುವ ನನ್ನ ಕೋಚ್ ಮಹೇಂದ್ರ ಸಿಂಗ್ ಚೌಹಾಣ್ ಮತ್ತು ಸಿಎಸ್ಕೆಯಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಸುತ್ತ ಸುತ್ತುತ್ತಿದೆ. ನಾನು ಇದನ್ನು ಮಹಿ ಭಾಯ್ಗೆ ಹೇಳಿದ್ದೇನೆ. ನನ್ನ ಕ್ರಿಕೆಟ್ ಪಯಣ ಈ ಇಬ್ಬರು ಮಹೇಂದ್ರರ ನಡುವೆ ಇದೆ," ಎಂದು ರವೀಂದ್ರ ಜಡೇಜಾ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದ್ದರು.
ಕಳೆದ ವರ್ಷ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರವೀಂದ್ರ ಜಡೇಜಾ ಆರು ತಿಂಗಳ ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಮರಳಿದರು. ಈ ವೇಳೆ ಬಾಲ್ ಮತ್ತು ಬ್ಯಾಟಿಂಗ್ನಲ್ಲಿ ಮಿಂಚಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದೀಗ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ, ತಾನು ವೇಗದ ಬೌಲರ್ ಆಗಲು ಮತ್ತು ಬ್ಯಾಟರ್ಗಳಿಗೆ ಬೌನ್ಸರ್ಗಳನ್ನು ಬೌಲ್ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಐಪಿಎಲ್ 2023: ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ
ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ಭಗತ್ ವರ್ಮಾ, ಸಿಸಾಂಡ ಮಗಲ