ಬುಧವಾರ, ಏಪ್ರಿಲ್ 12ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಕೊನೆಯ ಓವರ್ನಲ್ಲಿ 3 ರನ್ಗಳ ರೋಚಕ ಗೆಲುವು ಸಾಧಿಸಿತು.
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ 176 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ಗೆ 172 ರನ್ ಗಳಿಸಿತು ಮತ್ತು ತವರಿನಲ್ಲಿಯೇ 3 ರನ್ಗಳಿಂದ ಪರಾಭವಗೊಂಡಿತು.

ಗುರಿ ಬೆನ್ನತ್ತಿದ ಸಿಎಸ್ಕೆ ಆರಂಭದಲ್ಲಿಯೇ ರುತುರಾಜ್ ಗಾಯಕ್ವಾಡ್ ಅವರ ವಿಕೆಟ್ ಕಳೆದುಕೊಂಡಿತು. ನಂತರ ಅಜಿಂಕ್ಯಾ ರಹಾನೆ ಮತ್ತು ಡೆವೊನ್ ಕಾನ್ವೇ ಅವರು ಸಿಎಸ್ಕೆ ತಂಡದ ಸ್ಕೋರ್ ಹೆಚ್ಚಿಸಲು ಪ್ರಯತ್ನಿಸಿದರು.
ಆ ಬಳಿಕ ಬಲವಾಗಿ ಹಿಂತಿರುಗಿದ ರಾಜಸ್ಥಾನ ರಾಯಲ್ಸ್ ಬೌಲರ್ಗಳು ಮಧ್ಯಮ ಕ್ರಮಾಂಕದಲ್ಲಿ ಸಿಎಸ್ಕೆ ತಂಡದ ಪ್ರಮುಖ ಆಟಗಾರರ ವಿಕಎಟ್ ಪಡೆದು ಒತ್ತಡ ಹೇರಿದರು. ಆದರೆ, ಕೊನೆಯಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ರನ್ ಗುರಿ ತಲುಪಲು ಕೆಲವು ದೊಡ್ಡ ಶಾಟ್ಗಳಿಗೆ ಮುಂದಾದರು. ಇದರಿಂದ ಪಂದ್ಯವು ಕೊನೆಯ ಓವರ್ನ ಕೊನೆಯ ಎಸೆತದವರೆಗೂ ಕೊಂಡೊಯ್ಯಿತು.

ಎಂಎಸ್ ಧೋನಿ ಕೇವಲ 17 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 32 ರನ್ ಬಾರಿಸಿರೆ, ಇನ್ನು ಆಲ್ರೌಂಡರ್ ರವೀಂದ್ರ ಜಡೇಜಾ 15 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ ಅಜೇಯ 25 ರನ್ ಗಳಿಸಿದರು. ಆದರೆ, ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪಂದ್ಯದ ನಂತರ ಮಾತನಾಡಿದ ಸಿಎಸ್ಕೆ ನಾಯಕ ಎಂಎಸ್ ಧೋನಿ, ಮಧ್ಯಮ ಓವರ್ಗಳಲ್ಲಿ ತಂಡಕ್ಕೆ ಸ್ಟ್ರೈಕ್ ರೊಟೇಶನ್ ಅಗತ್ಯವಿದೆ ಮತ್ತು ದಿನದ ಅಂತ್ಯದಲ್ಲಿ ಸೋಲಿನ ಹೊಣೆಯು ಸಿಎಸ್ಕೆ ಬ್ಯಾಟರ್ಗಳಿಗೆ ಸಲ್ಲಬೇಕು ಎಂದು ಹೇಳಿದರು.
"ನಮ್ಮ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಮಧ್ಯದ ಓವರ್ಗಳಲ್ಲಿ ಸ್ವಲ್ಪ ಹೆಚ್ಚು ಸ್ಟ್ರೈಕ್ ರೊಟೇಶನ್ ಅಗತ್ಯವಿತ್ತು ಎಂದು ನಾನು ಭಾವಿಸುತ್ತೇನೆ. ಇಲ್ಲಿ ಸ್ಪಿನ್ನರ್ಗಳಿಗೆ ಹೆಚ್ಚು ಲಾಭ ಇರಲಿಲ್ಲ, ಆದರೆ ರಾಜಸ್ಥಾನ ರಾಯಲ್ಸ್ ತಂಡ ಅನುಭವಿ ಸ್ಪಿನ್ನರ್ಗಳನ್ನು ಹೊಂದಿದ್ದರು. ನಾವು ಸ್ಟ್ರೈಕ್ ರೊಟೇಶನ್ ಮಾಡಲು ಸಾಧ್ಯವಾಗಲಿಲ್ಲ, ಅದು ಕಷ್ಟವೂ ಆಗಿರಲಿಲ್ಲ. ಅಂತಿಮವಾಗಿ ಸೋಲಿನ ಹೊಣೆಯನ್ನು ಬ್ಯಾಟ್ಸ್ಮನ್ಗಳು ಹೊರಬೇಕು," ಎಂದು ಎಂಎಸ್ ಧೋನಿ ಅಭಿಪ್ರಾಯಪಟ್ಟರು.

"ಮಧ್ಯಮ ಕ್ರಮಾಂಕದಲ್ಲಿ ರನ್ ಬರದ ಕಾರಣ, ನಾನು ಮತ್ತು ರವೀಂದ್ರ ಜಡೇಜಾ ಕೊನೆಯಲ್ಲಿ ಆಡುವಾಗ ಒತ್ತಡವಿತ್ತು. ನೀವು ಪಂದ್ಯಾವಳಿಯ ಕೊನೆಯ ಹಂತಕ್ಕೆ ಬಂದಾಗ ನೆಟ್ ರನ್ರೇಟ್ ಮೇಲೆ ಪರಿಣಾಮ ಬೀರುತ್ತದೆ. ಮೈದಾನದಲ್ಲಿ ಬ್ಯಾಟಿಂಗ್ ಮಾಡುವಾಗ ಬೌಲರ್ ಏನು ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ನೋಡಿ. ಬೌಲರ್ ತಪ್ಪು ಮಾಡುವವರೆಗೆ ಕಾಯಿರಿ, ಆಗ ದೊಡ್ಡ ಹೊಡೆತಗಳಿಗೆ ಮುಂದಾಗಿ, ಉತ್ತಮವಾಗಿ ಬೌಲಿಂಗ್ ಮಾಡಿದರೆ ಅವರಿಗೆ ಅಭಿನಂದಿಸುತ್ತೇನೆ," ಎಂದು ಎಂಎಸ್ ಧೋನಿ ಸೋಲಿನ ಬಳಿಕ ಮಾತನಾಡಿದರು.
ಈ ದಿನದಂದು ನಮ್ಮ ಬೌಲರ್ಗಳ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ ಎಂದ ಎಂಎಸ್ ಧೋನಿ, ಸಿಎಸ್ಕೆ ನಾಯಕನಾಗಿ 200 ಪಂದ್ಯಗಳ ಹೆಗ್ಗುರುತನ್ನು ತಲುಪಿದ ಬಗ್ಗೆ ಪ್ರಶ್ನಿಸಿದಾಗ, ಮೈಲಿಗಲ್ಲುಗಳು ನಿಜವಾಗಿಯೂ ಮುಖ್ಯವಲ್ಲ ಮತ್ತು ಉತ್ತಮ ಪ್ರದರ್ಶನ ಮತ್ತು ಫಲಿತಾಂಶಗಳ ಬಗ್ಗೆ ಮಾತ್ರ ಗಮನಹರಿಸುತ್ತೇನೆ ಎಂದರು.
"ನಾನು ಎದುರಾಳಿ ಬೌಲರ್ಗಳು ತಪ್ಪು ಮಾಡುವುದನ್ನು ಕಾಯುತ್ತೇನೆ. ಆಗ ನನ್ನ ಶಕ್ತಿ ಮೀರಿ ಬ್ಯಾಟಿಂಗ್ ಮಾಡುತ್ತೇನೆ ಮತ್ತು ನೇರವಾಗಿ ಹೊಡೆಯುವುದು ನನ್ನ ಶಕ್ತಿಯಾಗಿದೆ. ಸ್ವಲ್ಪ ಇಬ್ಬನಿ ಇತ್ತು, ಚೆಂಡು ಔಟ್ಫೀಲ್ಡ್ಗೆ ಹೋದ ನಂತರ ಅದು ಬ್ಯಾಟರ್ಗಳಿಗೆ ಸುಲಭವಾಯಿತು. ನಮ್ಮ ತಂಡದ ಬೌಲರ್ಗಳ ಕಾರ್ಯದಿಂದ ತುಂಬಾ ಸಂತೋಷಪಟ್ಟಿದ್ದೇನೆ," ಎಂದು ಎಂಎಸ್ ಧೋನಿ ತಿಳಿಸಿದರು.