
ಕರ್ನಾಟಕ ಹಾಗೂ ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಕಳೆದ 2022ರ ಸೆಪ್ಟೆಂಬರ್ನಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಹಿನ್ನೆಲೆಯಿಂದಾಗಿ, ಸುಮಾರು ಆರು ತಿಂಗಳಿನಿಂದ ಕ್ರಿಕೆಟ್ನಿಂದ ದೂರವಿರುವಂತೆ ಮಾಡಿದೆ.
ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಭಾರತ ಎ ತಂಡ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಹಿಂದಿನ ದಿನ ಪ್ರಸಿದ್ಧ್ ಕೃಷ್ಣ ಗಾಯಗೊಂಡಿದ್ದರು. ಹೀಗಾಗಿ ಶಾರ್ದೂಲ್ ಠಾಕೂರ್ ಅವರು ಬದಲಿ ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದರು.
ಗಾಯದಿಂದ ಇನ್ನೂ ಪೂರ್ಣವಾಗಿ ಚೇತರಿಸಿಕೊಳ್ಳದ 26 ವರ್ಷದ ಭಾರತ ತಂಡದ ಬಲಗೈ ವೇಗಿ ಪ್ರಸಿದ್ಧ್ ಕೃಷ್ಣ ಅವರು ಮುಂಬರುವ 2023ರ 16ನೇ ಐಪಿಎಲ್ ಸೀಸನ್ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಇದು ರಾಜಸ್ಥಾನ ರಾಯಲ್ಸ್ (ಆರ್ಆರ್) ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಹಿನ್ನಡೆಯಾಗಿದೆ.

ವರದಿಗಳ ಪ್ರಕಾರ, ಪ್ರಸಿದ್ಧ್ ಕೃಷ್ಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಚೇತರಿಸಿಕೊಳ್ಳಲು ಕನಿಷ್ಠ 6-8 ತಿಂಗಳುಗಳ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ಪ್ರಮುಖ ಟಿ20 ಲೀಗ್ನಿಂದ ಹೊರಗುಳಿಬೇಕಾಗುತ್ತದೆ.
ಗುರುವಾರ, ಫೆಬ್ರವರಿ 16ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ತುಂಬಾ ಕ್ರಿಕೆಟ್ ಮಿಸ್ ಮಾಡಿಕೊಂಡಿದ್ದೇನೆ. ಇದೀಗ ತಾನು ಚೇತರಿಕೆಯ ಹಾದಿಯಲ್ಲಿದ್ದೇನೆ, ಶೀಘ್ರದಲ್ಲೇ ಮೈದಾನಕ್ಕೆ ಮರಳುತ್ತೇನೆ," ಎಂದು ಪ್ರಸಿದ್ಧ್ ಕೃಷ್ಣ ಬರೆದುಕೊಂಡಿದ್ದಾರೆ.
ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ತಮ್ಮ ಕೊನೆಯ ಕ್ರಿಕೆಟ್ ಪಂದ್ಯವನ್ನು ಭಾರತ ತಂಡದ ಪರವಾಗಿ 2022ರ ಆಗಸ್ಟ್ನಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ್ದರು. ಭಾರತ ರಾಷ್ಟ್ರೀಯ ತಂಡದ ಪರ ಪ್ರಸಿದ್ಧ್ ಕೃಷ್ಣ 14 ಏಕದಿನ ಪಂದ್ಯಗಳನ್ನು ಆಡಿದ್ದು, 23.92ರ ಸರಾಸರಿಯಲ್ಲಿ 25 ವಿಕೆಟ್ಗಳನ್ನು ಗಳಿಸಿದ್ದಾರೆ.
ಐಪಿಎಲ್ಗೆ ಮುನ್ನ ಅವರು ಗುಣಮುಖರಾಗುತ್ತಾರೆ ಎನ್ನುವ ಭರವಸೆಯಿಂದ ಕಳೆದ ವರ್ಷ ಐಪಿಎಲ್ನ ಮಿನಿ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 10 ಕೋಟಿ ರೂ. ನೀಡಿ ಪ್ರಸಿದ್ಧ್ ಕೃಷ್ಣರನ್ನು ಉಳಿಸಿಕೊಂಡಿತ್ತು. ಇದೀಗ ಪ್ರಸಿದ್ಧ್ ಕೃಷ್ಣ ಸೇವೆ ಲಭ್ಯವಿಲ್ಲದಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದೆ.
2022ರ ಐಪಿಎಲ್ ಋತುವಿನಲ್ಲಿ ಯುವ ವೇಗಿ ಪ್ರಸಿದ್ಧ್ ಕೃಷ್ಣ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ 17 ಪಂದ್ಯಗಳಲ್ಲಿ 29.00 ಸರಾಸರಿ ಮತ್ತು 8.29ರ ಎಕಾನಮಿ ದರದಲ್ಲಿ 19 ವಿಕೆಟ್ಗಳನ್ನು ಕಬಳಿಸಿದ್ದರು.