ಬುಧವಾರ, ಏಪ್ರಿಲ್ 12ರಂದು ಚೆನ್ನೈನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗ 3 ವಿಕೆಟ್ಗಳ ಅಂತರದ ಗೆಲುವು ಸಾಧಿಸಿತು.
ಇದೇ ವೇಳೆ ಐಪಿಎಲ್ 17ನೇ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸಲು ವಿಫಲವಾದ ಕಾರಣ ಐಪಿಎಲ್ ಆಡಳಿತ ಮಂಡಳಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಿದೆ.

ಇನ್ನು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ಗಳು ತೆಗೆದುಕೊಂಡ ನಿರ್ಧಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ರವಿಚಂದ್ರನ್ ಅಶ್ವಿನ್ ಅವರಿಗೂ ಕೂಡ ದಂಡ ವಿಧಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಐಪಿಎಲ್ ಆಡಳಿತ ಮಂಡಳಿಯು ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಇತ್ತೀಚೆಗೆ ಅವರ ಪಂದ್ಯದ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಯಿತು.
ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ನಂತರ ಮಾತನಾಡಿದ ರವಿಚಂದ್ರನ್ ಅಶ್ವಿನ್, ಬೌಲಿಂಗ್ ತಂಡವು ಚೆಂಡು ಬದಲಾಯಿಸುವುದನ್ನು ಕೇಳದಿದ್ದಾಗಲೂ, ಸಿಎಸ್ಕೆ ರನ್ ಚೇಸ್ ಮಾಡುವಾಗ ಪಂದ್ಯದ ಅಂಪೈರ್ಗಳು ಚೆಂಡನ್ನು ಏಕೆ ಬದಲಾಯಿಸಿದರು ಎಂದು ಬಲವಾಗಿ ಪ್ರಶ್ನಿಸಿದರು.

"ಅಂಪೈರ್ಗಳು ತಾವಾಗಿಯೇ ಚೆಂಡನ್ನು ಇಬ್ಬನಿ ಕಾರಣದಿಂದ ಬದಲಾಯಿಸಿರುವುದು ಅಚ್ಚರಿಯಾಗಿದೆ. ಇದು ಹಿಂದೆಂದೂ ಸಂಭವಿಸಿಲ್ಲ ಮತ್ತು ನನಗೆ ಆಶ್ಚರ್ಯ ಉಂಟುಮಾಡಿದೆ," ಎಂದು ರವಿಚಂದ್ರನ್ ಅಶ್ವಿನ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರವಿಚಂದ್ರನ್ ಅಶ್ವಿನ್ ಅವರ ಹೇಳಿಕೆಯ ನಂತರ, ಐಪಿಎಲ್ ಆಡಳಿತ ಮಂಡಳಿಯು ಐಪಿಎಲ್ನ ಆರ್ಟಿಕಲ್ 2.7 ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಪರಿಗಣಿಸಿದೆ. ಇದು ಆಟಗಾರರು ಪಂದ್ಯದ ಅಂಪೈರ್ಗಳನ್ನು ಬಹಿರಂಗವಾಗಿ ಟೀಕಿಸುವುದನ್ನು ಅಥವಾ ಪಂದ್ಯದಲ್ಲಿ ಸಂಭವಿಸುವ ಯಾವುದೇ ಘಟನೆಯ ಬಗ್ಗೆ ಅನುಚಿತ ಹೇಳಿಕೆ ನೀಡುವುದನ್ನು ನಿಷೇಧಿಸುತ್ತದೆ.
"ಪಂದ್ಯದಲ್ಲಿ ನಿಧಾನಗತಿ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ತಂಡದ ಮೊದಲ ಅಪರಾಧವಾಗಿರುವುದರಿಂದ, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ," ಎಂದು ಐಪಿಎಲ್ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಇದಕ್ಕೂ ಮೊದಲು ಏಪ್ರಿಲ್ 10ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ಈ ಋತುವಿನಲ್ಲಿ ನಿಧಾನಗತಿಯ ಓವರ್ ರೇಟ್ಗಾಗಿ ದಂಡನೆಗೆ ಒಳಗಾದ ಮೊದಲ ನಾಯಕ ಎನಿಸಿದ್ದಾರೆ. ನಿಗದಿತ ಸಮಯಕ್ಕಿಂತ ಮೊದಲು ಅಂತಿಮ ಓವರ್ ಮುಗಿಸಲು ವಿಫಲವಾದ ಕಾರಣ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಜೋಸ್ ಬಟ್ಲರ್ ಅರ್ಧಶತಕ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಸಿಎಸ್ಕೆ ತಂಡಕ್ಕೆ 176 ರನ್ಗಳ ಗುರಿಯನ್ನು ನೀಡಲಾಗಿತ್ತು.
ನಂತರ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ 176 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ಗೆ 172 ರನ್ ಗಳಿಸಿತು. ಕೊನೆಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ನಾಯಕ ಎಂಎಸ್ ಧೋನಿ ಹೋರಾಟದ ನಡೆಸಿದರು. ಅಂತಿಮವಾಗಿ ತವರಿನಲ್ಲಿಯೇ 3 ರನ್ಗಳಿಂದ ಪರಾಭವಗೊಂಡಿತು.