ಸೋಮವಾರ, ಏಪ್ರಿಲ್ 10ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 15ನೇ ಪಂದ್ಯದ ಕೊನೆಯ ಓವರ್ನಲ್ಲಿ ನಾಟಕೀಯ ತಿರುವು ಪಡೆದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 1 ವಿಕೆಟ್ ಅಂತರದಿಂದ ರೋಮಾಂಚನಕಾರಿ ಗೆಲುವು ಸಾಧಿಸಿತು.
ಆರ್ಸಿಬಿ ವಿರುದ್ಧ ರೋಚಕ ಗೆಲುವಿನ ನಂತರ ಉತ್ತೇಜಿತರಾದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭೀರ್ ಸಂಭ್ರಮಪಡುವ ಆತುರದಲ್ಲಿ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಅಭಿಮಾನಿಗಳನ್ನು ಮೌನವಾಗಿರುವಂತೆ ಕೈ ಸನ್ನೆ ಮಾಡಿ ಸೂಚಿಸಿದರು.

ಗಮನಾರ್ಹವಾಗಿ, ಪಂದ್ಯದ ದಿನದಂದು ಲಕ್ನೋ ತಂಡದ ಚೇಸಿಂಗ್ ಉದ್ದಕ್ಕೂ ಗೌತಮ್ ಗಂಭೀರ್ ತುಂಬಾ ತಾಳ್ಮೆ ಕಳೆದುಕೊಂಡಿದ್ದರು. ಮೇಜಿನ ಮೇಲೆ ಬಡಿಯುವುದು ಮತ್ತು ಇತರ ವಿಷಯಗಳ ನಡುವೆ ಸಿಟ್ಟಿನಿಂದ ಮಾತನಾಡುವುದು ಕಂಡುಬಂದಿತು.
ಆರ್ಸಿಬಿ ಮತ್ತು ಎಲ್ಎಸ್ಜಿ ನಡುವಿನ ಪಂದ್ಯವು 420ಕ್ಕೂ ಹೆಚ್ಚು ರನ್ಗಳು, 27 ಸಿಕ್ಸರ್ಗಳಿಂದ ಕೂಡಿತ್ತು. ಎರಡು ತಂಡಗಳ ನಡುವಿನ ಪಂದ್ಯದ ಅಂತಿಮ ಫಲಿತಾಂಶ ಕೊನೆಯ ಎಸೆತದಲ್ಲಿ ಬೈ ಮೂಲಕ ಬಂದಿತು. ಕೊನೆಯ ಓವರ್ ಬೌಲಿಂಗ್ ಮಾಡಿದ ಹರ್ಷಲ್ ಪಟೇಲ್ 5 ರನ್ಗಳನ್ನು ರಕ್ಷಿಸಬೇಕಾಗಿತ್ತು. ಅಂತಿಮ ಎಸೆತಕ್ಕೂ ಮುನ್ನ ನಾನ್-ಸ್ಟ್ರೈಕರ್ ಕೊನೆಯಲ್ಲಿ ರನೌಟ್ ಅವಕಾಶವನ್ನು ಕಳೆದುಕೊಂಡರು.
10ನೇ ಕ್ರಮಾಂಕದ ಬ್ಯಾಟರ್ ರವಿ ಬಿಷ್ಣೋಯಿ ಎಸೆತವನ್ನು ಪೂರ್ಣಗೊಳಿಸುವ ಮೊದಲೇ ಕ್ರೀಸ್ನಿಂದ ಹೊರಬಂದಿದ್ದರು. ಆಗ ಹರ್ಷಲ್ ಪಟೇಲ್ ರನೌಟ್ ಮಾಡುವ ಅವಕಾಶವಂಚಿತರಾದರು. ಇದು ಆರ್ಸಿಬಿ ಅಭಿಮಾನಿಗಳು ಥ್ರಿಲ್ಲರ್ ಸೂಪರ್ ಓವರ್ ಪಂದ್ಯವಾಗುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಕಾದಿತ್ತು.

ಕೊನೆಯ ಎಸೆತದಲ್ಲಿ ಬೈ ಮೂಲಕ ರನ್ ತೆಗೆದುಕೊಂಡ ಅವೇಶ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು ಮತ್ತು ಇಡೀ ತಂಡ ಮೈದಾನ ಪ್ರವೇಶಿಸಿ ಸಂಭ್ರಮಿಸಿತು. ಆಗ ಅವೇಶ್ ಖಾನ್ ಹೆಲ್ಮೆಟ್ ಕಿತ್ತು ಮೈದಾನದಲ್ಲಿ ಎಸೆದರು. ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರು ಆಟಗಾರರಿಗಿಂತ ತುಸು ಹೆಚ್ಚಿನ ತಾಳ್ಮೆ ಕಳೆದುಕೊಂಡು ಆಕ್ರಮಣಕಾರಿಯಾಗಿ ವರ್ತಿಸಿದರು.
Virat Kohli: ಐಪಿಎಲ್ನಲ್ಲಿ ಕೀರನ್ ಪೊಲಾರ್ಡ್ರ ಬೃಹತ್ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ
ಗೆಲುವಿನ ನಂತರ ಗೌತಮ್ ಗಂಭೀರ್ ತನ್ನ ತಂಡದ ಆಟಗಾರರನ್ನು ತಬ್ಬಿಕೊಂಡು ಅಭಿನಂದಿಸಿದರು. ನಂತರ ತನ್ನ ತುಟಿಗಳ ಮೇಲೆ ಬೆರಳಿಟ್ಟು ಬೆಂಗಳೂರಿನ ಪ್ರೇಕ್ಷಕರಿಗೆ ಮೌನವಾಗಿರುವಂತೆ ಸೂಚಿಸಿದ ಘಟನೆ ನಡೆಯಿತು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗೌತಮ್ ಗಂಭೀರ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಎಲ್ಎಸ್ಜಿ ತಂಡದ ಗೆಲುವಿಗೆ ಸ್ಟೊಯಿನಿಸ್, ಪೂರನ್ ಆಸರೆ
213 ರನ್ಗಳ ಬೃಹತ್ ಮೊತ್ತದ ಚೇಸಿಂಗ್ನಲ್ಲಿ 105 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಎಲ್ಎಸ್ಜಿ ತಂಡವನ್ನು ಮಾರ್ಕಸ್ ಸ್ಟೊಯಿನಿಸ್ 35 ಎಸೆತಗಳಲ್ಲಿ 60 ರನ್, ನಿಕೋಲಸ್ ಪೂರನ್ 19 ಎಸೆತಗಳಲ್ಲಿ 62 ರನ್ ಮತ್ತು ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 61 ರನ್, ಫಾಫ್ ಡು ಪ್ಲೆಸಿಸ್ 46 ಎಸೆತಗಳಲ್ಲಿ ಅಜೇಯ 79 ರನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ 29 ರನ್ಗಳಲ್ಲಿ 59 ರನ್ಗಳ ನೆರವಿನಿಂದ ಬೆಂಗಳೂರು 20 ಓವರ್ಗಳ ನಂತರ 212 ರನ್ ಗಳಿಸಲು ಸಹಾಯವಾಗಿತ್ತು.