
ಇಂದು ( ಮೇ 21 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯ ಆಯೋಜನೆಗೊಂಡಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಬೆಂಗಳೂರು ನಗರದಲ್ಲಿ ಮಧ್ಯಾಹ್ನದಿಂದ ಭಾರೀ ಮಳೆಯಾದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಒದ್ದೆಯಾಗಿದ್ದು, ಪಂದ್ಯದ ಟಾಸ್ ವಿಳಂಬವಾಗಿದೆ.
ಇನ್ನು 7.15ರ ಸಮಯದಲ್ಲಿಯೂ ಸಹ ಮತ್ತೆ ಮಳೆ ಆರಂಭಗೊಂಡಿದ್ದು, ಸದ್ಯಕ್ಕೆ ಮಳೆ ನಿಲ್ಲುವ ಸೂಚನೆಗಳು ಕಂಡುಬಂದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದ್ದು, ಸದ್ಯ ಮಳೆಯಿಂದಾಗಿ ಪಂದ್ಯ ರದ್ದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬೀಳಲಿದೆ ಎಂಬ ಬೇಸರ ಅಭಿಮಾನಿಗಳನ್ನು ಕಾಡಲಾರಂಭಿಸಿತ್ತು.
ಆದರೆ ಇದೀಗ ಕ್ರಿಕ್ಬಜ್ನಲ್ಲಿ ತಿಳಿಸಿರುವ ಪ್ರಕಾರ ಪಂದ್ಯದ ಟಾಸ್ 7.45ಕ್ಕೆ ನಡೆಯಲಿದ್ದು, ಪಂದ್ಯ 8 ಗಂಟೆಗೆ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಅಲ್ಲದೇ ಅತ್ತ ಪ್ಲೇಆಫ್ ರೇಸ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಪರ್ಧಿಯಾಗಿದ್ದ ಮುಂಬೈ ಇಂಡಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಪ್ಲೇಆಫ್ಗೆ ಬೇಕಾದ 16 ಅಂಕಗಳನ್ನು ಗಳಿಸಿದ್ದು, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ತಲುಪಬೇಕೆಂದರೆ ಈ ಪಂದ್ಯ ಆರಂಭವಾಗಿ ಗೆಲ್ಲಲೇಬೇಕಿದೆ.