ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ, ಮೇ 30ರ ಮುಂಜಾನೆ ನಡೆದ 2023ರ ಐಪಿಎಲ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ಗಳ ರೋಚಕ ಜಯದೊಂದಿಗೆ ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿತು.
ಮಳೆ ಬಾಧಿತ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 215 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ತಂಡ 215 ಓವರ್ಗಳಲ್ಲಿ 171 ರನ್ಗಳ ಪರಿಷ್ಕೃತ ಗುರಿ ಪಡೆದು, ಕೊನೆಯ ಎಸೆತದಲ್ಲಿ ಗೆಲುವಿನ ಗುರಿ ಮುಟ್ಟಿತು.

ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 14 ಆವೃತ್ತಿಗಳಲ್ಲಿ ಐದು ಪ್ರಶಸ್ತಿಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಯಿತು ಮತ್ತು 16 ಆವೃತ್ತಿಗಳಲ್ಲಿ ಐದು ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಮೀರಿಸಿತು.
ಭಾರತ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ ಮಾಜಿ ಸಹ ಆಟಗಾರ ಎಂಎಸ್ ಧೋನಿ ಮತ್ತು ಸಿಎಸ್ಕೆ ತಂಡವನ್ನು ಲಕ್ಷಾಂತರ ಅಭಿಮಾನಿಗಳೊಂದಿಗೆ ಸೇರಿ ಅಭಿನಂದಿಸಿದರು.
ಸಚಿನ್ ತೆಂಡೂಲ್ಕರ್ ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಸಿಎಸ್ಕೆ ಮತ್ತು ಎಂಎಸ್ ಧೋನಿಗಾಗಿ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಚೆನ್ನೈನ ಬ್ಯಾಟಿಂಗ್ ಡೆಪ್ತ್ ಫೈನಲ್ನಲ್ಲಿ ಗೆಲುವಿನ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು.
"ಇದುವರೆಗಿನ ಅತ್ಯಂತ ರೋಮಾಂಚನಕಾರಿ ಐಪಿಎಲ್ ಸೀಸನ್ಗಳಲ್ಲಿ ಒಂದಾಗಿ ಮುಕ್ತಾಯಗೊಂಡಿದೆ! ಸಿಎಸ್ಕೆ ಮತ್ತು ಗುಜರಾತ್ ಟೈಟನ್ಸ್ ಎರಡೂ ತೀವ್ರವಾಗಿ ಪೈಪೋಟಿ ನೀಡಿದವು. ಆದರೆ ನಾನು ಹೇಳಿದಂತೆ ಚೆನ್ನೈನ ಬ್ಯಾಟಿಂಗ್ ಡೆಪ್ತ್ ಗೆಲುವಿನ ಅಂಶವಾಗಿದೆ ಎಂದು ಸಾಬೀತಾಯಿತು," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
"ಆರಂಭದಿಂದಲೂ ಸಿಎಸ್ಕೆ ಮತ್ತು ಗುಜರಾತ್ ಟೈಟನ್ಸ್ ಎರಡೂ ತಂಡಗಳ ಅಸಾಧಾರಣ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರಶಸ್ತಿ ವಿಜೇತ ತಂಡವನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಕೊನೆಯ ಎಸೆತದವರೆಗೂ ಪಂದ್ಯವು ಉಗುರು ಕಚ್ಚುವ ತೀವ್ರತೆಯಿಂದ ತೆರೆದುಕೊಂಡಿತು," ಎಂದಿದ್ದಾರೆ.

"ಮತ್ತೊಂದು ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಕ್ಕಾಗಿ ಎಂಎಸ್ ಧೋನಿ ಮತ್ತು ಇಡೀ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಭಿನಂದನೆಗಳು. ಕೊನೆಯ ಎಸೆತದವರೆಗೂ ಗುಜರಾತ್ ಟೈಟನ್ಸ್ ಅವರ ಶ್ಲಾಘನೀಯ ಪ್ರಯತ್ನಕ್ಕಾಗಿ ಮೆಚ್ಚಬೇಕು. ದುರದೃಷ್ಟವಶಾತ್, ಗೆಲ್ಲಲಾಗಲಿಲ್ಲ. ಆದರೆ ಎರಡೂ ತಂಡಗಳು ನಮ್ಮೆಲ್ಲರ ಹೃದಯವನ್ನು ಗೆದ್ದಿವೆ! ಎಲ್ಲರೂ ಉತ್ತಮವಾಗಿ ಆಡಿದರು," ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ.
ಇನ್ನು ಐಪಿಎಲ್ 2023ರಲ್ಲಿ ಬ್ಯಾಟ್ನೊಂದಿಗೆ ಅತ್ಯುತ್ತಮ ಋತುವನ್ನು ಆನಂದಿಸಿದ ಆರ್ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಹೊಸ ಐಪಿಎಲ್ ಚಾಂಪಿಯನ್ ತಂಡವನ್ನು ಅಭಿನಂದಿಸಲು ಮರೆಯಲಿಲ್ಲ.
ಸಿಎಸ್ಕೆ ಜೊತೆಗಿನ ತಮ್ಮ ಆರ್ಸಿಬಿ ತಂಡದ ಪೈಪೋಟಿಯನ್ನು ಬದಿಗಿಟ್ಟು, "ವಾಟ್ ಎ ಚಾಂಪಿಯನ್ ರವೀಂದ್ರ ಜಡೇಜಾ. ವೆಲ್ ಡನ್ ಸಿಎಸ್ಕೆ ಮತ್ತು ಎಂಎಸ್ ಧೋನಿ," ಎಂದು ಟಿವಿಯ ಫೋಟೋ ತೆಗೆದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷವಾಗಿ ಬರೆದಿದ್ದಾರೆ.