2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಋತುವಿನ ಪಂದ್ಯಾವಳಿಯಲ್ಲಿ ಹಲವು ಆಟಗಾರರು ಗಾಯದಿಂದ ಹಾಗೂ ಇನ್ನಿತರ ಕಾರಣದಿಂದ ಹೊರಗುಳಿದಿದ್ದಾರೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರರು ಸೇರಿದ್ದಾರೆ.
ಪ್ರಮುಖ ವೇಗಿ ಜೋಶ್ ಹೇಜಲ್ವುಡ್ ಗಾಯದಿಂದ ಲೀಗ್ನ ಅರ್ಧಭಾಗ ತಪ್ಪಿಸಿಕೊಳ್ಳಲಿದ್ದರೆ, ವನಿಂದು ಹಸರಂಗ ತಮ್ಮ ರಾಷ್ಟ್ರೀಯ ತಂಡದ ಪರ ಆಡುತ್ತಿರುವುದರಿಂದ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದರ ನಡುವೆಯೇ ಇಂಗ್ಲೆಂಡ್ನ ವೇಗಿ ರೀಸ್ ಟೋಪ್ಲೆ ಗಾಯದಿಂದಾಗಿ ಹೊರಗುಳಿದಿದ್ದಾರೆ.

ಇದಕ್ಕೂ ಮೊದಲು ಆಲ್ರೌಂಡರ್ ವಿಲ್ ಜಾಕ್ಸ್ ಗಾಯದ ಕಾರಣ ಹೊರಬಿದ್ದ ನಂತರ, ನ್ಯೂಜಿಲೆಂಡ್ನ ಮೈಕಲ್ ಬ್ರೆಸ್ವೆಲ್ ಅವರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೀಗ ರೀಸ್ ಟೋಪ್ಲೆ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಉಳಿದ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಕೇವಲ ಎರಡು ಪಂದ್ಯಗಳ ನಂತರ 2023ರ ಐಪಿಎಲ್ನ ಆರ್ಸಿಬಿ ತಂಡದ ಎರಡನೇ ಬದಲಿ ಆಟಗಾರನನ್ನು ಸೇರಿಸಿಕೊಂಡಿದೆ. ಹೀಗಾಗಿ ಆರ್ಸಿಬಿ ತಂಡಕ್ಕೆ ವೇಯ್ನ್ ಪಾರ್ನೆಲ್ ಮೂಲಕ ಮತ್ತೊಂದು ವೇಗದ ಬೌಲಿಂಗ್ ಅಸ್ತ್ರ ಸಿಕ್ಕಂತಾಗಿದ್ದು, ರೀಸ್ ಟೋಪ್ಲೆ ಸ್ಥಾನವನ್ನು ತುಂಬಲಿದ್ದಾರೆ. ಇದೆಲ್ಲದರ ನಡುವೆ, ಆರ್ಸಿಬಿ ತಂಡದ ಮ್ಯಾನೇಜ್ಮೆಂಟ್ಗೆ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ವೇಯ್ನ್ ಪಾರ್ನೆಲ್ ಅವರು 2009ರಲ್ಲಿಯೇ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಟಿ20 ಪಂದ್ಯವನ್ನು ಆಡಿದ ಅನುಭವಿಯಾಗಿದ್ದಾರೆ. ಪಾರ್ನೆಲ್ ಇದುವರೆಗೆ 56 ಪಂದ್ಯಗಳನ್ನು ಆಡಿದ್ದು, 18.5ರ ಸರಾಸರಿ ಮತ್ತು 8.29ರ ಎಕಾನಮಿ ದರದಲ್ಲಿ 59 ವಿಕೆಟ್ಗಳನ್ನು ಪಡೆದಿದ್ದಾರೆ.
IPL 2023: ವರುಣ್ ಚಕ್ರವರ್ತಿ, ಸುಯಶ್ ಮಾರಕ ಬೌಲಿಂಗ್ಗೆ ತತ್ತರಿಸಿದ ಆರ್ಸಿಬಿ; ಕೆಕೆಆರ್ಗೆ ಮೊದಲ ಗೆಲುವು
ವೇಯ್ನ್ ಪಾರ್ನೆಲ್ ಈ ಹಿಂದೆ ಐಪಿಎಲ್ನ ಡೆಲ್ಲಿ ಡೇರ್ಡೆವಿಲ್ಸ್ ಮತ್ತು ಪುಣೆ ವಾರಿಯರ್ಸ್ ಇಂಡಿಯಾ ತಂಡಗಳ ಭಾಗವಾಗಿದ್ದರು. 2010ರಲ್ಲಿ ಮೂರನೇ ಸೀಸನ್ನಿಂದ 2014ರವರೆಗೆ ನಿರಂತರವಾಗಿ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ.

ಆರ್ಸಿಬಿ ತಂಡ ಮುಂದಿನ ಪಂದ್ಯವನ್ನು ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎದುರಿಸಲಿದೆ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 2023ರ ಐಪಿಎಲ್ನ ತಮ್ಮ ಮೊದಲ ಎದುರಾಳಿ ನೆಲದಲ್ಲಿ ಹೀನಾಯ ಸೋಲಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಏಪ್ರಿಲ್ 10ರಂದು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ತಮ್ಮ ತವರಿನ ಪಂದ್ಯಕ್ಕೆ ಮರಳಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸಮಾನ ದಾಖಲೆಗಳನ್ನು ಹೊಂದಿವೆ. ಎರಡೂ ತಂಡಗಳು ತಲಾ ಎರಡು ಬಾರಿ ಮುಖಾಮುಖುಯಾಗಿದ್ದು, ತಲಾ ಒಂದೊಂದು ಪಂದ್ಯವನ್ನು ಗೆದ್ದು ಸೋತಿವೆ.
ಗಮನಾರ್ಹ ಸಂಗತಿಯೆಂದರೆ, ಆರ್ಸಿಬಿ ತಂಡದ ಮತ್ತೊಬ್ಬ ವಿದೇಶಿ ಆಟಗಾರ ಶ್ರೀಲಂಕಾದ ವನಿಂದು ಹಸರಂಗ ಅವರು ಏಪ್ರಿಲ್ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ಬಳಿಕ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಆಡಿಸಬೇಕೆ, ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಿದೆ.