
ಜೈಪುರ, ಮೇ 9: ಕೆಲವೊಂದು ಸಣ್ಣ ಯಡವಟ್ಟುಗಳೇ ತಂಡದ ಸೋಲಿಗೆ ಕಾರಣವಾದರೆ ಪುಟಾಣಿ ಶ್ರಮ ತಂಡವೊಂದನ್ನು ಮೇಲೆತ್ತೋದೂ ಇದೆ. ನಿನ್ನೆಯ ಪಂಜಾಬ್-ರಾಜಸ್ಥಾನ್ ಪಂದ್ಯದಲ್ಲಿ ಪಂಜಾಬ್ ನ ಸಣ್ಣ ನಿರ್ಲಕ್ಷ್ಯವೇ ಸೋಲಿಗೆ ಕಾರಣವಾಯಿತು.
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ರಾಜಸ್ಥಾನ್ ಎದುರು ಸೋತಿತು. ಅದೂ ರಾಜಸ್ಥಾನ್ ನೀಡಿದ್ದ 158 ರನ್ ಸಾಧಾರಣ ಗುರಿಯನ್ನೂ ತಲುಪಲಾಗದೆ ಪಂಜಾಬ್ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದು 143 ರನ್ ಪೇರಿಸಿ 15 ರನ್ ಗಳಿಂದ ರಾಜಸ್ಥಾನ್ ಎದುರು ತಲೆಬಾಗಿತು.
ರಾಜಸ್ಥಾನ್ ರಾಯಲ್ಸ್ ಗೆ ಇದು ಮಾಡು ಇಲ್ಲವೆ ಮಡಿ ಪಂದ್ಯಾವಾಗಿದ್ದರಿಂದ ಗೆಲ್ಲುವ ನಿಟ್ಟಿನಲ್ಲಿ ಅದು ಜಾಗರೂಕತೆ ವಹಿಸಿತೆಂದು ಒಂದು ಕಡೆ ಹೇಳಬಹುದಾದರೂ ಪಂಜಾಬ್ ಬ್ಯಾಟ್ಸ್ಮನ್ ಗಳ ನಿರ್ಲಕ್ಷ್ಯವೂ ಮತ್ತೊಂದೆಡೆ ರಾಜಸ್ಥಾನ್ ಗೆಲುವಿಗೆ ದಾರಿಯಾಯಿತು.
ಗೇಲ್ ಠುಸ್ ಪಟಾಕಿ
ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದ ಕ್ರಿಸ್ ಗೇಲ್ ಈ ಐಪಿಎಲ್ ಉದ್ದಕ್ಕೂ ಸಿಡಿದಿದ್ದು ಕಡಿಮೆ. ಒಂದೆರಡು ಪಂದ್ಯಗಳಲ್ಲಷ್ಟೇ ಅಬ್ಬರಿಸಿದ ಗೇಲ್, ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ತನ್ನ ಕೈ ಬಿಟ್ಟಿದ್ದಕ್ಕೆ ಪರೋಕ್ಷವಾಗಿ ಗೇಲಿ ಮಾಡಿದ್ದು ಬಿಟ್ಟರೆ ಹೆಚ್ಚಿನ ಪಂದ್ಯಗಳಲ್ಲಿ ಗೇಲ್ ಬೆಂಬಲ ತಂಡಕ್ಕೆ ಸಿಗಲಿಲ್ಲ.
ಯುವಿ ಅಲಭ್ಯ
ಬ್ಯಾಟ್ ಮೂಲಕ ಆರ್ಭಟಿಸುವ ಸಿಡುಕ ಯುವರಾಜ್ ಸಿಂಗ್ ಅವರೂ ಈ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕಿಳಿದಿರಲಿಲ್ಲ. ಒಂದುವೇಳೆ ಯುವಿ ನಿನ್ನೆ ಪಂದ್ಯವನ್ನು ಆಡಿದ್ದರೆ ಪಂದ್ಯ ತಿರುವು ಪಡೆದರೂ ಪಡೆಯುತ್ತಿತ್ತು. ಆದರೆ ಯುವಿ ಈ ಬಾರಿ ಅನೇಕ ಪಂದ್ಯಗಳಲ್ಲಿ ಹೊರಗುಳಿಯುವ ಮೂಲಕ ನಿರಾಸೆ ಮೂಡಿಸಿದರು.
ಏಕಾಂಗಿ ಹೋರಾಟ ನಡೆಯೋಲ್ಲ
ಏಕಾಂಗಿ ಹೋರಾಟ ನಡೆಯೋಲ್ಲ ಎನ್ನುವುದನ್ನು ನಾವು ಸಚಿನ್ ಕಾಲದಿಂದಲೂ (ನೇರವಾಗಿ ಆಗದಿದ್ದರೂ ಚಿತ್ರ-ವಿಡಿಯೋ-ಬರಹಗಳ ಮೂಲಕ) ನೋಡಿದ್ದೇವೆ-ಅರಿತ್ತಿದ್ದೇವೆ. ತಂಡದ ಆಟಕ್ಕೆ ತಂಡದ ಇತರ ಸದಸ್ಯರ ಬೆಂಬಲ ಕೊಂಚವಾದ್ರೂ ಬೇಕೇಬೇಕು. ಪಂಜಾಬ್ ತಂಡದ ರಾಹುಲ್ 95 (70) ರನ್ ಸಿಡಿಸಿದ್ದರೂ ಪಂಜಾಬ್ ಗೆಲ್ಲಲಿಲ್ಲ ಯಾಕೆನ್ನುವುದು ಇದೇ ಕಾರಣಕ್ಕೆ. ಯಾಕೆಂದರೆ ರಾಹುಲ್ ಬಿಟ್ಟರೆ ತಂಡದ ಯಾರೊಬ್ಬರ ರನ್ನೂ 11ನ್ನು ಮೀರಿರಲಿಲ್ಲ!
ಬಿಗಿ ಬೌಲಿಂಗ್
ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ಪರ ಬಟ್ಲರ್ (82/58) ಬ್ಯಾಟ್ ಬೀಸಿದ್ದು ಬಿಟ್ಟರೆ ಇಲ್ಲೂ ಬಹುತೇಕ ಬ್ಯಾಟ್ಸ್ಮನ್ ಗಳು ರನ್ ಕೊಡುಗೆ ನೀಡಲಿಲ್ಲ. ಆದರೆ ಬೌಲಿಂಗ್ ವೇಳೆ ರಾಜಸ್ಥಾನ್ ಆಟಗಾರರು ಎಚ್ಚರವಹಿಸಿದರು. ರಾಜಸ್ಥಾನ್ ಎಲ್ಲ ಬೌಲರ್ಗಳೂ ಹೆಚ್ಚು ರನ್ ನೀಡದೆ ಪಂಜಾಬ್ ವಿಕೆಟ್ ಉರುಳಿಸುತ್ತಾ ಬಂದರು. ರಾಜಸ್ಥಾನ್ ತಂಡದ ಬೌಲಿಂಗ್ ಶ್ರಮ ಎದುರಾಳಿಯನ್ನು ಕಟ್ಟಿಹಾಕಲು ನೆರವಾಯಿತು.