
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏಷ್ಯಾಕಪ್ 2023ರಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬರುವುದಿಲ್ಲ ಎನ್ನುವ ನಿರ್ಧಾರವನ್ನು ಬಲಾಯಿಸಲು ಸಾಧ್ಯವಿಲ್ಲ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿಗೆ ತಿಳಿಸಿದ್ದಾರೆ.
ಏಷ್ಯಾಕಪ್ ಆತಿಥ್ಯದ ಬಗ್ಗೆ ನಿರ್ಧರಿಸಲು ಸಭೆ ಕರೆಯಬೇಕು ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಒತ್ತಾಯದ ಮೇರೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಹ್ರೇನ್ನಲ್ಲಿ ಸಭೆ ಕರೆಯಲಾಗಿದೆ. ಜಯ್ ಶಾ ಈ ಸಭೆಯಲ್ಲಿ ಪಾಲ್ಗೊಳ್ಳಲು ಬಹ್ರೇನ್ಗೆ ತೆರಳಿದ್ದಾರೆ. ಬಿಸಿಸಿಐ ಮೂಲಗಳ ಮಾಹಿತಿಯ ಪ್ರಕಾರ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರವಾಗುವುದು ನಿಶ್ಚಿತವಾಗಿದೆ.
"ಜಯ್ ಶಾ ಎಸಿಸಿ ಸಭೆಯಲ್ಲಿ ಭಾಗವಹಿಸಲು ಬಹ್ರೇನ್ಗೆ ತೆರಳಿದ್ದಾರೆ. ಬಿಸಿಸಿಐ ತನ್ನ ನಿಲುವನ್ನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ. ಭಾರತ ಸರ್ಕಾರದಿಂದ ನಮಗೆ ಅನುಮತಿ ಸಿಗದ ಕಾರಣ ನಾವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ" ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಪಿಸಿಬಿ ಹೋಸ್ಟಿಂಗ್ ಹಕ್ಕುಗಳನ್ನು ಉಳಿಸಿಕೊಳ್ಳುವುದರೊಂದಿಗೆ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಬಹುದಾಗಿದೆ. ಶ್ರೀಲಂಕಾ ಕೂಡ ಪಾಕಿಸ್ತಾನಕ್ಕೆ ಪರ್ಯಾಯ ಆಯ್ಕೆಯಾಗಿದೆ. 2022ರಲ್ಲಿ ಏಷ್ಯಾಕಪ್ ಆತಿಥ್ಯದಿಂದ ಶ್ರೀಲಂಕಾ ಹಿಂದೆ ಸರಿದಿತ್ತು. ಆರ್ಥಿಕ ಹಿಂಜರಿತ, ಆಂತರಿಕ ದಂಗೆಯ ಪರಿಣಾಮ ಯುಎಇನಲ್ಲಿ ಏಷ್ಯಾಕಪ್ ಆಡಲಾಯಿತು.

ಭದ್ರತೆಯ ಬಗ್ಗೆ ಬಿಸಿಸಿಐ ಕಳವಳ
ಕೆಲವೇ ದಿನಗಳ ಹಿಂದೆ ಪಾಕಿಸ್ತಾನದ ಪೇಶಾವರದಲ್ಲಿ ಭಾರಿ ಬಾಂಬ್ ಸ್ಫೋಟ ನಡೆದಿತ್ತು. ಇದನ್ನೇ ಮುಂದಿಟ್ಟುಕೊಂಡು ಬಿಸಿಸಿಐ ಭದ್ರತೆಯ ಬಗ್ಗೆ ಪ್ರಶ್ನೆ ಮಾಡಬಹುದು. ಭಾರತ ಮಾತ್ರವಲ್ಲ ಇತರೆ ದೇಶಗಳು ಕೂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ಹಿಂಜರಿಬಹುದು ಎನ್ನುವ ವಾದವನ್ನು ಕೂಡ ಬಿಸಿಸಿಐ ಮಂಡಿಸಬಹುದಾಗಿದೆ.
2022ರ ಡಿಸೆಂಬರ್ನಲ್ಲಿ, ಎಸಿಸಿ ಅಧ್ಯಕ್ಷ ಜಯ್ ಶಾ ಪ್ರಮುಖ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಏಷ್ಯಾಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದರೂ ಕೂಡ ಸ್ಥಳವನ್ನು ಉಲ್ಲೇಖಿಸಿರಲಿಲ್ಲ. ಜಯ್ ಶಾ ಏಕಪಕ್ಷೀಯವಾಗಿ ನಿರ್ಧಾರ ಮಾಡಿದ್ದಾರೆ ಎಂದು ನಜಮ್ ಸೇಥಿ ಆರೋಪಿಸಿದ್ದರು.

ಭಾರತಕ್ಕೆ ಬರಲ್ಲ ಅಂದ ಪಿಸಿಬಿ ಅಧ್ಯಕ್ಷರೇ ಬದಲಾವಣೆ
2022ರ ಅಕ್ಟೋಬರ್ ತಿಂಗಳಿನಲ್ಲೇ ಬಿಸಿಸಿಐ ಮುಖ್ಯಸ್ಥ ಜಯ್ ಶಾ ಭಾರತ ತಂಡ ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಂದು ಪಿಸಿಬಿ ಅಧ್ಯಕ್ಷರಾಗಿದ್ದ ರಮೀಝ್ ರಾಜಾ ಭಾರತ ಏಷ್ಯಾಕಪ್ಗಾಗಿ ಪಾಕಿಸ್ತಾನಕ್ಕೆ ಬರದಿದ್ದರೆ, ವಿಶ್ವಕಪ್ನಲ್ಲಿ ಆಡಲು ಪಾಕಿಸ್ತಾನ ಭಾರತಕ್ಕೆ ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಅದಾದ ಕೆಲವೇ ತಿಂಗಳಿನಲ್ಲಿ ರಮೀಝ್ ರಾಜಾರನ್ನು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ನಜಂ ಸೇಥಿಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.