ಕಾರ್ಗಿಲ್ ವಿಜಯ್ ದಿವಸ್: ಪಾಕ್ ವಿರುದ್ಧ ಗೆದ್ದ ಯುದ್ಧ ವೀರರಿಗೆ ನಮನ ಸಲ್ಲಿಸಿದ ಭಾರತೀಯ ಕ್ರಿಕೆಟಿಗರು

ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ವಲಯದ ಸದಸ್ಯರು ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಭಾರತೀಯ ಸಶಸ್ತ್ರ ಪಡೆಗಳು ಜುಲೈ 26, 1999ರಂದು ನೆರೆಯ ಪಾಕಿಸ್ತಾನವನ್ನು ಸೋಲಿಸಿದವು. ಅಂದಿನಿಂದ ಆಪರೇಷನ್ ವಿಜಯ್ನಲ್ಲಿ ಭಾಗವಹಿಸಿದ ಸೈನಿಕರ ಹೆಮ್ಮೆ ಮತ್ತು ಶೌರ್ಯವನ್ನು ಸ್ಮರಣೆ ಮಾಡಿಕೊಳ್ಳಲು ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸಲಾಗುತ್ತದೆ.
ಜುಲೈ 26, 1999ರಂದು ಕಾರ್ಗಿಲ್ ಯುದ್ಧ ಎಂದು ಕರೆಯಲ್ಪಡುವ ಪಾಕಿಸ್ತಾನಿ ಸೇನೆಯು ಆಕ್ರಮಿಸಿಕೊಂಡಿದ್ದ ಪರ್ವತದ ಎತ್ತರವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಭಾರತೀಯ ಸೈನಿಕರ ಸಾಹಸದ ವಿಜಯವನ್ನು ಈ ದಿನ ಸೂಚಿಸುತ್ತದೆ. ಈ ಯುದ್ಧದಲ್ಲಿ ಎರಡೂ ದೇಶಗಳ ನೂರಾರು ಸೈನಿಕರು ಮಡಿದರು ಮತ್ತು ಸಾವಿರಾರು ಸೈನಿಕರು ಗಾಯಗೊಂಡಿದ್ದರು.
ನಮ್ಮ ಯುವ ಸಹೋದರರಿಗೆ ನಮನಗಳು
ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟದಿಂದಾಗಿ ಶತ್ರು ಸೆನೆಯನ್ನು ಹಿಮ್ಮೆಟ್ಟಿಸಿ ಭಾರತದ ಭೂಪ್ರದೇಶವನ್ನು ಮರಳಿ ಪಡೆದರು. ಇದೇ ವೇಳೆ ಕಾರ್ಗಿಲ್ ವಿಜಯ್ ದಿವಸ್ನ ಅಂಗವಾಗಿ ಭಾರತದಲ್ಲಿ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಯಿತು. ಅದೇ ರೀತಿ ಭಾರತೀಯ ಕ್ರಿಕೆಟ್ನ ಹಾಲಿ ಹಾಗೂ ಮಾಜಿ ಆಟಗಾರರು ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಿ ಗೌರವಿಸಿದ್ದಾರೆ.
"ದೇಶಕ್ಕಾಗಿ ಹುತಾತ್ಮರಾದ ನಮ್ಮ ಯುವ ಸಹೋದರರಿಗೆ (ಸೈನಿಕರು) ನಮನಗಳು. ದೇಶವು ನಿಮಗೆ ಯಾವಾಗಲೂ ಕೃತಜ್ಞರಾಗಿರುತ್ತದೆ. ಕಾರ್ಗಿಲ್ ವಿಜಯ್ ದಿವಸಕ್ಕೆ 23 ವರ್ಷಗಳು. ಇನ್ನೂ ಜೀವಂತವಾಗಿದೆ. ಜೈ ಹಿಂದ್," ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾರತದ ವಿಜಯಕ್ಕೆ 23 ವರ್ಷಗಳು
"ಈ ದಿನವು ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ 23 ವರ್ಷಗಳನ್ನು ಸೂಚಿಸುತ್ತದೆ. ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸಲು ತಮ್ಮನ್ನು ತ್ಯಾಗ ಮಾಡಿದ ನಿಜವಾದ ಮತ್ತು ಧೈರ್ಯಶಾಲಿ ವೀರರ ಎಲ್ಲಾ ಶೌರ್ಯ ಪ್ರಯತ್ನಗಳಿಗೆ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ. ಜೈ ಹಿಂದ್. 'ಕಾರ್ಗಿಲ್ ವಿಜಯ್ ದಿವಸ್" ಎಂದು ಮಾಜಿ ಭಾರತೀಯ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
"ನಮ್ಮ ತಾಯ್ನಾಡನ್ನು ನಿಸ್ವಾರ್ಥವಾಗಿ ರಕ್ಷಿಸಿದ ಕಾರ್ಗಿಲ್ ಯುದ್ಧದ ಧೈರ್ಯಶಾಲಿ ಹುತಾತ್ಮ ಯೋಧರಿಗೆ ನನ್ನ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಸಶಸ್ತ್ರ ಪಡೆಗಳಿಗೆ ನಾವು ಯಾವಾಗಲೂ ಋಣಿಯಾಗಿರುತ್ತೇವೆ. ಜೈ ಹಿಂದ್," ಎಂದು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಉಸಿರಾಡಲು ಸಹ ಕಷ್ಟವಾಗಿರುವಲ್ಲಿ ಅವರು ಯುದ್ಧವನ್ನು ಗೆದ್ದರು
ಏತನ್ಮಧ್ಯೆ, ರಾಜಕಾರಣಿ ಮತ್ತು ಕ್ರಿಕೆಟ್ ಮೆಂಟರ್ ಆಗಿ ಹೊರಹೊಮ್ಮಿರು ಗೌತಮ್ ಗಂಭೀರ್ ಕೂಡ ಭಾರತೀಯ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಂಡಿದ್ದಾರೆ. "ನಮಗೆ ಉಸಿರಾಡಲು ಸಹ ಕಷ್ಟವಾಗಿರುವಲ್ಲಿ ಅವರು ಯುದ್ಧವನ್ನು ಗೆದ್ದರು! ಧೈರ್ಯಶಾಲಿಗಳಿಗೆ ಸೆಲ್ಯೂಟ್. 'ಕಾರ್ಗಿಲ್ ವಿಜಯ್ ದಿವಸ್," ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ಯೋಧರಿಂದ ಶೌರ್ಯ ಮತ್ತು ಉತ್ಸಾಹದಿಂದ ಪ್ರತಿ ದಾಳಿ
ಕಾರ್ಗಿಲ್ ಯುದ್ಧವು ಮೇ 8, 1999ರಿಂದ ಜುಲೈ 26, 1999ರ ನಡುವೆ ಪಾಕಿಸ್ತಾನದ ಒಳನುಗ್ಗುವವರ ವಿರುದ್ಧ ಹೋರಾಡಲಾಯಿತು. ಶತ್ರು ಸೈನಿಕರು 1998ರ ಚಳಿಗಾಲದಲ್ಲಿ ನಿಯಂತ್ರಣ ರೇಖೆಯ ಮೂಲಕ ಭಾರತದ ಭೂಪ್ರದೇಶವನ್ನು ಉಲ್ಲಂಘಿಸಿ ಒಳಬಂದರು ಮತ್ತು ಕಾರ್ಗಿಲ್ನ ದ್ರಾಸ್ ಮತ್ತು ಬಟಾಲಿಕ್ನಲ್ಲಿರುವ NH 1A ರ ಮೇಲಿರುವ ಭದ್ರವಾದ ರಕ್ಷಣೆಯನ್ನು ಆಕ್ರಮಿಸಿಕೊಂಡರು. ಹೆದ್ದಾರಿಯಲ್ಲಿನ ಎಲ್ಲಾ ಮಿಲಿಟರಿ ಮತ್ತು ನಾಗರಿಕ ಪ್ರದೇಶಗಳು, ಲಡಾಖ್ ಪ್ರದೇಶದ ವಲಯಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದರು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಷ್ಟಗಳನ್ನು ಎದುರಿಸಿದ ಭಾರತೀಯ ಸೈನಿಕರು, ಅಸಾಧ್ಯವಾದ ಭೂಪ್ರದೇಶ ಮತ್ತು ಕೆಟ್ಟ ಹವಾಮಾನ ಪರಿಸ್ಥಿತಿಗಳ ಅಪಾಯಗಳನ್ನು ನಿವಾರಿಸಿ ಹೋರಾಡಿದರು. ಕೆಚ್ಚೆದೆಯ ಭಾರತೀಯ ಧೀರ ಸೈನಿಕರು ಸುಭದ್ರವಾದ ರಕ್ಷಿತ ಪ್ರದೇಶಗಳ ಮೇಲೆ ಪಟ್ಟುಬಿಡದ ಶೌರ್ಯ ಮತ್ತು ಉತ್ಸಾಹದಿಂದ ಪ್ರತಿ ದಾಳಿಯನ್ನು ಪ್ರಾರಂಭಿಸಿದರು, ಹೀಗಾಗಿ ಪಾಕಿಸ್ತಾನ ವಿರುದ್ಧ ದಿಗ್ಭ್ರಮೆಗೊಳಿಸುವ ವಿಜಯವನ್ನು ಸಾಧಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications