
ಚಾವ್ಲಾ, ಕುಲದೀಪ್, ರಾಣಾ ಸ್ಪಿನ್ ಮೋಡಿ
ಟಿ 20ಯಲ್ಲಿ ರನ್ ವೇಗ ಹೆಚ್ಚಿಸಲು ಪವರ್ ಪ್ಲೇನ ಮೊದಲ ಆರು ಓವರ್ಗಳು ನಿರ್ಣಾಯಕ. ಆದರೆ, ರಾಜಸ್ಥಾನ ರಾಯಲ್ಸ್ ತಂಡ ಈ ಓವರ್ಗಳಲ್ಲಿ ದೊಡ್ಡ ಮೊತ್ತ ಕಲೆಹಾಕಲಿಲ್ಲ. ಬಿಗ್ ಬ್ಯಾಶ್ ಟಿ 20 ಬಿರುಸಿನ ಆಟವಾಡಿದ್ದ ಕಾರಣಕ್ಕೆ ಐಪಿಎಲ್ನ ಹರಾಜಿನಲ್ಲಿ ಗಮನ ಸೆಳೆದಿದ್ದ ಡಿಆರ್ಸಿ ಶಾರ್ಟ್, ಚಾವ್ಲಾ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ಎದುರಿಸಲು ಹೆಣಗಾಡಿದರು.
ಪಾರ್ಟ್ ಟೈಮ್ ಬೌಲರ್ ನಿತೀಶ್ ರಾಣಾ ಕೂಡ ಎರಡು ವಿಕೆಟ್ ಕಬಳಿಸಿ ರಾಜಸ್ಥಾನ ತಂಡಕ್ಕೆ ಆಘಾತ ನೀಡಿದರು. ಕೆಕೆಆರ್ನ ಪ್ರಮುಖ ಬೌಲರ್ ಸುನೀಲ್ ನರೇನ್, ತಮ್ಮ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟರೂ, ತಂಡಕ್ಕೆ ಹೊರೆಯಾಗಲಿಲ್ಲ.

ರಹಾನೆ ಸ್ಟಂಪ್ಔಟ್
ಒಂದೆಡೆ ಶಾರ್ಟ್, ರನ್ ಗಳಿಸಲು ಪರದಾಡುತ್ತಿದ್ದರೆ ನಾಯಕ ಅಜಿಂಕ್ಯ ರಹಾನೆ ಬಿರುಸಿನ ಆಟಕ್ಕೆ ಮೊರೆ ಹೋಗಿದ್ದರು. ರನ್ ವೇಗ ಹೆಚ್ಚಿಸುವ ವೇಳೆಯಲ್ಲೇ ನಿತೀಶ್ ರಾಣಾ ಬೌಲಿಂಗ್ನಲ್ಲಿ ನಾಯಕ ದಿನೇಶ್ ಕಾರ್ತಿಕ್ ಚುರುಕಿನ ಸ್ಟಂಪಿಂಗ್ಗೆ ರಹಾನೆ ಔಟ್ ಆದರು. ಎರಡೇ ಓವರ್ನ ಅಂತರದಲ್ಲಿ ಸಂಜು ಸ್ಯಾಮ್ಸನ್ ಕೂಡ ವಿಕೆಟ್ ಒಪ್ಪಿಸಿದರು. ಇದು ಕೆಕೆಆರ್ಗೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ನೆರವಾಯಿತು.

ರನ್ ವೇಗಕ್ಕೆ ಕಡಿವಾಣ
ಮಧ್ಯಮ ಕ್ರಮಾಂಕದ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಹುಲ್ ತ್ರಿಪಾಠಿ ಅವರಿಗೆ ಸಲೀಸಾಗಿ ಬೌಂಡರಿಗಳನ್ನು ಬಾರಿಸಲು ಸಾಧ್ಯವಾಗದಂತೆ ಶಿಸ್ತುಬದ್ಧ ದಾಳಿ ಸಂಘಟಿಸಿತು. ತಂಡದ ಮೊತ್ತ 180ರ ಗಡಿ ದಾಟಿದ್ದರೆ ಕೆಕೆಆರ್ಗೆ ಸವಾಲಾಗುವ ಸಾಧ್ಯತೆ ಇತ್ತು. ಆದರೆ ಬೌಲರ್ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಉತ್ತಮ ಫೀಲ್ಡಿಂಗ್ ಸಹ ಕೆಕೆಆರ್ಗೆ ನೆರವಾಯಿತು.

ಮೋಡಿ ಮಾಡಿದ ರಾಬಿನ್ ಉತ್ತಪ್ಪ
ಕೆಕೆಆರ್ ಆರಂಭ ಕೂಡ ಉತ್ತಮವಾಗಿರಲಿಲ್ಲ. ಮೊದಲ ಓವರ್ನಲ್ಲೇ ಕ್ರಿಸ್ ಲಿನ್ ಔಟಾದರು. ಆದರೆ ಅದು ಮೂರನೇ ಕ್ರಮಾಂಕದಲ್ಲಿ ಬಂದ ರಾಬಿನ್ ಉತ್ತಪ್ಪ ಮತ್ತು ಆರಂಭಿಕ ಆಟಗಾರ ಸುನೀಲ್ ನರೇನ್ ಮೇಲೆ ಪ್ರಭಾವ ಬೀರಲಿಲ್ಲ. ಇಬ್ಬರೂ ಸಲೀಸಾಗಿ ಬೌಂಡರಿಗಳನ್ನು ಬಾರಿಸಿದರು. ಪವರ್ಪ್ಲೇ ವೇಳೆಗೆ ತಂಡದ ಮೊತ್ತವನ್ನು ಐವತ್ತರ ಗಡಿ ದಾಟಿಸಿದ್ದರು. ಮುಂದೆ ಬೃಹತ್ ಗುರಿ ಇಲ್ಲದಿದ್ದರಿಂದ ಇಬ್ಬರೂ ಕಾಯ್ದುಕೊಂಡ ರನ್ರೇಟ್ ಸುಲಭವಾಗಿ ಗುರಿ ಮುಟ್ಟಲು ನೆರವಾಯಿತು.

ಗೆಲುವಿನ ದಡ ಮುಟ್ಟಿಸಿದ ಕಾರ್ತಿಕ್, ರಾಣಾ
ಉತ್ತಪ್ಪ ಔಟಾದಾಗ 7.3 ಓವರ್ಗಳಲ್ಲಿ 59 ರನ್ ಅವಶ್ಯಕತೆ ಇತ್ತು. ಇದು ಅಸಾಧ್ಯ ಗುರಿಯಾಗದಿದ್ದರೂ ಈ ಹಂತದಲ್ಲಿ ಒಂದೆರಡು ವಿಕೆಟ್ ಕಳೆದುಕೊಂಡಿದ್ದರೆ ಕೆಕೆಆರ್ ಸಂಕಷ್ಟಕ್ಕೆ ಒಳಗಾಗುತ್ತಿತ್ತು. ಹಿಂದಿನ ಪಂದ್ಯಗಳಲ್ಲಿಯೂ ಮಿಂಚಿದ್ದ ನಿತೀಶ್ ರಾಣಾ, ಮತ್ತೆ ತಮ್ಮ ಕೌಶಲ ಪ್ರದರ್ಶಿಸಿದರು. ಅವರ ಜತೆಗೆ ನಾಯಕ ದಿನೇಶ್ ಕಾರ್ತಿಕ್ ಇನ್ನಷ್ಟು ವೇಗದಿಂದ ರನ್ ಪೇರಿಸಿದರು. ಕೊನೆಯ ಓವರ್ವರೆಗೂ ಗುರಿಯನ್ನು ಉಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ.

ಸ್ಪಿನ್ಗೆ ಬೆದರಿದ ಶಾರ್ಟ್
ಟಿ 20 ಯಲ್ಲಿ ಬಿರುಸಿನ ಆಟಕ್ಕೆ ಹೆಸರಾದ ಆರ್ಸಿ ಶಾರ್ಟ್, ಸ್ಪಿನ್ನರ್ಗಳನ್ನು ಎದುರಿಸಲು ಒದ್ದಾಡಿದರು. ತಮಗೆ ದೊರೆತ ನಾಲ್ಕು ಅವಕಾಶಗಳಲ್ಲಿಯೂ ಅಷ್ಟೇನೂ ಉತ್ತಮ ಆಟವಾಡದ ಶಾರ್ಟ್, ರಾಜಸ್ಥಾನ ತಂಡಕ್ಕೆ ಬೇಕಿದ್ದ ಚುರುಕಿನ ಆರಂಭವನ್ನು ಒದಗಿಸಿಕೊಡಲಿಲ್ಲ. ಹೆಚ್ಚು ಡಾಟ್ ಬಾಲ್ಗಳನ್ನು ಮಾಡಿದ್ದು, ಒಟ್ಟಾರೆ ತಂಡದ ಮೊತ್ತಡ ಮೇಲೆ ಪರಿಣಾಮ ಬೀರಿತು.

ರಹಾನೆಗೆ ಸಿಗದ ಸಾಥ್
19 ಎಸೆತದಲ್ಲಿ 36 ರನ್ ಚಚ್ಚಿದ ಅಜಿಂಕ್ಯ ರಹಾನೆಗೆ ಮತ್ತೊಬ್ಬ ಓಪನರ್ ಶಾರ್ಟ್ ಅವರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ರಹಾನೆ ವಿಕೆಟ್ ಒಪ್ಪಿಸಿದ್ದು, ರಾಜಸ್ಥಾನ ತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿತು. ಆರ್ಸಿಬಿ ಎದುರು ಮಿಂಚಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ವೈಫಲ್ಯ ಕಂಡರು. ನಂತರ ಬಂದ ಬ್ಯಾಟ್ಸ್ಮನ್ಗಳು ಸಹ ದೊಡ್ಡ ಮೊತ್ತ ಕಲೆಹಾಕಲಿಲ್ಲ. ಕೆಕೆಆರ್ನ ಬಲಿಷ್ಠ ಬ್ಯಾಟಿಂಗ್ಗೆ ಈ ಗುರಿ ಸವಾಲಿನದ್ದಾಗಲಿಲ್ಲ.

ಬ್ಯಾಟಿಂಗ್ ಕ್ರಮಾಂಕದ ಸಮಸ್ಯೆ
ಇಂಗ್ಲೆಂಡ್ನ ಜೋಸ್ ಬಟ್ಲರ್ ಆರಂಭಿಕ ಆಟಗಾರನಾಗಿಯೂ ಆಡಿದವರು. ಸ್ಪಿನ್ ಹಾಗೂ ವೇಗದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಬಲ್ಲರು. ಆದರೆ, ಅವರನ್ನು ಆರನೇ ಕ್ರಮಾಂಕದಲ್ಲಿ ಕಳುಹಿಸುವ ತಪ್ಪನ್ನು ರಹಾನೆ ಪುನರಾವರ್ತಿಸಿದರು. ರಾಹುಲ್ ತ್ರಿಪಾಠಿ ಮತ್ತು ಬೆನ್ಸ್ಟೋಕ್ಸ್ ಅವರಿಂತ ಮುಂಚೆ ಬಟ್ಲರ್ ಮೈದಾನಕ್ಕೆ ಇಳಿದಿದ್ದರೆ, ಮತ್ತಷ್ಟು ರನ್ ಗಳಿಸುವ ಸಾಧ್ಯತೆ ಇತ್ತು. 18 ಎಸೆತದಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದ ಬಟ್ಲರ್, ಕೊನೆಯಲ್ಲಿ ಅಸಹಾಯಕರಾದರು.

ಆರಂಭ ಸದುಪಯೋಗಪಡಿಸಿಕೊಳ್ಳಲಿಲ್ಲ
ಕೆಕೆಆರ್ ಬ್ಯಾಟಿಂಗ್ನ ಮೂರನೇ ಎಸೆತದಲ್ಲೇ ಅಪಾಯಕಾರಿ ಬ್ಯಾಟ್ಸ್ಮನ್ ಕ್ರಿಸ್ ಲಿನ್ ಅವರನ್ನು ಕೃಷ್ಣಪ್ಪ ಗೌತಮ್ ಬೌಲ್ಡ್ ಮಾಡಿದರು. ತಮ್ಮ ಕೋಟಾದ ಮೊದಲ ಮೂರು ಓವರ್ಗಳಲ್ಲಿ ಗೌತಮ್ ಬಿಗುವಿನ ದಾಳಿ ನಡೆಸಿದ್ದರು. ಉಳಿದ ಬೌಲರ್ಗಳು ಅದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಎದುರಾಳಿಗಳಿಗೆ ಬೌಂಡರಿ, ಸಿಕ್ಸರ್ಗಳನ್ನು ಬಿಟ್ಟುಕೊಟ್ಟರು. ಹೆಚ್ಚು ಡಾಟ್ ಬಾಲ್ಗಳನ್ನು ಎಸೆಯುವ ಮತ್ತು ವಿಕೆಟ್ ಕೀಳುವ ಚುರುಕುತನ ರಾಜಸ್ಥಾನ ಬೌಲರ್ಗಳಲ್ಲಿ ಕಾಣಿಸಲಿಲ್ಲ. ಕೆಕೆಆರ್ನ ಬಿದ್ದ ಮೂರು ವಿಕೆಟ್ಗಳಲ್ಲಿ ಎರಡು ಗೌತಮ್ ಪಾಲಿಗೆ ಬಂದರೆ, ಇನ್ನೊಂದು ರನೌಟ್ ರೂಪದಲ್ಲಿ ದೊರಕಿತು. ನುರಿತ ಸ್ಪಿನ್ನರ್ಗಳ ಕೊರತೆ ಆರ್ಆರ್ ತಂಡಕ್ಕೆ ಬಾಧಿಸಿತು.

ಹರಾಜಿನಲ್ಲಿ ದುಬಾರಿ, ಬೌಲಿಂಗ್ನಲ್ಲೂ ದುಬಾರಿ
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಆಡದಿದ್ದರೂ, ದೇಶಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲರ್ ಎನಿಸಿಕೊಳ್ಳದಿದ್ದರೂ ಜಯದೇವ್ ಉನದ್ಕತ್ 11.50 ಕೋಟಿ ರೂಪಾಯಿಗೆ ರಾಜಸ್ಥಾನ ತಂಡಕ್ಕೆ ಹರಾಜಾಗಿದ್ದರು. ಅಷ್ಟು ದುಬಾರಿ ಮೊತ್ತ ಪಡೆದುಕೊಂಡಿದ್ದರೂ, ಉನದ್ಕತ್ ಬೌಲಿಂಗ್ ರಾಜಸ್ಥಾನ ತಂಡಕ್ಕೆ ಇದುವರೆಗೂ ಯಾವ ಗೆಲುವಿನಲ್ಲಿಯೂ ನೆರವಾಗಿಲ್ಲ. ಧವಳ್ ಕುಲಕರ್ಣಿ, ಬೆನ್ ಲಾಪ್ಲಿನ್, ಬೆನ್ ಸ್ಟೋಕ್ಸ್ ಕೂಡ ಹೆಚ್ಚು ರನ್ ನೀಡಿ, ವಿಕೆಟ್ ಕೀಳುವಲ್ಲಿ ವಿಫಲರಾದರು.


Click it and Unblock the Notifications