ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡ ಆಘಾತಕ್ಕೊಳಗಾಗಿದೆ. ಪಾಕಿಸ್ತಾನ ತಂಡದ ಅಭಿಮಾನಿಗಳು ಅಳುತ್ತಿದ್ದು, ಕ್ರಿಕೆಟ್ ತಜ್ಞರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಸ್ಟಾರ್ ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಟೀಮ್ ಇಂಡಿಯಾ 6 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಕಂಡಿದೆ. ಸೆಮಿಫೈನಲ್ನಲ್ಲಿ ಭಾರತ ತನ್ನ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಮತ್ತೊಂದೆಡೆ, ಪಾಕಿಸ್ತಾನ ತಂಡವು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಈಗ ಪಾಕಿಸ್ತಾಮ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ಬಂದು ನಿಂತಿದೆ.
ಭಾರತದ ವಿರುದ್ಧದ ಪಂದ್ಯ ಸೋತ ನಂತರ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಆಟಗಾರರು ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದುಬೈ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ ವಿರುದ್ಧದ ಸೋಲಿನ ನಂತರ, ತಮ್ಮ ತಂಡದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಬಹುತೇಕ ಮುಗಿದಿದೆ ಎಂದು ಮೊಹಮ್ಮದ್ ರಿಜ್ವಾನ್ ಒಪ್ಪಿಕೊಂಡಿದ್ದಾರೆ. ಜೊತೆಗೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟವನ್ನು ಹೊಗಳಿದ್ದಾರೆ.
ಪಾಕಿಸ್ತಾನ ವಿರುದ್ಧ 51ನೇ ಏಕದಿನ ಶತಕ ಮತ್ತು ನಾಲ್ಕನೇ ಶತಕ ಗಳಿಸಿದ ವಿರಾಟ್ ಕೊಹ್ಲಿಗೆ ಭಾರತದ ಗೆಲುವಿಗೆ ಮನ್ನಣೆ ನೀಡಿದ ರಿಜ್ವಾನ್, ಕೊಹ್ಲಿಯನ್ನು ಗುಣಗಾನ ಮಾಡಿದ್ದಾರೆ. 'ಅವರು ಎಷ್ಟು ಕಷ್ಟಪಟ್ಟು ಕೆಲಸ ಮಾಡಿದರು ಎಂದು ನನಗೆ ಆಶ್ಚರ್ಯವಾಯಿತು. ಅವರು ಫಾರ್ಮ್ನಲ್ಲಿಲ್ಲ ಎಂದು ಜಗತ್ತು ಹೇಳುತ್ತಿದೆ. ಆದರೆ ಇಷ್ಟು ದೊಡ್ಡ ಪಂದ್ಯದಲ್ಲಿ ಅವರು ಸುಲಭವಾಗಿ ರನ್ ಗಳಿಸಿದರು. ನಾವು ಅವರನ್ನು ಹೊರಗೆ ತರಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿದೆವು. ಆದರೆ ನಮಗೆ ಅದು ಸಾಧ್ಯವಾಗಲಿಲ್ಲ ಎಂದು ಕೊಹ್ಲಿ ಸಮರ್ಥದ ಬಗ್ಗೆ ಮಾತನಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ಪ್ರಯಾಣ ಬಹುತೇಕ ಮುಗಿದಿದೆ. ಈಗ ನಾವು ಇತರ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗಿದೆ. ಒಬ್ಬ ನಾಯಕನಾಗಿ ನನಗೆ ಇಂತಹ ಸಂದರ್ಭಗಳು ಇಷ್ಟವಾಗುವುದಿಲ್ಲ. ನಮ್ಮ ಹಣೆಬರಹವನ್ನು ನಾವೇ ಬರೆದಿಡಬೇಕಿತ್ತು ಎಂದು ರಿಜ್ವಾನ್ ಹೇಳಿದ್ದಾರೆ.
ನಾವು ಮೂರು ವಿಭಾಗಗಳಲ್ಲಿ ತಪ್ಪುಗಳನ್ನು ಮಾಡಿದ್ದೇವೆ. ಮಧ್ಯಮ ಓವರ್ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದೇವೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳನ್ನು ಸೋತಿತ್ತು. ತಮ್ಮ ತಂಡವು ತನ್ನ ತಪ್ಪುಗಳಿಂದ ಕಲಿಯಲು ಸಾಧ್ಯವಾಗಿಲ್ಲ ಎಂದು ರಿಜ್ವಾನ್ ತಿಳಿಸಿದ್ದಾರೆ.